ಬಿಬಿಸಿ ಸಾಕ್ಷ್ಯಚಿತ್ರ ವಿವಾದ: ಫೆಬ್ರವರಿ 6 ರಂದು ಕೇಂದ್ರದ ನಿಷೇಧದ ವಿರುದ್ಧದ ಮನವಿ ಆಲಿಸಲು SC ಒಪ್ಪಿಗೆ
ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಫೆಬ್ರವರಿ 6 ರಂದು ಸುಪ್ರೀಂಕೋರ್ಟ್ ಆಲಿಸಲು ಒಪ್ಪಿಗೆ ಸೂಚಿಸಿದೆ.
ದೆಹಲಿ ಜನವರಿ 30: ಪ್ರಧಾನಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸುವ ಕೇಂದ್ರದ ನಿರ್ಧಾರದ ವಿರುದ್ಧದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಫೆಬ್ರವರಿ 6 ರಂದು ಕೇಂದ್ರದ ನಿಷೇಧದ ವಿರುದ್ಧದ ಮನವಿ ಆಲಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.
ಗುಜರಾತ್ ಗಲಭೆ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರವನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ನ್ಯಾಯವಾದಿ ಎಂಎಲ್ ಶರ್ಮಾ ಅವರು ಶೀಘ್ರ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದಾರೆ.
'ಕೇಂದ್ರದ ನಡೆ ಅಸಾಂವಿಧಾನಿಕ, ದುರುದ್ದೇಶಪೂರಿತ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ. ಹೀಗಾಗಿ ಸಾಕ್ಷ್ಯಾಚಿತ್ರವನ್ನು ನಿಷೇಧಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಜನವರಿ 23ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು' ಎಂದು ಕೋರಿದ್ದಾರೆ.
ಜೊತೆಗೆ ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದ ಭಾಗ -1 ಹಾಗೂ ಭಾಗ-2 ಪರಿಶೀಲಿಸಬೇಕು. ಗುಜರಾತ್ ಗಲಭೆಗೆ ಕಾರಣರಾದವರು, ಗಲಭೆಯಲ್ಲಿ ನೇರವಾಗಿ ಹಾಗೂ ಪರೋಕ್ವವಾಗಿ ಶಾಮೀಲಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ ಸಂವಿಧಾನದತ್ತ ಮೂಲಭೂತ ಹಕ್ಕು. ಕೇಂದ್ರ ಸರ್ಕಾರ ಈ ಹಕ್ಕನ್ನು ಮೊಟಕುಗೊಳಿಸಬಹುದೇ ಎಂದೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಕೇಂದ್ರದ ನಿಷೇಧ
ಜಗತ್ತೀನಾದ್ಯಂತ ಪ್ರಧಾನಿ ಮೋದಿ ಕುರಿತ ಬಿಬಿಸಿ ಸಂಸ್ಥೆಯ ಸಾಕ್ಷ್ಯಚಿತ್ರದ ವ್ಯಾಪಕ ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರ ಬಿಬಿಸಿ ಡಾಕ್ಯುಮೆಂಟರಿ ಕುರಿತ ಟ್ವೀಟ್ ಗಳಿಗೆ ನಿರ್ಬಂಧ ಹೇರಿದೆ. ಗುಜರಾತ್ ಗಲಭೆ ವಿಚಾರವಾಗಿ ಪ್ರಧಾನಿ ಮೋದಿ ಕುರಿತ ವಿಮರ್ಶಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಕುರಿತ ಟ್ವೀಟ್ಗಳನ್ನು ಕೇಂದ್ರ ಸರ್ಕಾರ ಶನಿವಾರ ನಿರ್ಬಂಧಿಸಿದ್ದು, 2002ರ ಗುಜರಾತ್ ಗಲಭೆ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್ಗಳನ್ನು ತೆಗೆದುಹಾಕುವಂತೆ ಟ್ವಿಟರ್ ಮತ್ತು ಯೂಟ್ಯೂಬ್ಗೆ ಆದೇಶಿಸಿದೆ.
ಬಿಬಿಸಿ ಸಾಕ್ಷ್ಯಚಿತ್ರದ ವಿವಾದ ಸೃಷ್ಟಿಯಾಗಲು ಕಾರಣವೇನು?
ಈ ಡಾಕ್ಯುಮೆಂಟರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ಕುರಿತು ಇರುವ ಧೋರಣೆಯನ್ನ ಬಿಂಬಿಸಲಾಗಿದೆಯಂತೆ. 2002ರಲ್ಲಿ ಗುಜರಾತ್ನಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆ ಕುರಿತ ಮಾಹಿತಿ ಇದೆಯಂತೆ. ಎಲ್ಲಕ್ಕಿಂತಾ ಹೆಚ್ಚಾಗಿ ಈ ಗಲಭೆಯಲ್ಲಿ ಮೋದಿ ಅವರ ಪಾತ್ರದ ಉಲ್ಲೇಖ ಇದ್ಯಂತೆ. ಈ ಗಲಭೆ ನಡೆದಾಗ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿ ಆಗಿದ್ದರು. ಇನ್ನು ಗಲಭೆ ನಂತರ ನಡೆದ ತನಿಖೆಗಳ ಬಗ್ಗೆ ಕೂಡಾ ಡಾಕ್ಯುಮೆಂಟರಿಯಲ್ಲಿ ಉಲ್ಲೇಖ ಇದ್ಯಂತೆ.. ಇದಲ್ಲದೆ ಮೋದಿ ಅವರು ಪ್ರಧಾನಿ ಆದ ಮೇಲೆ ಕೈಗೊಂಡ ಆರ್ಟಿಕಲ್ 370 ರದ್ದತಿ ನಿರ್ಧಾರದ ಬಗ್ಗೆಯೂ ಪ್ರಸ್ತಾಪ ಇದೆ ಅಂತಾ ಖುದ್ದಾಗಿ ಬಿಬಿಸಿ ಸಂಸ್ಥೆಯೇ ಹೇಳಿದೆ.
ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವಿರೋಧ
ಕೇಂದ್ರ ಸರ್ಕಾರದ ನಿಷೇಧದ ನಡುವೆಯೂ ದೆಹಲಿ ವಿಶ್ವವಿದ್ಯಾನಿಲಯ, ಹೈದರಾಬಾದ್ ವಿಶ್ವವಿದ್ಯಾಲಯ, ಜವಹರ್ಲಾಲ್ ವಿಶ್ವವಿದ್ಯಾಲಯ ಸೇರಿದಂತೆ ಇತರ ವಿದ್ಯಾಲಯಗಳ ಕ್ಯಾಂಪಸ್ನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗಿದೆ. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI), ಕಾಂಗ್ರೆಸ್ನ ವಿದ್ಯಾರ್ಥಿ ವಿಭಾಗ, ಭೀಮ್ ಆರ್ಮಿ ಮತ್ತು ಹಲವಾರು ಇತರ ವಿದ್ಯಾರ್ಥಿ ಸಂಘಟನೆಗಳು ಭಾರತದ ಸ್ಕ್ರೀನಿಂಗ್ಗೆ ಕರೆ ನೀಡಿವೆ. ಹೀಗಾಗಿ ವಿವಿಧ ಕ್ಯಾಂಪಸ್ಗಳಲ್ಲಿ ಮೋದಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆದಿದೆ. ಹಲವೆಡೆ ಪ್ರದರ್ಶನ ಪರ ಮತ್ತು ವಿರೋಧದಿಂದಾಗಿ ಪ್ರತಿಭಟನೆಗಳು ಗಲಾಟೆಗಳು ನಡೆದಿವೆ. ಇದರಿಂದ ವಿಶ್ವವಿದ್ಯಾಲಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಪಣ
ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಪ್ರವೇಶವನ್ನು ನಿರ್ಬಂಧಿಸುವ ಕೇಂದ್ರದ ಕ್ರಮದ ನಂತರ ಎಡ-ಒಲವಿನ ವಿದ್ಯಾರ್ಥಿ ಸಂಘಟನೆಗಳು ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಪಣ ತೊಟ್ಟಿವೆ. ಮಂಗಳವಾರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರದ ಯೋಜಿತ ಪ್ರದರ್ಶನವನ್ನು ನಿಲ್ಲಿಸಲು ವಿಶ್ವವಿದ್ಯಾಲಯದ ಆಡಳಿತವು ವಿದ್ಯುತ್ ಮತ್ತು ಇಂಟರ್ನೆಟ್ ಅನ್ನು ಕಡಿತಗೊಳಿಸಿತು. ಈ ವೇಳೆ ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟದ ಆರೋಪ ಮಾಡುವ ಮೂಲಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸಾಕ್ಷ್ಯಚಿತ್ರ ವೀಕ್ಷಿಸುತ್ತಿದ್ದ ತಮ್ಮ ಮೇಲೆ ಎಬಿವಿಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಜೊತೆಗೆ ದೆಹಲಿ ವಿಶ್ವವಿದ್ಯಾಲಯದಲ್ಲೂ ಸಾಕ್ಷ್ಯಚಿತ್ರ ಪ್ರದರ್ಶನದ ವೇಳೆ ಹಲವು ಆರೋಪಗಳು ಕೇಳಿ ಬಂದಿವೆ. ಹೀಗಾಗಿ ವಿಷಯ ನ್ಯಾಯಾಲಾಯದ ಮೆಟ್ಟಿಲು ಏರಿದ್ದು. ಕೋರ್ಟ್ ಯಾವ ತೀರ್ಪು ನೀಡಲಿದೆ ಎಂದು ಕಾದು ನೋಡಬೇಕಿದೆ.