11 ರಾಜ್ಯಗಳ 100ಕ್ಕೂ ಅಧಿಕ ತಾಣಗಳ ಮೇಲೆ ಸಿಬಿಐ ದಾಳಿ
ನವದೆಹಲಿ, ಮಾರ್ಚ್ 26: ಚುನಾವಣಾ ನಿರತ ರಾಜ್ಯಗಳು ಸೇರಿದಂತೆ 11 ರಾಜ್ಯಗಳ 100 ಕ್ಕೂ ಅಧಿಕ ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಸುಮಾರು 3,700 ಕೋಟಿ ರು ಗೂ ಅಧಿಕ ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆದಿರುವ ವಿವಿಧ ರೀತಿಯ ವಂಚನೆ ಕುರಿತಂತೆ ಬಂದಿರುವ ದೂರುಗಳನ್ನು ಆಧಾರಿಸಿ 30ಕ್ಕೂ ಅಧಿಕ ಎಫ್ಐಆರ್ ಹಾಕಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಬಂದಿರುವ ದೂರಗಳನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ, ಕೆನೆರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ದೂರು ಬಂದಿದೆ ಎಂದು ಸಿಬಿಐ ವಕ್ತಾರ ಆರ್ ಸಿ ಜೋಶಿ ಹೇಳಿದ್ದಾರೆ.
ಕಾನ್ಪುರ್, ಗಾಜಿಯಾಬಾದ್, ಮಥುರಾ, ನೋಯ್ಡಾ, ಗುರುಗ್ರಾಮ, ಚೆನ್ನೈ, ತಿರುವರೂರ್, ವೆಲ್ಲೂರ್, ತಿರುಪ್ಪೂರ್, ಬೆಂಗಳೂರು, ಗುಂಟೂರು, ಹೈದರಾಬಾದ್, ಬಳ್ಳಾರಿ, ವಡೋದರಾ,ಕೋಲ್ಕತಾ, ಪಶ್ಚಿಮ ಗೋದಾವರಿ, ಸೂರತ್, ಮುಂಬೈ, ಭೋಪಾಲ್, ನಿಮಾಡಿ, ತಿರುಪತಿ, ವಿಶಾಖಪಟ್ಟಣಂ, ಅಹಮದಾಬಾದ್, ರಾಜ್ ಕೋಟ್, ಕರ್ನಾಲ್, ಜೈಪುರ ಹಾಗೂ ಶ್ರೀಗಂಗಾನಗರ ಸೇರಿದಂತೆ ವಿವಿಧೆಡೆ ದಾಳಿ ಮುಂದುವರೆದಿದೆ.
ಬ್ಯಾಂಕ್ ಸಾಲ ವಂಚನೆ, ಠೇವಣಿ ಮೊತ್ತ ದುರ್ಬಳಕೆ, ನಕಲಿ ದಾಖಲೆ ಬಳಕೆ, ಸಾಲ ಪಡೆಯುವಾಗ ಸುಳ್ಳು ದಾಖಲೆ ಒದಗಿಸುವುದು ಮುಂತಾದ ದೂರುಗಳು ಹೆಚ್ಚಾಗಿ ಬಂದಿವೆ.
ಉದ್ದೇಶಪೂರ್ವಕ ಸುಸ್ತಿದಾರ ಎಂದು ಕರೆಸಿಕೊಳ್ಳಲು ಅನೇಕ ರೀತಿ ತಂತ್ರಗಳನ್ನು ಅನುಸರಿಸಲಾಗುತ್ತಿದೆ. ಕೊನೆಗೆ ಅನುತ್ಪಾದಕ ಆಸ್ತಿ(NPA) ಎಂದು ಘೋಷಣೆ ಮಾಡುವಂತೆ ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ವಿಷಯ ಬಹಿರಂಗವಾಗಿದೆ.