ಬ್ಯಾಂಕ್ ಖಾತೆಗೆ, ಮೊಬೈಲ್ ಸಂಖ್ಯೆಗೆ ಜೋಡಣೆಯಾದ ಆಧಾರ್ ಏನ್ಮಾಡ್ತಾರೆ?
ನವದೆಹಲಿ, ಸೆಪ್ಟೆಂಬರ್ 26: ಬ್ಯಾಂಕ್ ಖಾತೆಗಾಗಲೀ ಅಥವಾ ಮೊಬೈಲ್ ಸಿಮ್ ಗಾಗಲೀ ಆಧಾರ್ ಕಡ್ಡಾಯ ಅಲ್ಲ ಎಂದು ಬುಧವಾರ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ. ಹಾಗಾದರೆ ಈಗಾಗಲೇ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದ್ದರೆ ಆಗೇನು ಮಾಡುವುದು ಎಂಬ ಪ್ರಶ್ನೆ ಬರುತ್ತದೆ.
ಅದಕ್ಕೆ ಉತ್ತರ: ಅಲ್ಲಿಂದ ಅವುಗಳನ್ನು ಬೇರ್ಪಡಿಸಬೇಕು. ಅರ್ಥಾತ್ ಡಿಲಿಂಕ್ ಮಾಡಬೇಕು. ಆಧಾರ್ ಕಾಯ್ದೆಯ ಕೆಲವು ವಿಚಾರಗಳ ಬಗ್ಗೆ ಸುಪ್ರೀಂ ಕೋರ್ಟ್ ನಿಂದ ಆಕ್ಷೇಪ ಬಂದರೂ ಪೂರ್ತಿಯಾಗಿ ಆಧಾರ್ ಕಾಯ್ದೆಯನ್ನೇ ರದ್ದು ಮಾಡಬೇಕು ಎಂಬುದನ್ನು ತಿರಸ್ಕರಿಸಿದೆ.
ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಚಿತ್ರ ಮಾಹಿತಿ
ಇದೇ ಸಂದರ್ಭದಲ್ಲಿ, ಯಾರಾದರೂ ಸರಿ ದತ್ತಾಂಶವನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಹಿಂದೆ ಐದು ವರ್ಷದವರೆಗೆ ಇಡಬಹುದಿತ್ತು. ಜತೆಗೆ ಆಧಾರ್ ಯೋಜನೆಯಲ್ಲಿ ಸಂಗ್ರಹವಾದ ದತ್ತಾಂಶಕ್ಕೆ ಅಗತ್ಯ ಪ್ರಮಾಣದ ಸುರಕ್ಷತೆ ಇದೆ ಎಂದು ಕೂಡ ಅಭಿಪ್ರಾಯ ಪಟ್ಟಿದೆ.
ಶ್ರೀಕೃಷ್ಣ ಆಯೋಗದ ವರದಿಯಲ್ಲಿ ಹೇಳಿರುವಂತೆ ದತ್ತಾಂಶ ಸುರಕ್ಷತೆಗೆ ಕೇಂದ್ರ ಸರಕಾರ ಕಠಿಣವಾದ ಕಾನೂನು ರಚಿಸಬೇಕು ಎಂದು ಕೋರ್ಟ್ ಹೇಳಿದೆ. ಈಗಾಗಲೇ ಮೊಬೈಲ್ ಸಂಖ್ಯೆಯೊಂದಿಗೆ ಜೋಡಣೆಯಾದ ಆಧಾರ್ ಮಾಹಿತಿಯನ್ನು ಟೆಲಿಕಾಂ ಕಂಪನಿಗಳು ತಕ್ಷಣದಿಂದಲೇ ತೆಗೆಯುವಂತೆ ಐವರು ನ್ಯಾಯಮೂರ್ತಿಗಳ ಪೈಕಿ ಒಬ್ಬರಾದ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ಇಂದು ಸುಪ್ರೀಂ ಕೋರ್ಟ್ ನೀಡಿದ 3 ಐತಿಹಾಸಿಕ ತೀರ್ಪುಗಳ ಸುತ್ತ...
ಅದಾಗಲೇ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಿಮ್ ಸಂಖ್ಯೆಗೆ ಜೋಡಣೆಯಾದ ಆಧಾರ್ ನ ಹೇಗೆ ಬೇರ್ಪಡಿಸುತ್ತಾರೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಟೆಲಿಕಾಂ ಕಂಪನಿಗಳು ಹಾಗೂ ಬ್ಯಾಂಕ್ ಗಳು ಜವಾಬ್ದಾರಿ ತೆಗೆದುಕೊಂಡು ಡಿಲಿಂಕ್ ಮಾಡಬೇಕು. ಇದು ಒಂದು ಕಡೆಯಾದರೆ, ಈಗಾಗಲೇ ಇರುವ ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ ಆ ದತ್ತಾಂಶವನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳುವಂತೆಯೇ ಇಲ್ಲ. ಆದ್ದರಿಂದ ಡಿಲಿಂಕ್ ಮಾಡಲೇಬೇಕಾಗುತ್ತದೆ.