ಬೆಂಗಳೂರು ರೈಲಿಗೆ ಬೆಂಕಿ: ಶಾಸಕರ ಸಂಬಂಧಿ ಸಾವು
ಬೆಂಗಳೂರಿನಿಂದ ಹೊರಟು ಮಹಾರಾಷ್ಟ್ರದ ನಾಂದೆಡ್ ಗೆ ತಲುಪಬೇಕಿದ್ದ Bangalore-Nanded express ರೈಲು ಅನಂತಪುರ ಬಳಿ ಶನಿವಾರ ಮುಂಜಾನೆ ಮೂರೂವರೆ ಗಂಟೆಯಲ್ಲಿ ದುರಂತಕ್ಕೀಡಾಗಿದೆ. ಮಾರ್ಗ ಮಧ್ಯೆಯ ಸಣ್ಣ ರೈಲು ನಿಲ್ದಾಣವಾದ ಕೊತ್ತಚೆರುವು ರೈಲ್ವೆ ನಿಲ್ದಾಣದಲ್ಲಿ D1 AC coach ಬೋಗಿ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ರೈಲು ಶುಕ್ರವಾರ ರಾತ್ರಿ 10.45ಕ್ಕೆ ಬೆಂಗಳೂರಿನಿಂದ ಹೊರಟಿತ್ತು.
ಪಕ್ಕದ ಬೋಗಿಗೂ ಬೆಂಕಿ ತಗುಲಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಪ್ರಮಾದ ಸಂಭವಿಸಿರಬಹುದು ಎನ್ನಲಾಗಿದೆ. ಹವಾನಿಯಂತ್ರಿತ ಎಸಿ ಕೋಚ್ ಇದಾಗಿದ್ದು, ಸುಮಾರು 57 ಮಂದಿ ಪ್ರಯಾಣಿಕರು ಬೋಗಿಯಲ್ಲಿದ್ದರು. ಸದ್ಯದ ಮಾಹಿತಿ ಪ್ರಕಾರ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.
ಮೊದಲೇ ಧನುರ್ಮಾಸದ ಚಳಿಗಾಲ. ನಿದ್ದೆ ತುಸು ಹೆಚ್ಚೇ. ಹಾಗಾಗಿ ನಿದ್ದೆಯಲ್ಲಿದ್ದಾಗಲೇ ಅಷ್ಟೂ ಮಂದಿ ಅಗ್ನಿಗಾಹುತಿಯಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿವೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಸಾವು ನೋವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಗಾಯಾಳುಗಳನ್ನು ಪುಟ್ಟಪರ್ತಿ ಸಾಯಿಬಾಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕರ ಸಂಬಂಧಿ ಸಾವು: ಗುಲ್ಬರ್ಗಾದ ಸೇಡಂ ತಾಲೂಕಿನ ಅಡಕಿ ಜಿಪಂ ಕ್ಷೇತ್ರದ ಮಾಜಿ ಸದಸ್ಯ ಭೀಮಯ್ಯ ಅವರು ರೈಲು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇವರು ರಾಯಚೂರು ಜಿಲ್ಲೆ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ಅವರ ಸಮೀಪ ಸಂಬಂಧಿ.
ರೈಲ್ವೆ ಸಚಿವ ಖರ್ಗೆ ಪರಿಹಾರ ಘೋಷಣೆ: ಅಗ್ನಿ ದುರಂತಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸಾವಿಗೀಡಾದವರ ವಿವರ ಇನ್ನೂ ಲಭ್ಯವಾಗಿಲ್ಲ. ದುರಂತದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಇದೊಂದು ದುರ್ದೈವ ಸಂಗತಿ ಎಂದಿದ್ದಾರೆ. ತಕ್ಷಣಕ್ಕೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರವನ್ನು ಸಚಿವ ಖರ್ಗೆ ಅವರು ಗುಲ್ಬರ್ಗಾದಲ್ಲಿ ಘೋಷಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Helpline
numbers:
ಬೆಂಗಳೂರು:
080-22354108,
22259271,
22156554
ಪುಟ್ಟಪರ್ತಿ:
08555-280125
Prasanti
Nilayam
station
number
08555280125