ರಹಸ್ಯ ಟೇಪ್ : ಏರ್ ಸ್ಟ್ರೈಕ್ ನಂತರ ಉಗ್ರರ ದೇಹ ಸುಟ್ಟು ನದಿಯಲ್ಲಿ ಎಸೆಯಲಾಯಿತೆ?
ನವದೆಹಲಿ, ಮಾರ್ಚ್ 16 : ಬಾಲಕೋಟ್ ಮೇಲೆ ಭಾರತೀಯ ವಾಯು ಸೇನೆ ನಡೆಸಿದ ಏರ್ ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಸಿಗಬಾರದೆಂದು, ದಾಳಿಯಲ್ಲಿ ಸತ್ತ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ದೇಹಗಳನ್ನು ಪಾಕಿಸ್ತಾನ ಸುಟ್ಟಹಾಕಿ, ದೇಹಗಳನ್ನು ನದಿಗೆಸೆಯಿತೆ?
ಈ ಬಗ್ಗೆ ರಹಸ್ಯ ಮೂಲವೊಂದರಿಂದ ಮೂರು ನಿಮಿಷಗಳ ಆಡಿಯೋ ಸಿಕ್ಕಿದ್ದು, ಅದರಲ್ಲಿ ಪಾಕಿಸ್ತಾನದ ಗೋಸುಂಬೆ ಬಣ್ಣವೆಲ್ಲ ಬಯಲಾಗಿದೆ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ. ಆ ಟೇಪ್ ತನ್ನ ಬಳಿಯಿದೆ ಎಂದು ರಿಪಬ್ಲಿಕ್ ಹೇಳಿಕೊಂಡಿದೆ.
ಬಾಲಕೋಟ್ ದಾಳಿ ಯಶಸ್ವಿ ಎನ್ನುವುದಕ್ಕೆ ಸಿಕ್ಕಿತು ಮತ್ತೊಂದು ಪುರಾವೆ
ಫೆಬ್ರವರಿ 26ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿ, ಉಗ್ರ ಸಂಘಟನೆತ ತರಬೇತಿ ನೆಲೆಗಳನ್ನೆಲ್ಲ ಧ್ವಂಸ ಮಾಡಿತ್ತು. ದಾಳಿ ಯಶಸ್ವಿಯಾಗಿದೆ ಎಂದು ಐಎಎಫ್ ಹೇಳಿದ್ದರೂ ಭಾರತದ ವಿರೋಧ ಪಕ್ಷಗಳು ಸಾಕ್ಷ್ಯ ಕೇಳುತ್ತಿದ್ದವು.
ಆ ದಾಳಿಯಲ್ಲಿ ಇನ್ನೂರಕ್ಕೂ ಹೆಚ್ಚು ಉಗ್ರರು ಹತರಾಗಿರುವುದಕ್ಕೆ ಮೊದಲ ಸಾಕ್ಷ್ಯ ಸಿಕ್ಕಿದ್ದು ಮೊಬೈಲ್ ಸಿಗ್ನಲ್ ಟ್ರಾಕ್ ಮಾಡುವ ಮೂಲಕ. ಎರಡನೇ ಸಾಕ್ಷ್ಯ ಸಿಕ್ಕಿದ್ದು, ಇನ್ನೂರಕ್ಕೂ ಹೆಚ್ಚು ದೇಹಗಳನ್ನು ಸ್ಥಳಾಂತರಿಸಿದ ಬಗ್ಗೆ ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದಾಗಿ ಅಮೆರಿಕದ ಚಳವಳಿಗಾರ ಹೇಳಿದ್ದರು.
ನೂರಾರು ಜೈಷ್ ಉಗ್ರರು ಹತ್ಯೆಯಾಗಿದ್ದಕ್ಕೆ ಸಿಕ್ಕಿದೆ ಬಲವಾದ ಸಾಕ್ಷ್ಯ!
ಬಾಲಕೋಟ್ ದಾಳಿಯ ಪ್ರತ್ಯಕ್ಷದರ್ಶಿಯ ಹೇಳಿಕೆ ಹೀಗಿದೆ :
* ಆ ದಾಳಿಯಲ್ಲಿ ಎಷ್ಟು ಜನ ಸತ್ತರು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಕೂಡಲೆ ಆ ಪ್ರದೇಶವನ್ನು ಆಕ್ರಮಿಸಿಕೊಂಡ ಪಾಕ್ ಸೇನೆ, ಸ್ಥಳೀಯರ ಬಾಯಿಮುಚ್ಚಿ, ಬಲವಂತವಾಗಿ ಅವರ ಮೊಬೈಲುಗಳನ್ನೆಲ್ಲ ಕಿತ್ತುಕೊಂಡಿತು.
* ಅಲ್ಲಿ ತೆಗೆಯಲಾದ ಮೃತದೇಹಗಳ ಚಿತ್ರಗಳು ಮತ್ತು ವಿಡಿಯೋಗಳು ಹಂಚಿಕೊಳ್ಳಬಾರದು ಎಂಬ ಉದ್ದೇಶದಿಂದ ಬಾಲಕೋಟ್ ನಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕೂಡಲೆ ಕಟ್ ಮಾಡಲಾಯಿತು. ಆದರೂ ಕೆಲವೆಡೆ ಈ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
* ಗಾಯಗೊಂಡ ಯಾವುದೇ ಉಗ್ರರಿಗೆ ಚಿಕಿತ್ಸೆ ನೀಡದಂತೆ ವೈದ್ಯರಿಗೆ ನಿರ್ಬಂಧ ಹೇರಲಾಯಿತು.
* ಕಾರುಗಳಿಂದ ಪೆಟ್ರೋಲ್ ತರಿಸಿಕೊಂಡು ಭಾರೀ ಪ್ರಮಾಣದಲ್ಲಿ ದೇಹಗಳ ಮೇಲೆ ಸುರಿದು ಸುಟ್ಟುಹಾಕಲಾಯಿತು.
* ಎಲ್ಲ ಸಾಕ್ಷ್ಯಗಳು ನಾಶವಾಗುವಂತೆ ಹಲವಾರು ದೇಹಗಳನ್ನು ಹತ್ತಿರದ ಕುನ್ಹಾರ್ ನದಿಯಲ್ಲಿ ಎಸೆಯಲಾಯಿತು.
* ಈ ದಾಳಿಯಲ್ಲಿ ಸತ್ತ ಬಹುತೇಕರ ದೇಹಗಳು ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ್ದು.
* ಐಎಎಫ್ ದಾಳಿಯಲ್ಲಿ ಬದುಕುಳಿದವರನ್ನು ವಾಜಿರಿಸ್ತಾನ್-ಅಫ್ಘಾನಿಸ್ತಾನದ ಗಡಿಗೆ ಕಳುಹಿಸಲಾಗಿದೆ.