ಬದರೀನಾಥ್: ಕನ್ನಡಿಗ ಪುರೋಹಿತನ ಬರ್ಬರ ಹತ್ಯೆ?
ಡೆಹ್ರಾಡೂನ್, ಜು 28: ಚಾರ್ ಧಾಮ್ ಪವಿತ್ರ ಕ್ಷೇತ್ರಗಳಲ್ಲೊಂದಾದ ಬದರೀನಾಥ್ ದೇವಾಲಯದ ಅರ್ಚಕ, ಕರ್ನಾಟಕ ಮೂಲದ ಪ್ರಕಾಶ್ ಭಟ್ (50) ನಿಗೂಢ ರೂಪದಲ್ಲಿ ಸಾವನ್ನಪ್ಪಿದ್ದಾರೆ. ಅವರ ಮೃತ ದೇಹ ಭಾನುವಾರ (ಜು 27) ಅವರ ಮನೆಯಲ್ಲಿ ಪತ್ತೆಯಾಗಿದೆ.
ದೇವ ಪ್ರಯಾಗದ ತೀರ್ಥ ಪುರೋಹಿತ್ ಆವರಣದಲ್ಲಿರುವ ಅವರ ಮನೆಯ ಕೊಠಡಿಯಲ್ಲಿ ಪ್ರಕಾಶ್ ಭಟ್ ಶವ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿವೆ. ದೇಹದ ಹಲವು ಕಡೆ ರಕ್ತ ಹೊರಬಂದಿದ್ದು, ಕೋಣೆಯಲ್ಲೂ ರಕ್ತದ ಕಲೆಯಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶನಿವಾರ (ಜು 26) ತಡರಾತ್ರಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ, ಹಲವಾರು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬದರೀನಾಥ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ದೇವಪ್ರಯಾಗದಲ್ಲಿ ನೆಲೆಸಿದ್ದ ಅರ್ಚಕ ಪ್ರಕಾಶ್ ಭಟ್ ಶನಿವಾರದಿಂದ ನಾಪತ್ತೆಯಾಗಿದ್ದರು. ಅವರ ಪುತ್ರ ಮತ್ತು ದೇವಾಲಯದ ಇತರರು ಇವರಿಗಾಗಿ ಹುಡುಕಾಟ ನಡೆಸಿದ್ದರು. ಅದು ಪ್ರಯೋಜನವಾಗದಿದ್ದಾಗ, ಕೊನೆಗೆ ಅವರ ಮನೆಯ ಕೊಠಡಿಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಪ್ರಕಾಶ್ ಭಟ್ ಅವರ ಶವವಿದ್ದ ಕೊಠಡಿಯಿಂದ ಕೆಲವು ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಹಿಂದೂ ಪವಿತ್ರ ಕ್ಷೇತ್ರದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮಾಹಿತಿ ನೀಡಲಿದ್ದೇವೆ ಎಂದು ಪೊಲೀಸ್ ಆಯುಕ್ತ ಎಸ್ ಕೆ ಮೀನಾ ತಿಳಿಸಿದ್ದಾರೆ. (IANS ವರದಿ)