ಭಾರಿ ಮಳೆಗೆ ಕೊಚ್ಚಿ ಹೋದ ಬದ್ರಿನಾಥ್ ಎನ್ಎಚ್- 7 ಹೆದ್ದಾರಿ
ಡೆಹರಾಡೂನ್, ಜುಲೈ. 30: ಭಾರತೀಯ ಹವಾಮಾನ ಇಲಾಖೆ ಉತ್ತರಾಖಂಡದ ಹಲವು ಜಿಲ್ಲೆಗಳಿಗೆ 'ಆರೆಂಜ್' ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ಡೆಹ್ರಾಡೂನ್, ನೈನಿತಾಲ್, ತೆಹ್ರಿ, ಪೌರಿ, ಚಂಪಾವತ್, ಚಮೋಲಿ, ಪಿಥೋರಗಢ್ ಮತ್ತು ಬಾಗೇಶ್ವರ್ ಇವೇ ಮೊದಲಾದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಭಾರಿ ಮಳೆಯಿಂದಾಗಿ ಲಂಬಗಡದಲ್ಲಿರುವ ಖಚ್ಡಾ ಡ್ರೈನ್ನಲ್ಲಿ ನೀರಿನ ಏರಿಕೆಯಾಗಿದೆ. ಬದರಿನಾಥ್ NH-7 ನ ಒಂದು ಭಾಗ ಕೊಚ್ಚಿಹೋಗಿದೆ. ಶುಕ್ರವಾರ ಹೆದ್ದಾರಿಯ ಎರಡೂ ಬದಿಗಳಲ್ಲಿ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು ಎಂದು ಚಮೋಲಿ ಜಿಲ್ಲಾಡಳಿತದ ವರದಿ ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ರಾಜ್ಯದಲ್ಲಿ ಆಗಸ್ಟ್ 2 ರವರೆಗೆ ಉತ್ತರಾಖಂಡದಲ್ಲಿ ಪ್ರತ್ಯೇಕ ಭಾರಿ ಮಳೆ ಮತ್ತು ಗುಡುಗು ಅಥವಾ ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ರಾತ್ರಿ ಮುನ್ಸೂಚನೆ ನೀಡಿದೆ. ಇದರೊಂದಿಗೆ ಭಾನುವಾರದವರೆಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 4- 5 ದಿನಗಳಲ್ಲಿ ಮಧ್ಯ, ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಭಾರತದಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ತಿಂಗಳ ಆರಂಭದಲ್ಲಿ, ಬದರಿನಾಥ್ ಕೇದಾರನಾಥ ಹೆದ್ದಾರಿಯಲ್ಲಿ ರಾತ್ರಿಯ ಮಳೆ ಮತ್ತು ಅವಶೇಷಗಳ ಸಂಗ್ರಹದಿಂದಾಗಿ ಚಾರ್ ಧಾಮ್ ಯಾತ್ರೆಗೆ ತೊಂದರೆಯಾಯಿತು. ಯಾತ್ರಾರ್ಥಿಗಳಿಗೆ ಮಾರ್ಗವನ್ನು ತಿರುಗಿಸಲು ಜಿಲ್ಲಾಡಳಿತವನ್ನು ಒತ್ತಾಯಿಸಬೇಕಾಯಿತು.
ಎರಡು ಮೂರು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಸಿರೋಬ್ಗಢ್ನಲ್ಲಿ ಎನ್ಎಚ್ 58 ರ ರಸ್ತೆಯು ವಿಪತ್ತು ಪೀಡಿತವಾಗಿದೆ. ಅಲ್ಲದೆ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದ್ದು, ಕೇದಾರನಾಥ ಹೆದ್ದಾರಿಯಲ್ಲಿನ ನೈಲ್ನಲ್ಲಿ ಸಂಚಾರಕ್ಕಾಗಿ ರಸ್ತೆಯನ್ನು ಮುಚ್ಚಲಾಗಿದೆ.
ಕಳೆದ ವಾರ, ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದಲ್ಲಿ ಭಾರಿ ಮಳೆಗೆ ಭಾರತೀಯ ಹವಾಮಾನ ಇಲಾಖೆ ಯ ಎಚ್ಚರಿಕೆಯ ದೃಷ್ಟಿಯಿಂದ ಜಾಗರೂಕರಾಗಿರಲು ಮತ್ತು ಯಾವುದೇ ವಿಪತ್ತು ತರಹದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ
ಉತ್ತರಾಖಂಡದ ಉತ್ತರಕಾಶಿಯಲ್ಲಿ ಘಟನೆಯೊಂದರಲ್ಲಿ ಶುಕ್ರವಾರ ಚರಂಡಿ ತುಂಬಿ ಹರಿದಿದ್ದರಿಂದ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದರು. ಭಾರಿ ಮಳೆಯ ನಂತರ ಚರಂಡಿ ದಾಟಲು ಅವರ ಶಿಕ್ಷಕರು ಸಹಾಯ ಮಾಡಿದರು. ಉತ್ತರಕಾಶಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭೂಕುಸಿತ ಉಂಟಾಗಿ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ಜೊತೆಗೆ 14 ಗ್ರಾಮೀಣ ರಸ್ತೆಗಳನ್ನು ಈಗ ನಿರ್ಬಂಧಿಸಲಾಗಿದೆ.
ಭೂಕುಸಿತದಿಂದ ಗ್ರಾಮೀಣ ರಸ್ತೆಗಳಿಗೂ ನಿರ್ಬಂಧ
ಬೆಟ್ಟಗಳಿಂದ ಬಂಡೆಗಳು ಅಡ್ಡಾದಿಡ್ಡಿಯಾಗಿ ಉರುಳುತ್ತಿರುವುದರಿಂದ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದರ್ಕೋಟ್ ಬಳಿ ನಿರ್ಬಂಧಿಸಲಾಗಿದೆ. ಹಿಮಾಲಯ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಜೊತೆಗೆ, 14 ಗ್ರಾಮೀಣ ರಸ್ತೆಗಳನ್ನು ಭೂಕುಸಿತದಿಂದ ರಸ್ತೆಗಳ ಮೇಲೆ ತಂದ ಅವಶೇಷಗಳ ರಾಶಿಯಿಂದ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪರ್ವತ ಅವಶೇಷ
ಈ ತಿಂಗಳ ಆರಂಭದಲ್ಲಿ ಶಿವಾಲಿಕ್ ಬೆಟ್ಟಗಳ ಮೇಲೆ ಸುರಿದ ಭಾರಿ ಮಳೆಯ ನಂತರ ಸಹರಾನ್ಪುರ ಜಿಲ್ಲೆಯ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪರ್ವತ ಅವಶೇಷಗಳು ಬಿದ್ದವು. ಆಗ ಗಂಟೆಗಳ ಕಾಲ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ದಟ್ ಕಾಳಿ ಮಂದಿರ ಮತ್ತು ಮೊಹಂಡ್ ನಡುವಿನ ಹೆದ್ದಾರಿಯಲ್ಲಿ ಬಂಡೆಗಳು ರಸ್ತೆಯ ಮಧ್ಯದಲ್ಲಿ ಬಿದ್ದಿದ್ದರಿಂದ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಬೇಕಾಯಿತು. ಇದರಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಪಿಟಿಐ ವರದಿ ಮಾಡಿತ್ತು.
ತಕ್ಷಣವೇ ಪರಿಹಾರ ಕಾರ್ಯ ಆರಂಭಿಸಲು ಸೂಚನೆ
ಉತ್ತರಾಖಂಡ ವಿಪತ್ತು ತಗ್ಗಿಸುವಿಕೆ ಮತ್ತು ನಿರ್ವಹಣಾ ಕೇಂದ್ರದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ 2014 ರಿಂದ 2020 ರವರೆಗಿನ ನೈಸರ್ಗಿಕ ವಿಕೋಪಗಳಲ್ಲಿ ಸುಮಾರು 600 ಜನರು ಸಾವನ್ನಪ್ಪಿದ್ದಾರೆ ಮತ್ತು 500 ಜನರು ಗಾಯಗೊಂಡಿದ್ದಾರೆ. ವಿಪತ್ತು ನಿರ್ವಹಣೆ ಸೇರಿದಂತೆ ವಿವಿಧ ಇಲಾಖೆಗಳು ಜಾಗೃತರಾಗಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ಧಾಮಿ ಸೂಚಿಸಿದ್ದಾರೆ. ಯಾವುದೇ ಅನಾಹುತ ಸಂಭವಿಸಿದಲ್ಲಿ ತುರ್ತಾಗಿ ಸ್ಪಂದಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ತಕ್ಷಣವೇ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Recommended Video