ಸೂಕ್ಷ್ಮ ಜಿಲ್ಲೆಗಳಲ್ಲಿ ಭದ್ರತೆ ಬಿಗಿಗೊಳಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ
ನವದೆಹಲಿ, ಸೆಪ್ಟೆಂಬರ್ 29: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಲಕ್ನೋದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಸೆ. 30ರಂದು ಪ್ರಕಟಿಸಲಿದ್ದು, ದೇಶದಾದ್ಯಂತ ಅತ್ಯಧಿಕ ಕೋಮು ಸೂಕ್ಷ್ಮತೆಯ ಹಾಗೂ ಸೂಕ್ಷ್ಮ ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ನ್ಯಾಯಾಲಯದ ತೀರ್ಪು ಸಂಘರ್ಷಗಳಿಗೆ ಎಡೆ ಮಾಡಿಕೊಡುವ ಸಂಭವ ಇರುವುದರಿಂದ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ನ್ಯಾಯಾಲಯದ ತೀರ್ಪು ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಎರಡೂ ಕಡೆಗಳ ಕಿಡಿಗೇಡಿಗಳು ತೀರ್ಪನ್ನು ಕೋಮು ಬಣ್ಣಕ್ಕೆ ತಿರುಗಿಸುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಬಾಬ್ರಿ ಮಸೀದಿ ಧ್ವಂಸ ಕೇಸ್: ಆರೋಪಿಗಳಿಗೆ ಹಾಜರಾತಿಯಿಂದ ವಿನಾಯತಿ?
ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂಮಿ ಹಕ್ಕು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಅನೇಕ ಮುಸ್ಲಿಂ ಸಂಘಟನೆಗಳಲ್ಲಿ ಅಸಮಾಧಾನವಿದೆ. ಅವರು ಈಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ನಿರೀಕ್ಷಿಸುತ್ತಿವೆ. ಅವರ ಪರವಾದ ತೀರ್ಪು ಬಾರದೆ ಹೋದರೆ ಅವರು ಪ್ರತಿಭಟನೆಗೆ ಇಳಿಯುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ.
ಸೆ.30ರಂದು ಬಾಬ್ರಿ ಮಸೀದಿ ತೀರ್ಪು, ಅಡ್ವಾಣಿ ಹಾಜರಿಗೆ ಸೂಚನೆ
ಈ ತೀರ್ಪಿನ ಸಂದರ್ಭದಲ್ಲಿ ಸಿಎಎ, ಎನ್ಪಿಆರ್ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಗಳಿಗೆ ಮರು ಜೀವ ನೀಡುವ ಅವಕಾಶಕ್ಕಾಗಿ ಅನೇಕ ತೀವ್ರಗಾಮಿ ಗುಂಪುಗಳು ಕಾಯುತ್ತಿವೆ. ಮಸೀದಿ ಧ್ವಂಸ ಪ್ರಕರಣದ ಆರೋಪಿಗಳು ಬಿಡುಗಡೆಯಾಗಲಿದ್ದಾರೆ ಎಂದು ಹಿಂದೂ ಸಂಘಟನೆಗಳು ಭರವಸೆ ಹೊಂದಿವೆ. ಕೆಲವು ರಾಜ್ಯಗಳಲ್ಲಿ ಕೋಮು ಸಂಗತಿಗಳು ನಿಯಂತ್ರಣದಲ್ಲಿ ಇಲ್ಲದ ಕಾರಣ ಸೂಕ್ಷ್ಮ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಗಳು ಭದ್ರತೆಯನ್ನು ಹೆಚ್ಚು ಮಾಡಬೇಕು. ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾಕಾರಿ ಸಂಗತಿಗಳನ್ನು ಪೋಸ್ಟ್ ಮಾಡುವವರ ಮೇಲೆ ಕಣ್ಣಿಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.