ಅಲೋಪತಿ ಬಗ್ಗೆ ಹೇಳಿಕೆ: ಪ್ರಕರಣ ರದ್ದತಿಗೆ ಕೋರಿ ರಾಮ್ದೇವ್ ಸುಪ್ರೀಂಗೆ ಮೊರೆ
ನವದೆಹಲಿ, ಜೂ.23: ಅಲೋಪತಿ ಔಷಧದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ದೇಶಾದ್ಯಂತ ವೈದ್ಯರನ್ನು ಕೆರಳಿಸಿದ್ದ ಯೋಗ ಗುರು ರಾಮ್ದೇವ್ ಈ ವಿಚಾರದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ದೇಶಾದ್ಯಂತ ದಾಖಲಿಸಲಾಗಿರುವ ಎಫ್ಐಆರ್ಗಳನ್ನು ಒಂದಾಗಿ ಜೋಡಿಸಿ ದೆಹಲಿಗೆ ವರ್ಗಾಯಿಸಬೇಕು ಎಂದು ಕೂಡಾ ಮನವಿ ಮಾಡಿದ್ದಾರೆ.
ಕಳೆದ ತಿಂಗಳು, ಕೋವಿಡ್ನ ಎರಡನೇ ಅಲೆಯು ದೇಶದಾದ್ಯಂತ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಈ ನಡುವೆ ರಾಮ್ದೇವ್ ವೈರಸ್ ವಿರುದ್ಧ ಅಲೋಪತಿ ಔಷಧಿಗಳ ಪರಿಣಾಮಕಾರಿತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅಲೋಪತಿಯನ್ನು 'ಮೂರ್ಖತನದ ವಿಜ್ಞಾನ' ಎಂದು ಟೀಕಿಸಿದ್ದಾರೆ.
ಬಾಬಾ ರಾಮದೇವ್ ವಿರುದ್ದ ಜೂನ್ 1 ರಂದು 'ಕಪ್ಪು ದಿನ'ಕ್ಕೆ ಕರೆ ನೀಡಿದ ವೈದ್ಯರ ಸಂಘ
ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿತ್ತು. "ಚಿಕಿತ್ಸೆ ಅಥವಾ ಆಮ್ಲಜನಕವನ್ನು ಪಡೆಯದ ಕಾರಣ ಮರಣ ಹೊಂದಿದವರಿಗಿಂತ ಹೆಚ್ಚು ಅಲೋಪತಿ ಔಷಧಿಗಳಿಂದಾಗಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ," ಎಂದು ಬಾಬಾರಾಮ್ ದೇವ್ ಹೇಳಿದ್ದರು.
ಅಲೋಪತಿ ಚಿಕಿತ್ಸೆಯನ್ನು 'ಮೂರ್ಖತನದ ವಿಜ್ಞಾನ' ಎಂದು ಟೀಕಿಸಿದ್ದ ರಾಮ್ದೇವ್ ಹೇಳಿಕೆಯನ್ನು ಖಂಡಿಸಿ ಕಾನೂನು ಮೊರೆ ಹೋಗಿತ್ತು. ರಾಮ್ದೇವ್ಗೆ ಲೀಗಲ್ ನೋಟಿಸ್ ಕಳುಹಿಸಿತ್ತು. ಹಾಗೆಯೇ ಉತ್ತರ ಪ್ರದೇಶದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಬಾಬಾ ರಾಮ್ದೇವ್ ವಿರುದ್ಧ 1000 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿತ್ತು. ಹಾಗೆಯೇ ರಾಮ್ದೇವ್ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಗೂ ವೈದ್ಯರ ಸಂಘ ಪತ್ರ ಬರೆದಿತ್ತು.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ರಾಮ್ದೇವ್ ಹೇಳಿಕೆ ಹಿಂಪಡೆದು 25 ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಆದರೆ ಆ ಬಳಿಕ, ''ನನ್ನನ್ನು ಬಂಧಿಸುವ ಧೈರ್ಯ ಯಾರಿಗೂ ಇಲ್ಲ. ಅವರ ಅಪ್ಪನಿಂದಲೂ ನನ್ನನ್ನು ಬಂಧಿಸಲಾಗದು," ಎಂದು ಹೇಳಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್ ಮುಖಂಡ ಗೌರವ್ ಪಾಂಡಿ ಟ್ವೀಟರ್ನಲ್ಲಿ ಶೇರ್ ಮಾಡಿದ್ದರು.
ಲಸಿಕೆ ಪಡೆಯುತ್ತೇನೆ, ವೈದ್ಯರು ದೇವರ ದೂತರು: ಬಾಬಾ ರಾಮ್ದೇವ್ ಯೂಟರ್ನ್
ಅಲೋಪತಿ ವೈದ್ಯ ಪದ್ದತಿಯ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಬಾಬಾ ರಾಮ್ದೇವ್ಗೆ ಹೇಳಿದ್ದ ಐಎಂಎ ಷರತ್ತಿನೊಂದಿಗೆ ಬಾಬಾ ರಾಮ್ದೇವ್ಗೂ ಆಹ್ವಾನ ನೀಡಿತ್ತು. ಐಎಂಎ ಉತ್ತರಾಖಂಡದ ಅಧ್ಯಕ್ಷ ಡಾ. ಅಜಯ್ ಖನ್ನಾ ಬಾಬಾ ರಾಮ್ದೇವ್ಗೆ ಪತ್ರವನ್ನು ಬರೆದಿದ್ದರು. ಈ ಚರ್ಚೆ ಮುಖಾಮುಖಿಯಾಗಿರಲಿ ಮತ್ತು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಆಹ್ವಾನಿಸಿ ಅವರ ಉಪಸ್ಥಿತಿಯಲ್ಲಿ ನಡೆಯಲಿ ಎಂದು ಐಎಂಎ ಹೇಳಿತ್ತು.
ಅಷ್ಟೇ ಅಲ್ಲದೇ ಯೋಗ ಗುರು ಬಾಬಾ ರಾಮದೇವ್ ಹೇಳಿಕೆಯ ವಿರುದ್ದ ದೇಶಾದ್ಯಂತ ವೈದ್ಯರು ಜೂನ್ 1 ರಂದು ಕಪ್ಪು ದಿನವನ್ನು ಆಚರಿಸಿದ್ದರು. ರಾಷ್ಟ್ರವ್ಯಾಪಿ ಹಲವಾರು ಆಸ್ಪತ್ರೆಗಳ ಸಿಬ್ಬಂದಿಗಳು ರಾಮ್ದೇವ್ ವಿರುದ್ದ ಘೋಷಣೆ ಬರೆದಿರುವ ಪ್ಲಕ್ ಕಾರ್ಡ್ಗಳನ್ನು ಪ್ರದರ್ಶಿಸಿದ್ದು ಪತಂಜಲಿ ಆಯುರ್ವೇದ ಸಂಸ್ಥಾಪಕ ರಾಮ್ದೇವ್ನನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಆ ಬಳಿಕ ದೆಹಲಿ ಮೆಡಿಕಲ್ ಅಸೊಸಿಯೇಶನ್ ಹೂಡಿದ್ದ ಮೊಕದ್ದಮೆಯ ಹಿನ್ನೆಲೆಯಲ್ಲಿ ಯೋಗಗುರು ಬಾಬಾ ರಾಮ್ದೇವ್ಗೆ ದೆಹಲಿ ಹೈಕೋರ್ಟ್ ಗುರುವಾರ ಸಮನ್ಸ್ ಜಾರಿಗೊಳಿಸಿತ್ತು.
''ನನಗೆ ಕೊರೊನಾ ಲಸಿಕೆಯ ಅಗತ್ಯವಿಲ್ಲ, ಯೋಗ ಹಾಗೂ ಆಯುರ್ವೇದದ ರಕ್ಷಣೆ ನನಗಿದೆ,'' ಎಂದು ಕೂಡಾ ರಾಮ್ದೇವ್ ಹೇಳಿಕೊಂಡಿದ್ದರು. ಆದರೆ ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಯೂಟರ್ನ್ ಹೊಡೆದ ರಾಮ್ದೇವ್, "ಲಸಿಕೆಯ ಎರಡೂ ಡೋಸ್ಗಳನ್ನು ಪಡೆಯಿರಿ ಜೊತೆಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಕೂಡ ಪಡೆಯಿರಿ. ಈ ಮೂಲಕ ಕೊರೊನಾದಿಂದ ಒಬ್ಬ ವ್ಯಕ್ತಿ ಕೂಡ ಸಾಯುವುದಿಲ್ಲ. ಇವುಗಳು ನಿಮಗೆ ಆ ಪ್ರಮಾಣದ ರಕ್ಷಣೆಯನ್ನು ನೀಡುತ್ತದೆ," ಎಂದು ಮಾಧ್ಯಮಕ್ಕೆ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನೀವು ಲಸಿಕೆ ಪಡೆಯುತ್ತೀರಾ ಎಂದು ಮಾಧ್ಯಮ ಪ್ರಶ್ನಿಸಿದಾಗ, "ಆದಷ್ಟು ಶೀಘ್ರವಾಗಿ ಪಡೆಯುತ್ತೇನೆ," ಎಂದು ಹೇಳಿದ್ದು, ವೈದ್ಯರನ್ನು "ಭೂಮಿಯ ಮೇಲಿನ ದೇವರ ದೂತರು" ಎಂದಿದ್ದರು.
(ಒನ್ಇಂಡಿಯಾ ಸುದ್ದಿ)