ಮುಲಾಯಂ ಅಖಿಲೇಶ್ ನಾಟಕಕ್ಕೆ ಕೊನೆಗೂ ಬಿದ್ದ ಪರದೆ
ಲಕ್ನೋ, ಡಿಸೆಂಬರ್ 31: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರನ್ನುಪಕ್ಷದಿಂದ ಹೊರ ಹಾಕಿ ಪಕ್ಷದಲ್ಲಿ ಕುತೂಹಲ ಮೂಡಿಸಿದ್ದರು. ಶನಿವಾರ ಮಧ್ಯಾಹ್ನ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ನಾಟಕಕ್ಕೆ ಕೊನೆ ಪರದೆ ಎಳೆದರು.
ಶುಕ್ರವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿದ ಮುಲಾಯಂ ಸಿಂಗ್ ಯಾದವ್ ಗರಂ ಆಗಿದ್ದು, ತಮ್ಮ ಪುತ್ರ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ರಾಮ್ಗೋಪಾಲ್ ಯಾದವ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಹೊರ ಹಾಕಿರುವುದಾಗಿ ನಿರ್ಧಾರ ಪಕ್ರಕಟಿಸಿದ್ದರು.[ಅಖಿಲೇಶ್ ಉಚ್ಚಾಟನೆಯ ಹಿಂದೆ ಮುಲಾಯಂ ಎರಡನೇ ಕುಟುಂಬದ ಕೈವಾಡ?]
ನಿರ್ಧಾರ ಪ್ರಕಟಗೊಂಡ 24 ಗಂಟೆಗಳ ಕಾಲ ಸಮಾಜವಾದಿ ಪಕ್ಷದಲ್ಲಿ ಸಂಚಲನವೇ ಮೂಡಿತ್ತು. ಅಖಿಲೇಶ್ ಯಾದವ್ ಮತ್ತು ರಾಮ್ ಗೋಪಾಲ್ ಯಾದವ್ ಅವರಿಗೆ ಮುಂದೇನು ಮಾಡಬೇಕು ಎಂದೆನಿಸಿದರೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ರಾಜ್ಯದಲ್ಲಿ ಅಧಿಕಾರ ಕಳೆದು ಕೊಳ್ಳಬೇಕಾ ಎಂಬ ಭಯ ಆವರಿಸಿತ್ತು. ಇನ್ನು ಶನಿವಾರ ಅಖಿಲೇಶ್ ಯಾದವ್ ವಿಧಾನಸಭೆಯನ್ನು ವಿಸರ್ಜನೆ ಮಾಡತ್ತಾರಂತೆ ಎಂಬ ವದಂತಿಗಳು ಕೇಳಿಬಂದಿದ್ದವು.
ಅಖಿಲೇಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ತೀರ್ಮಾನವನ್ನು ವಾಪಸ್ ತೆಗೆದುಕೊಳ್ಳುವಂತೆ ಕೆಲವು ನಾಯಕರು ಮುಲಾಯಂ ಸಿಂಗ್ ಯಾದವ್ ಅವರನ್ನು ಒತ್ತಾಯಿಸಿದ್ದರು[ಅಖಿಲೇಶ್ ರನ್ನು ಪಕ್ಷದಿಂದ ಉಚ್ಚಾಟಿಸಿದ ಮುಲಾಯಂ ಸಿಂಗ್]
ಶನಿವಾರ ಬೆಳಗ್ಗೆ 9ಗಂಟೆಗೆ ಮುಲಾಯಂ ಅವರ ಮನೆಯಲ್ಲಿ ವರಿಷ್ಠರ ಸಭೆಯನ್ನು ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಸಚಿವ ಅಜಂ ಖಾನ್ ಅವರು ಕರೆದಿದ್ದರು. ಸಭೆಯಲ್ಲಿ ಅಖಿಲೇಶ್ ಮತ್ತು ರಾಮ್ ಗೋಪಾಲ್ ಯಾದವ್ ಅವರನ್ನು ಪಕ್ಷಕ್ಕೆ ಕರೆಸಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು. ಮುಲಾಯಂ ಅವರೇ ಪಕ್ಷಕ್ಕೆ ವಾಪಸ್ ಕರೆಸಿಕೊಂಡಿರುವುದಾಗಿ ತಿಳಿಸಿದರು.