ಅಯೋಧ್ಯೆ ರಾಮಮಂದಿರ ಭೂಮಿಪೂಜೆಗೆ ಮೋದಿ: ಓವೈಸಿ ಎಚ್ಚರಿಕೆ
ಹೈದರಾಬಾದ್, ಜುಲೈ 28: ಇದೇ ಬರುವ ಆಗಸ್ಟ್ ಐದರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆಯುವ ಭೂಮಿಪೂಜೆಗೆ ಪ್ರಧಾನಿ ಮೋದಿ ಭಾಗವಹಿಸುತ್ತಿರುವುದಕ್ಕೆ, ಸಂಸದ ಮತ್ತು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಓವೈಸಿ, "ಭೂಮಿ ಪೂಜೆಗೆ ಹಾಜರಾದರೆ, ಅದು ಪ್ರಧಾನಮಂತ್ರಿ ಸಾಂವಿಧಾನಿಕ ಹುದ್ದೆಯ ಸ್ಪಷ್ಟ ಉಲ್ಲಂಘನೆಯಾಗಲಿದೆ. ಜಾತ್ಯಾತೀತತೆ ಸಂವಿಧಾನ ರಚನೆಯ ಒಂದು ಭಾಗ ಎನ್ನುವುದನ್ನು ಪ್ರಧಾನಿಗಳು ಮರೆಯಬಾರದು"ಎಂದು ಓವೈಸಿ ಎಚ್ಚರಿಕೆ ನೀಡಿದ್ದಾರೆ.
ರಾಮಮಂದಿರ ಭೂಮಿ ಪೂಜೆಗೆ ಉದ್ಧವ್ ಠಾಕ್ರೆಗೆ ಆಹ್ವಾನವಿಲ್ಲ: ವಿಶ್ವ ಹಿಂದೂ ಪರಿಷತ್
"ಸುಮಾರು ನಾಲ್ಕು ನೂರು ವರ್ಷಗಳಿಂದ ಬಾಬ್ರಿ, ಅಯೋಧ್ಯೆಯಲ್ಲಿ ಇತ್ತು ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ. 1992ರಲ್ಲಿ ಕ್ರಿಮಿನಲ್ ಜನಸಮೂಹ ಅದನ್ನು ಕೆಡವಿತು"ಎಂದು ಓವೈಸಿ, ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಅಯೋಧ್ಯೆಯಲ್ಲಿನ ಮಸೀದಿಯನ್ನು ಪುರಾತನ ರಾಮ ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಬಾಬರಿ ಮಸೀದಿಯನ್ನು, 1992ರ ಡಿಸೆಂಬರ್ ನಲ್ಲಿ ಕರಸೇವಕರು ನೆಲಸಮ ಮಾಡಿದ್ದರು.
ಓವೈಸಿಯವರ ಈ ಹೇಳಿಕೆ, ಟ್ವಿಟ್ಟರ್ ನಲ್ಲಿ ಭಾರೀ ಪರ,ವಿರೋಧ ಚರ್ಚೆಗೆ ಕಾರಣವಾಗಿದೆ. 'ಸುಪ್ರೀಂಕೋರ್ಟ್ ಅಂತಿಮ ಆದೇಶ ನೀಡಿದ್ದಾಗಿದೆ. ಹಾಗಾಗಿ, ಈ ವಿಚಾರದಲ್ಲಿ ಪ್ರಧಾನಿ ಭಾಗವಹಿಸಬೇಕೋ, ಬೇಡವೋ ಎನ್ನುವ ಯಾವುದೇ ಗೊಂದಲವಿಲ್ಲ'ಎನ್ನುವ ಪ್ರತಿಕ್ರಿಯೆ ಬಂದಿದೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 5 ಕೋಟಿ ರು ಕೊಟ್ಟ ಬಾಪು
ಭೂಮಿಪೂಜೆಗೆ ಹಿಂದೂ ಸಾಧುಸಂತರ ಜೊತೆಗೆ, ಮುಸ್ಲಿಂ ಧಾರ್ಮಿಕ ಮುಖಂಡರಿಗೂ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಹ್ವಾನವನ್ನು ಕಳುಹಿಸಿದೆ. ಆದರೆ, ಯಾವುದೇ, ವಿರೋಧ ಪಕ್ಷದ ಮುಖಂಡರಿಗೆ, ಇದುವರೆಗೆ ಆಹ್ವಾನ ಹೋಗಿಲ್ಲ.