ಅಯೋಧ್ಯಾ ವಿವಾದ: ಸುಪ್ರೀಂಕೋರ್ಟ್ ತೀರ್ಪಿಗೆ ಸುನ್ನಿ ವಕ್ಫ್ ಮಂಡಳಿ ಅತೃಪ್ತಿ
Recommended Video
ನವದೆಹಲಿ, ನವೆಂಬರ್ 9: ಅಯೋಧ್ಯಾದಲ್ಲಿನ ವಿವಾದಾತ್ಮಕ ಭೂಮಿಯನ್ನು ನೋಡಿಕೊಳ್ಳಲು ಮೂರು ತಿಂಗಳ ಒಳಗೆ ಟ್ರಸ್ಟ್ ರಚಿಸಿ ಅದರ ನಿರ್ವಹಣೆಗೆ ಬಿಡುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಜತೆಗೆ ಅರ್ಜಿದಾರರಲ್ಲಿ ಒಬ್ಬರಾದ ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯಾದ ಯಾವ ಭಾಗದಲ್ಲಿಯಾದರೂ ಐದು ಎಕರೆ ಪರ್ಯಾಯ ಭೂಮಿಯನ್ನು ಒದಗಿಸುವಂತೆ ಸಹ ನಿರ್ದೇಶನ ನೀಡಿದೆ.
ಇದರೊಂದಿಗೆ ಸುದೀರ್ಘ ಕಾಲದಿಂದ ನಡೆಯುತ್ತಿದ್ದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ಕಾನೂನು ಸಮರ ಅಂತ್ಯಗೊಂಡಿದೆ. ಆದರೆ ಈ ತೀರ್ಪಿನ ಬಗ್ಗೆ ಸುನ್ನಿ ವಕ್ಫ್ ಮಂಡಳಿ ಬೇಸರ ವ್ಯಕ್ತಪಡಿಸಿದೆ.
ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ
ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುನ್ನಿ ವಕ್ಫ್ ಮಂಡಳಿ ಪರ ವಕೀಲ ಜಫರ್ಯಾಬ್ ಜಿಲಾನಿ, 'ನಾವು ತೀರ್ಪನ್ನು ಗೌರವಿಸುತ್ತೇವೆ. ಆದರೆ ಇದರಿಂದ ನಮಗೆ ತೃಪ್ತಿ ಸಿಕ್ಕಿಲ್ಲ. ತೀರ್ಪಿನ ಅಂಶಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ತಿಳಿಸಿದರು.
ತೀರ್ಪಿನಲ್ಲಿ ವಿರೋಧಾಭಾಸಗಳಿವೆ
ಮಂಡಳಿಗೆ ಪ್ರತ್ಯೇಕ ಜಾಗ ನೀಡಿಕೆಯ ತೀರ್ಪು ಸರಿಯಲ್ಲ. ಸುಪ್ರೀಂಕೋರ್ಟ್ ಪ್ರತಿಪಾದಿಸಿದ ಕೆಲವು ಅಂಶಗಳನ್ನು ಒಪ್ಪಲಾಗದು. ಇದನ್ನು ನ್ಯಾಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ತೀರ್ಪಿನಲ್ಲಿ ಅನೇಕ ವಿರೋಧಭಾಸಗಳಿವೆ. ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಐದು ಎಕರೆ ನೀಡುವ ಸೂಚನೆಯಿಂದ ನಮಗೆ ಯಾವುದೇ ಬೆಲೆ ಸಿಕ್ಕಿಲ್ಲ. ಇದನ್ನು ನಾವು ಪರಾಮರ್ಶೆಗೆ ಬಯಸುತ್ತೇವೆ ಎಂದು ಹೇಳಿದರು.
ಕಾನೂನು ಆಯ್ಕೆ ಪರಿಶೀಲನೆ
'ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ ಮತ್ತು ಶಾಂತಿಗಾಗಿ ಮನವಿ ಮಾಡುತ್ತೇವೆ. ಎಲ್ಲಿಯೂ ಯಾವುದೇ ಪ್ರತಿಭಟನೆ ನಡೆಯಬಾರದು. ಇದು ಸೋಲಲ್ಲ. ಯಾವುದೇ ಕಾನೂನು ಪ್ರಕ್ರಿಯೆ ಆಯ್ಕೆಗಳಿದ್ದರೂ ನಾವು ಅದನ್ನು ಪ್ರಯತ್ನಿಸುತ್ತೇವೆ. ಪ್ರಾಂಗಣದ ಭೂಮಿಯನ್ನು ಬೇರೆ ವಾದಿಗಳ ಕಡೆಗೆ ನೀಡಿರುವ ತೀರ್ಪು ತೃಪ್ತಿದಾಯಕವಾಗಿಲ್ಲ ಎನ್ನುವುದು ಸತ್ಯ. ಪರಾಮರ್ಶೆಯ ವರದಿ ಸಲ್ಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚಿಸಲಿದ್ದೇವೆ' ಎಂದು ತಿಳಿಸಿದರು.
Ayodhya Verdict Live Updates: ವಿವಾದಿತ ಭೂಮಿ ಸರ್ಕಾರೇತರ ಸಂಸ್ಥೆಗೆ
ಎಐಎಂಪಿಎಲ್ಬಿ ಅಸಮಾಧಾನ
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಕೂಡ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಈ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ. ಇದರ ವಿರುದ್ಧ ನಾವು ಕಾನೂನಾತ್ಮಕ ಮಾರ್ಗಗಳನ್ನು ಪರಿಶೀಲಿಸಲಿದ್ದೇವೆ. ಆದೇಶವನ್ನು ಪರಿಶೀಲಿಸಲಿದ್ದು, ಈ ಬಗ್ಗೆ ಮರುಪರಿಶೀಲನೆಗೆ ಮುಂದಾಗಬೇಕೇ ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ. ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಯಾವುದೇ ರೀತಿಯ ಮೆರವಣಿಗೆ, ಪ್ರದರ್ಶನಗಳನ್ನು ನಡೆಸಬೇಡಿ ಎಂದು ಜನರಿಗೆ ಮಂಡಳಿ ಮನವಿ ಮಾಡಿದೆ.
ಅಯೋಧ್ಯಾ ತೀರ್ಪಿನ ವೇಳೆ ಸಿಜೆಐ ಉಲ್ಲೇಖಿಸಿದ ಅಂಶಗಳೇನು?
ತೀರ್ಪು ಸ್ವಾಗತಿಸಿದ ಅಜ್ಮೇರ್ ದರ್ಗಾ
ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಅಜ್ಮೀರ್ ದರ್ಗಾದ ಮುಖಂಡರು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ. 'ನ್ಯಾಯಾಂಗ ಪರಮೋಚ್ಚ ಮತ್ತು ಎಲ್ಲರೂ ಅದರ ನಿರ್ಧಾರವನ್ನು ಗೌರವಿಸಬೇಕು. ಇಡೀ ದೇಶ ಇಂದು ಭಾರತದ ಕಡೆ ನೋಡುತ್ತಿದೆ. ಹೀಗಾಗಿ ನಾವು ಒಗ್ಗಟ್ಟಿನ ಪ್ರದರ್ಶನ ಮಾಡುವ ಅಗತ್ಯವಿದೆ ಎಂದು ದರ್ಗಾ ದೀವಾನ್ ಜೈನುಲ್ ಅಬೆದಿನ್ ಅಲಿ ಖಾನ್ ಹೇಳಿದ್ದಾರೆ.