ಶ್ರೀ ರವಿಶಂಕರ್ ಭೇಟಿಯಿಂದ ಬಗೆಹರಿಯುತ್ತಾ ಅಯೋಧ್ಯಾ ವಿವಾದ?
ಅಯೋಧ್ಯೆ, ನವೆಂಬರ್ 15: ಅಯೋಧ್ಯೆ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಅಧ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ನ.16 ರಂದು ಅಯೋಧ್ಯೆಗೆ ತೆರಳಲಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಸಮಯ ಪ್ರಶಸ್ತ : ಶ್ರೀಶ್ರೀ
ಇಂದು(ನ.15) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ಅವರು, 'ಇದೊಂದು ಸೌಜನ್ಯದ ಭೇಟಿ' ಎಂದಿದ್ದಾರೆ.(ಚಿತ್ರಕೃಪೆ: ಟ್ವಿಟ್ಟರ್)
ಇದೇ ಡಿಸೆಂಬರ್ 5 ರಂದು ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಅಂತಿಮ ವಿಚಾರಣೆ ನಡೆಯಲಿದೆ. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ನಂತರ ರಾಮಜನ್ಮಭೂಮಿ ವಿಚಾರ ಮತ್ತಷ್ಟು ಸುದ್ದಿಯಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಈಗಾಗಲೇ 137 ಕೋಟಿ ರೂ. ಖರ್ಚು ಮಾಡಿ ಅಡಿಗಲ್ಲು ಹಾಕಲಾಗಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಅಧ್ಯಕ್ಷ ವಾಸಿಮ್ ರಿಜ್ವಿ ಅವರನ್ನು ಈಗಾಗಲೇ ಶ್ರೀ ರವಿಶಂಕರ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
CM @myogiadityanath receives Gurudev @SriSri ahead of #Ayodhya visit pic.twitter.com/Be0PPCusXH
— Swamiji (@AOLSwamiji) November 15, 2017
ರಾಮ ಮಂದಿರ ನಿರ್ಮಾಣದ ಕುರಿತು ಆಸ್ಥೆ ವಹಿಸುತ್ತಿರುವ ಶ್ರೀ ರವಿಶಂಕರ್ ಗುರೂಜಿ ಅವರನ್ನು ಕಾಂಗ್ರೆಸ್ 'ಸರ್ಕಾರದ ಏಜೆಂಟ್' ಎಂದು ಕರೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ರವಿಶಂಕರ್ ಗುರೂಜಿ, ನಾನು ಯಾರ ಏಜೆಂಟ್ ಕೂಡ ಅಲ್ಲ. ಯಾವುದೇ ಪಕ್ಷದ ಕುರಿತೂ ನನಗೆ ಒಲವಾಗಲೀ, ವಿರೋಧವಾಗಲೀ ಇಲ್ಲ. ಹಲವು ದಶಕಗಳಿಂದ ಸಮಸ್ಯೆಯಾಗಿ ನಿಂತಿರು ಈ ವಿವಾದವನ್ನು ಬಗೆಹರಿಸುವ ಸಣ್ಣ ಪ್ರಯತ್ನ ಇದು ಅಷ್ಟೇ. ಇದರಿಂದ ನನಗ್ಯಾವ ಲಾಭವೂ ಇಲ್ಲ" ಎಂದಿದ್ದಾರೆ.
ಇದು ಮೊದಲ ಸಲವೇನಲ್ಲ. ರವಿಶಂಕರ್ ಗುರೂಜಿಯವರು ಅಯೋಧ್ಯಾ ವಿವಾದವನ್ನು ಬಗೆಹರಿಸುವುದಕ್ಕಾಗಿ 2001 ರಲ್ಲೇ ಪ್ರಯತ್ನಿಸಿ ವಿಫಲರಾಗಿದ್ದರು. ಇದೀಗ ನ.16 ರಂದು ಅಯೋಧ್ಯಗೆ ತೆರಳಿ ಎಲ್ಲಾ ಪ್ರಮುಖರನ್ನೂ ಮಾತನಾಡಿಸಿ, ವಿವಾದ ಬಗೆಹರಿಸುವ ಯತ್ನದಲ್ಲಿ ಗುರೂಜಿ ಇದ್ದಾರೆ.