'ಮಂದಿರ, ಮಸೀದಿ ಇತಿಹಾಸ ಬದಲಾಯಿಸಲು ಆಗಲ್ಲ, ಈಗಿನ ವಿವಾದ ಮುಖ್ಯ'
ನವದೆಹಲಿ, ಮಾರ್ಚ್ 06: ಅಯೋಧ್ಯೆ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟಿನ ಐವರು ಸದಸ್ಯರ ನ್ಯಾಯಪೀಠವು ಇಂದು ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿದೆ. ಮಂದಿರ -ಮಸೀದಿ ಮಾಲಿಕತ್ವ ವಿವಾದದ ಶಾಶ್ವತ ಪರಿಹಾರಕ್ಕೆ ಮಧ್ಯಸ್ಥಿಕೆ ನಡೆಸುವ ಕುರಿತ ತೀರ್ಪು ಹೊರಬರಬೇಕಿದೆ.
ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ಅವರ ನೇತೃತ್ವದ ಪೀಠವು ಇಂದು ನಡೆಸಿದ ವಿಚಾರಣೆ ಸಂದರ್ಭದಲ್ಲಿ ಬಂದ ಅಭಿಪ್ರಾಯಗಳ ಸಂಗ್ರಹ ಇಲ್ಲಿದೆ. ಜಸ್ಟೀಸ್ ಬೊಬ್ಡೆ ಅವರಲ್ಲದೆ, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರು ನ್ಯಾಯಪೀಠದಲ್ಲಿದ್ದಾರೆ.
25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್
"ಹಿಂದೆ ನಡೆದದ್ದರ ಬಗ್ಗೆ, ಯಾರು ಅತಿಕ್ರಮಿಸಿದ್ದರು, ಯಾವ ರಾಜ, ದೇಗುಲವೋ ಮಸೀದಿಯೋ ಎಂಬುದರ ಮೇಲೆ ನಮಗೆ ನಿಯಂತ್ರಣವಿಲ್ಲ. ನಮಗೆ ತಿಳಿದಿರುವುದು ಸದ್ಯದ ಪರಿಸ್ಥಿತಿ ಮಾತ್ರ. ಈ ವಿವಾದ ಬಗೆಹರಿಯಬೇಕು ಎಂಬುದಷ್ಟೇ ನಮ್ಮ ಆದ್ಯತೆ," ಎಂದು ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದರು.
ಅಯೋಧ್ಯೆ ವಿವಾದ: ಸಂಧಾನದ ಕುರಿತ ತೀರ್ಪು ಕಾಯ್ದಿರಿಸಿದ ಸುಪ್ರೀಂ
ಇದು ಖಾಸಗಿ ಆಸ್ತಿಯ ಪರಭಾರೆ ವಿಷಯವಲ್ಲ. ಮಧ್ಯಸ್ಥಿಕೆ ಮಾತುಕತೆ ಮೂಲಕ ಪಾಲುದಾರರು ಪರಿಹಾರ ಕಂಡುಕೊಳ್ಳುವ ಶೇ1ರಷ್ಟು ಅವಕಾಶ ಸಿಕ್ಕರೂ ನೀಡಬೇಕಾಗುತ್ತದೆ ಎಂದು ಜಸ್ಟೀಸ್ ಬೊಬ್ಡೆ ಅಭಿಪ್ರಾಯಪಟ್ಟಿದ್ದಾರೆ.
ವಾದ ಮಂಡಿಸಿದ ವಕೀಲ ರಾಜೀವ್ ಧವನ್
ಇದಕ್ಕೂ ಮೊದಲು ಮುಸ್ಲಿಂ ಗುಂಪಿನ ಪರವಾಗ ವಾದ ಮಂಡಿಸಿದ ವಕೀಲ ರಾಜೀವ್ ಧವನ್, "ಸುಪ್ರೀಂ ಕೋರ್ಟ್ ನಿರ್ದೇಶಿತ ಮಧ್ಯಸ್ಥಿಕೆಗೆ ನಾವು ಸಿದ್ಧರಿದ್ದೇವೆ. ಯಾವುದೇ ಸಂಧಾನ ಮತ್ತು ಒಪ್ಪಂದಕ್ಕೆ ಎರಡೂ ಕಡೆಯವರು ಬದ್ಧವಾಗಿರುತ್ತೇವೆ. ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಕೋರ್ಟ್ ಆರಂಭಿಸಬಹುದು," ಎಂದರು.
|
ಮುಖ್ಯನ್ಯಾಯ ಮೂರ್ತಿ ರಂಜನ್ ಗೊಗೊಯ್
"ಮಧ್ಯಸ್ಥಿಕೆ ಆರಂಭವಾದರೆ ಅದರ ನಡವಳಿಗಳು ವರದಿಯಾಗುವಂತಿಲ್ಲ. ಅದು ತಮಾಷೆಯಲ್ಲ. ಯಾರೊಬ್ಬರೂ ಆರೋಪಗಳಲ್ಲಿ ತೊಡಗಬಾರದು" ಮಧ್ಯಸ್ಥಿಕೆ ವಹಿಸಲು ಯಾರಿಗೆ ಹೇಳಬೇಕು ಅಥವಾ ಯಾವ ಸಮಿತಿಗೆ ಹೇಳಬೇಕು ಎಂಬ ಬಗ್ಗೆ ಅರ್ಜಿದಾರರೇ ಒಮ್ಮತದ ನಿರ್ಧಾರಕ್ಕೆ ಬರಬೇಕು ಎಂದು ಮುಖ್ಯನ್ಯಾಯ ಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.
|
ಪಂಚ ಸದಸ್ಯ ಪೀಠದಿಂದ ವಿಚಾರಣೆ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಪಂಚ ಸದಸ್ಯ ಪೀಠದಿಂದ ವಿಚಾರಣೆ ಜನವರಿ 29ರಂದು ವಿಚಾರಣೆ ನಡೆಸಬೇಕಿತ್ತು. ಆದರೆ ಜಸ್ಟೀಸ್ ಬೊಬ್ಡೆ ಅವರ ಅನುಪಸ್ಥಿತಿಯಿಂದ ವಿಚಾರಣೆಯನ್ನು ಮುಂದೂಡಲಾಗಿತ್ತು. ಈಗ ಜಸ್ಟೀಸ್ ಬೊಬ್ಡೆ ಅವರು ರಜೆ ಅವಧಿ ಮುಗಿಸಿಕೊಂಡು ಹಿಂತಿರುಗಿದ ಬಳಿಕ ಫೆಬ್ರವರಿ 26 ರಿಂದ ಅಯೋಧ್ಯೆ ರಾಮ ಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದೆ.
|
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣ
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.