ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಪ್ರಚಾರದ ಸ್ಟಂಟ್: ಬಿಜೆಪಿ ನಾಯಕ
ರಾಂಚಿ, ಜುಲೈ 18: 'ತಮ್ಮ ಮೇಲೆ ತಮ್ಮ ಜನರ ಬಳಿಯೇ ಹಲ್ಲೆ ಮಾಡಿಸಿಕೊಂಡು, ಬಿಜೆಪಿ ಕಾರ್ಯಕರ್ತರಿಗೆ ಮಸಿ ಬಳಿಯಲು ಸ್ವಾಮಿ ಅಗ್ನಿವೇಶ್ ಪ್ರಯತ್ನಿಸುತ್ತಿದ್ದಾರೆ' ಎಂದು ಜಾರ್ಖಂಡ್ ನ ಬಿಜೆಪಿ ಮುಖಂಡ ಚಂದ್ರೇಶ್ವರ ಪ್ರಸಾದ್ ಸಿಂಗ್ ಹೇಳಿದ್ದಾರೆ.
"ಇಷ್ಟು ದಿನ ಅವರಿಗೆ ಯಾವುದೇ ಪ್ರಚಾರ ಸಿಕ್ಕುತ್ತಿರಲಿಲ್ಲ. ಅದು ಅವರಿಗೂ ಗೊತ್ತಿತ್ತು. ಅದಕ್ಕೆಂದೇ ಒಂದಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಾಗಿ ಈ ನಾಟಕ ಮಾಡಿದರು. ಅವರ ಮೇಲೆ ಹಲ್ಲೆ ಮಾಡುವ ನಾಟಕ ಆಡಿದ್ದು ಅವರದೇ ಜನ. ಈ ಮನುಷ್ಯ ವಿದೇಶಗಳಿಂದ ಹಣ ಪಡೆದು, ಭಾರತದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಈ ವಿಷಯದ ಕುರಿತು ತನಿಖೆ ಆಗಲೇಬೇಕು. ಈ ದಾಳಿಗಾಗಿ ಅಗ್ನಿವೇಶ್ ಮತ್ತು ಅವರ ಕಡೆಯವರು ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಪತ್ತೆಮಾಡಬೇಕು" ಎಂದು ಅವರು ಹೇಳಿದ್ದಾರೆ.
ವಿವಾದಾತ್ಮಕ ನಾಯಕ ಸ್ವಾಮಿ ಅಗ್ನಿವೇಶ್ ಯಾರು?
'ಅವರು ತೊಟ್ಟಿರುವ ಕೇಸರಿ ಬಣ್ಣದ ಬಟ್ಟೆ ಪವಿತ್ರವಾದುದು. ಆದರೆ ಅವರು ಒಬ್ಬ ನಕಲಿ ಸ್ವಾಮಿ' ಎಂದು ಸಿಂಗ್ ಹೇಳಿದ್ದಾರೆ.
ಅಗ್ನಿವೇಶ್ ಮೇಲೆ ನಿನ್ನೆ ಜಾರ್ಖಂಡ್ ನಲ್ಲಿ ಕೆಲವರು ದಾಳಿ ನಡೆಸಿದ್ದರು. ತಮ್ಮ ಮೇಲೆ ಹಲ್ಲೆ ನಡೆಸಿದವರು ಆರೆಸ್ಸೆಸ್ ಮತ್ತು ಬಿಜೆಪಿ ಯುವ ಮೋರ್ಚಾ ಸದಸ್ಯರು ಎಂದು ದೂರಿರುವ ಅಗ್ನಿವೇಶ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.