ಸಂಜೆಯ ಬಳಿಕ ಎಟಿಎಂಗಳಿಗೆ ಹಣ ತುಂಬಿಸುವುದಿಲ್ಲ!
ಬೆಂಗಳೂರು, ಆಗಸ್ಟ್ 20 : ನಗರ ಪ್ರದೇಶದಲ್ಲಿ ರಾತ್ರಿ 9ರ ಬಳಿಕ, ಗ್ರಾಮೀಣ ಪ್ರದೇಶದಲ್ಲಿ ಸಂಜೆ 6ರ ಬಳಿಕ ಎಟಿಎಂಗೆ ಹಣ ತುಂಬಿಸುವುದಿಲ್ಲ. ಹೌದು, ಸಂಜೆಯ ಬಳಿಕ ಎಟಿಎಂಗೆ ಹಣ ತುಂಬಿಸದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
2019ರ ಫೆಬ್ರವರಿ 9ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅದರಂತೆ ನಗರ ಪ್ರದೇಶದಲ್ಲಿ ರಾತ್ರಿ 9ರ ಬಳಿಕ, ಗ್ರಾಮೀಣ ಪ್ರದೇಶದಲ್ಲಿ ಸಂಜೆ 6 ಗಂಟೆ ಬಳಿಕ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಸಂಜೆ 4 ಗಂಟೆ ಬಳಿಕ ಎಟಿಎಂಗೆ ಹಣ ಹಾಕುವುದಿಲ್ಲ.
ಎಟಿಎಂಗೆ ಹಣ ತುಂಬಿಸುವ ಗುತ್ತಿಗೆ ಪಡೆದಿರುವ ಸಂಸ್ಥೆಗಳು ಪ್ರತಿ ದಿನ ಬೆಳಗ್ಗೆ ಬ್ಯಾಂಕ್ನಿಂದ ಹಣ ಪಡೆದು ನಿಗದಿ ಪಡಿಸಿದ ಸಮಯದೊಳಗೆ ಎಟಿಎಂಗಳಿಗೆ ತುಂಬಿಸಬೇಕು. ಎಟಿಎಂನಲ್ಲಿ ಹಣ ಬೇಗ ಖಾಲಿಯಾದರೆ, ರಾತ್ರಿ ಜನರು ಹಣ ಪಡೆಯುವುದು ಕಷ್ಟವಾಗಲಿದೆ.
ಕೇಂದ್ರ ಗೃಹ ಸಚಿವಾಲಯ ಈ ಕುರಿತು ಆದೇಶ ಹೊರಡಿಸಲಿದೆ. ಎಟಿಎಂ ವಾಹನದ ಮೇಲಿನ ದಾಳಿ, ವಾಹನ ಅಪಹರಣ, ಹಣ ಕದಿಯುವುದು ಮುಂತಾದ ಘಟನೆಗಳನ್ನು ತಪ್ಪಿಸಲು ಸಂಜೆಯ ಮೇಲೆ ಹಣ ಹಾಕುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.
ದೇಶದಲ್ಲಿ ಸುಮಾರು 8 ಸಾವಿರ ಖಾಸಗಿ ಸಂಸ್ಥೆಗಳ ವಾಹನಗಳು ಎಟಿಎಂಗೆ ಹಣ ತುಂಬಿಸುವ ಕೆಲಸ ಮಾಡುತ್ತಿವೆ. ಪ್ರತಿದಿನ ಸುಮಾರು 15 ಕೋಟಿ ಹಣವನ್ನು ಬ್ಯಾಂಕ್ನಿಂದ ಪಡೆದು ಎಟಿಎಂಗಳಿಗೆ ಹಾಕಲಾಗುತ್ತದೆ.
ಹೊಸ ಅಧಿಸೂಚನೆಯ ಅನ್ವಯ ಎಟಿಎಂಗೆ ಹಣ ತುಂಬಿಸುವ ಸಂಸ್ಥೆಗಳು ಸೂಕ್ತ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಪ್ರತಿ ವ್ಯಾನ್ನಲ್ಲಿ ಒಬ್ಬ ಚಾಲಕ, ಇಬ್ಬರು ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿಗಳು, ಇಬ್ಬರು ಹಣ ಹಾಕುವವರು ಇರಬೇಕು.
ಒಬ್ಬ ಭದ್ರತಾ ಸಿಬ್ಬಂದಿ ಡ್ರೈವರ್ ಜೊತೆ ಮುಂಭಾಗದಲ್ಲಿ ಕುಳಿತುಕೊಳ್ಳಬೇಕು. ಇನ್ನೊಬ್ಬ ಹಣ ಇರುವ ಪೆಟ್ಟಿಗೆ ಜೊತೆಯಲ್ಲಿ ಇರಬೇಕು. ಕಾಫಿ ಬ್ರೇಕ್, ಶೌಚಾಲಯಕ್ಕೆ ಸಿಬ್ಬಂದಿ ಹೋಗುವಾಗ ಒಬ್ಬ ಭದ್ರತಾ ಸಿಬ್ಬಂದಿ ವಾಹನದ ಜೊತೆ ಇರುವುದು ಕಡ್ಡಾಯ.
ಭದ್ರತೆಗಾಗಿ ನಿವೃತ್ತ ಯೋಧ ಅಥವ ಅರ್ಹ ವ್ಯಕ್ತಿಯನ್ನು ನೇಮಿಸಬೇಕು. ಹಣ ಸಾಗಣೆ ಮಾಡುವ ವಾಹನಕ್ಕೆ ಜಿಪಿಎಸ್ ಕಡ್ಡಾಯವಾಗಿ ಅಳವಡಿಕೆ ಮಾಡಬೇಕು. ಒಂದು ವಾಹನ ಒಂದು ಟ್ರಿಪ್ನಲ್ಲಿ 5 ಕೋಟಿಗಿಂತ ಹೆಚ್ಚಿನ ಹಣವನ್ನು ಸಾಗಣೆ ಮಾಡುವಂತಿಲ್ಲ ಎಂಬ ನಿಯಮ ಜಾರಿಗೆ ಬರಲಿದೆ.