ಭಾರತದಲ್ಲಿ ಕೊವಿಡ್-19 ಲಸಿಕೆ ಅಭಿವೃದ್ಧಿಗೆ 900 ಕೋಟಿ ಅನುದಾನ
Array
ನವದೆಹಲಿ, ನವೆಂಬರ್.12: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗೆ 900 ಕೋಟಿ ರೂಪಾಯಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ. ಕೊವಿಡ್-19ಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಜೀವಶಾಸ್ತ್ರ ಇಲಾಖೆ ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಲಾಕ್ಡೌನ್ ಬಳಿಕ ಆರ್ಥಿಕತೆ ಪ್ರಬಲ ಚೇತರಿಕೆ: ನಿರ್ಮಲಾ ಸೀತಾರಾಮನ್
ಕೊರೊನಾವೈರಸ್ ಲಸಿಕೆ ಲಭ್ಯವಾದ ನಂತರದಲ್ಲಿ ಪ್ರತ್ಯೇಕ ಅನುದಾನವನ್ನು ನೀಡಲಾಗುತ್ತದೆ. ಇಂದು ಘೋಷಿಸಿದ ಅನುದಾನವು ಕೇವಲ ಲಸಿಕೆ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸೀಮಿತವಾಗಿರುತ್ತದೆ. ಲಸಿಕೆಯ ಮೂಲವೆಚ್ಚ ಮತ್ತು ವಿತರಣೆ ವೆಚ್ಚವೂ ಪ್ರತ್ಯೇಕವಾಗಿರಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಹೊರೆ:
ದೇಶದಲ್ಲಿ ಮಾರಣಾಂತಿಕ ಕೊವಿಡ್-19 ಸೋಂಕಿನ ಲಸಿಕೆಯು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಇನ್ನೊಂದು ಕಡೆಯಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯು ಏರುಮುಖವಾಗಿ ಸಾಗುತ್ತಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳಿದರೆ ವ್ಯಾಪಾರ ವಹಿವಾಟು ಸೇರಿದಂತೆ ಆರ್ಥಿಕ ಚಟುವಟಿಕೆಗಳ ಮೇಲೆ ಮತ್ತೆ ನಿರ್ಬಂಧ ವಿಧಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸ್ಪುಟ್ನಿಕ್ ವಿ ಲಸಿಕೆ ಮಧ್ಯಂತರ ಪ್ರಯೋಗ ಫಲಿತಾಂಶಗಳ ಪ್ರಕಾರ, ಕೊರೊನಾವೈರಸ್ ಸೋಂಕಿನ ನಿಯಂತ್ರಿಸುವಲ್ಲಿ ಲಸಿಕೆಯು ಶೇಕಡಾ 92 ರಷ್ಟು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ರಷ್ಯಾ ಈಗಾಗಲೇ ಹೇಳಿಕೊಂಡಿದೆ. ರಷ್ಯಾ ಕೊನೆಯ ಹಂತದಿಂದ ಎರಡನೇ ಹಂತದಲ್ಲಿದ್ದು, ಮಾನವ ಪ್ರಯೋಗ ನಡೆಸುತ್ತಿರುವುದು ಕಂಡು ಬರುತ್ತಿದೆ. ಮೂರನೇ ಹಂತದ ವೈದ್ಯಕೀಯ ಪ್ರಯೋಗದಲ್ಲಿರುವ ಪಿ-ಫಿಜರ್ ಲಸಿಕೆ ಕೂಡಾ ಶೇ.90ರಷ್ಟು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.