ಗೋವಾ, ಉತ್ತರಾಖಂಡ, ಪಂಜಾಬ್ನಲ್ಲಿ ಕಾಂಗ್ರೆಸ್ಗೆ ಅಧಿಕಾರ: ಸಚಿನ್ ಪೈಲಟ್
ಚಂಡೀಗಢ, ಜನವರಿ 29: ಪಂಜಾಬ್ನಲ್ಲಿ ಫೆಬ್ರವರಿ 20ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅದ್ಭುತ ಪ್ರದರ್ಶನ ನೀಡಲಿದೆ ಮತ್ತು ಸರಳ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ನಾವು ಮತ್ತೆ ಪಂಜಾಬ್ನಲ್ಲಿ ಹೆಚ್ಚಿನ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತೇವೆ,'' ಎಂದು ರಾಜಸ್ಥಾನದ ಹಿರಿಯ ನಾಯಕ ಚಂಡೀಗಢದಲ್ಲಿ ನಡೆದ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರೊಂದಿಗಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿ ಮುಖದೊಂದಿಗೆ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಈಗಾಗಲೇ ಹೇಳಿದ್ದಾರೆ ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿನ್ ಪೈಲಟ್ ಹೇಳಿದರು.
ಇತರ ರಾಜ್ಯಗಳಲ್ಲಿನ ಚುನಾವಣೆಗಳ ಬಗ್ಗೆ ಮಾತನಾಡಿದ ಸಚಿನ್ ಪೈಲಟ್, ನಾವು ಗೋವಾ, ಉತ್ತರಾಖಂಡ ಮತ್ತು ಪಂಜಾಬ್ನಲ್ಲಿ ಸರ್ಕಾರ ರಚಿಸುತ್ತೇವೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಗುರುವಾರದಂದು ಉತ್ತರಪ್ರದೇಶದಲ್ಲಿ ಪ್ರಚಾರ ನಡೆಸಿದ್ದೇನೆ ಎಂದು ಹೇಳಿದ ಸಚಿನ್ ಪೈಲಟ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷವು ಪ್ರತಿಪಕ್ಷದ ಪಾತ್ರವನ್ನು ವಹಿಸಲು ವಿಫಲವಾಗಿದೆ ಎಂದು ಆರೋಪಿಸಿದರು.
ಐದು ವರ್ಷಗಳ ಕಾಲ ಸಮಾಜವಾದಿ ಪಕ್ಷವಾಗಲಿ, ಬಿಎಸ್ಪಿಯಾಗಲಿ ಪ್ರತಿಪಕ್ಷದ ಪಾತ್ರವನ್ನು ವಹಿಸಿಲ್ಲ, ಲಖಿಂಪುರಖೇರಿ, ಉನ್ನಾವೋ, ಹತ್ರಾಸ್ ಅಥವಾ ದಲಿತ ಸಮಸ್ಯೆಗಳನ್ನು ಎತ್ತಿ ಹಿಡಿದದ್ದು ಕಾಂಗ್ರೆಸ್ ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯು ಇಕ್ಕಟ್ಟಿಗೆ ಸಿಲುಕಿದೆ ಎಂದು ಆರೋಪಿಸಿದ ಸಚಿನ್ ಪೈಲಟ್, ಅವರ ಹತ್ತಾರು ಶಾಸಕರು ಮತ್ತು ಕೆಲವು ಸಚಿವರು ಪಕ್ಷವನ್ನು ತೊರೆದಿದ್ದಾರೆ. ಬಿಜೆಪಿಯವರು "ವಿಭಜಕ ರಾಜಕೀಯ" ಆಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜನರು ಈ ಆಟಗಳನ್ನು ನೋಡಿದ್ದಾರೆ ಮತ್ತು ಬಿಜೆಪಿ ಪಕ್ಷವು ಇನ್ನು ಮುಂದೆ ಮತದಾರರನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಮಾತನಾಡುತ್ತದೆ. ಆದರೆ ಆ ಕೆಲಸ ಇನ್ನೂ ಸಂಭವಿಸಿಲ್ಲ. ದೇಶದ ವಿವಿಧ ಭಾಗಗಳ ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ಆಂದೋಲನ ನಡೆಸಿದರು ಮತ್ತು ಅವರಲ್ಲಿ ಅನೇಕರು ಸುದೀರ್ಘವಾದ ಪ್ರತಿಭಟನೆಯಲ್ಲಿ ಸಾವನ್ನಪ್ಪಿದರು. ಆ ರೈತರ ಕುಟುಂಬಗಳು ಕೇಂದ್ರ ಸರಕಾರವನ್ನು ಪ್ರಶ್ನಿಸುವುದಿಲ್ಲವೇ?,'' ಎಂದು ಹೇಳಿದರು.
ಮಿತ್ರಪಕ್ಷಗಳೊಂದಿಗೆ ಸೇರಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಪಕ್ಷ ಕಾಂಗ್ರೆಸ್ ಎಂದ ಸಚಿನ್ ಪೈಲಟ್, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ವರ್ಷ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದನ್ನು ಉಲ್ಲೇಖಿಸಿದರು. ಈ ಫಲಿತಾಂಶಗಳು ಬಿಜೆಪಿ ನೇತೃತ್ವದ ಆಡಳಿತದ "ಜನವಿರೋಧಿ" ನೀತಿಗಳ ವಿರುದ್ಧ ತೀರ್ಪು ಎಂದು ಸಚಿನ್ ಪೈಲಟ್ ತಿಳಿಸಿದರು.
ಇಂಧನ ಮತ್ತು ಅಡುಗೆ ಅನಿಲ ಮತ್ತು ಇತರ ಅಗತ್ಯ ವಸ್ತುಗಳ ಏರಿಕೆ, ದಿನಸಿ ವಸ್ತುಗಳ ಹೆಚ್ಚಿನ ಬೆಲೆ ಮತ್ತು ಬೆಳೆಯುತ್ತಿರುವ ನಿರುದ್ಯೋಗ ದರದ ಬಗ್ಗೆ ಸಚಿನ್ ಪೈಲಟ್ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದರು.