'ಮದ್ರಸಾ ಮಾದರಿ' ಶಿಕ್ಷಣಕ್ಕೆ ಗುಡ್ ಬೈ ಹೇಳಿದ ಅಸ್ಸಾಂ ಬಿಜೆಪಿ ಸರಕಾರ
“ಮದ್ರಸಾ ಶಿಕ್ಷಣಕ್ಕೆ ನಾವು ತಿಲಾಂಜಲಿ ನೀಡುತ್ತಿಲ್ಲ. ಇದನ್ನು ಪ್ರೌಢ ಶಿಕ್ಷಣದಡಿಯಲ್ಲಿ ತರಲಾಗುವುದು,” ಎಂದು ಅಸ್ಸಾ ಶಿಕ್ಷಣ ಸಚಿವ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಅಸ್ಸಾಂ, ಮೇ 10: ಮದ್ರಸಾ ಮಾದರಿಯ ಶಿಕ್ಷಣಕ್ಕೆ ಅಸ್ಸಾಂ ಬಿಜೆಪಿ ಸರಕಾರ ಅಂತಿಮ ವಿದಾಯ ಹೇಳಿದೆ. ಆಧುನಿಕ ಶಿಕ್ಷಣವನ್ನು ಬೆಂಬಲಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.
ಈ ಕುರಿತು ಹೇಳಿಕೆ ನೀಡಿರುವ ರಾಜ್ಯ ಶಿಕ್ಷಣ ಸಚಿವ ಹಿಮಂತ ಬಿಸ್ವ ಶರ್ಮಾ, "ರಾಜ್ಯ ಸರಕಾರ ಮದ್ರಸಾ ಶಿಕ್ಷಣ ಮಂಡಳಿಯನ್ನು ವಿಸರ್ಜನೆ ಮಾಡಲು ನಿರ್ಧರಿಸಿದೆ. ಇದನ್ನು ಪ್ರೌಢ ಶಿಕ್ಷಣ ಮಂಡಳಿ ಅಡಿಯಲ್ಲಿ ತರಲು ನಿರ್ಧರಿಸಿದ್ದೇವೆ," ಎಂದು ಹೇಳಿದ್ದಾರೆ.
"ಮದ್ರಸಾ ಶಿಕ್ಷಣಕ್ಕೆ ನಾವು ತಿಲಾಂಜಲಿ ನೀಡುತ್ತಿಲ್ಲ. ಇದನ್ನು ಪ್ರೌಢ ಶಿಕ್ಷಣದಡಿಯಲ್ಲಿ ತರಲಾಗುವುದು," ಎಂದು ಶರ್ಮಾ ಹೇಳಿದ್ದಾರೆ. ಈ ಹಿಂದೆ ಶರ್ಮಾ ಮದ್ರಸಾಗಳಿಗೆ ಶುಕ್ರವಾರ ರಜೆ ಇರುವುದಿಲ್ಲ ಎಂದ ಹೇಳಿ ವಿವಾದ ಹುಟ್ಟುಹಾಕಿದ್ದರು.
ಕಂಪ್ಯೂಟರ್ ರೀತಿಯ ಅತ್ಯಾಧುನಿಕ ಶಿಕ್ಷಣ ಮಾದರಿಯನ್ನು ಈ ಶಾಲೆಗಳಲ್ಲಿ ಜಾರಿಗೆ ತರಲು ಸಾಧ್ಯವಿಲ್ಲ.ಹೀಗಾಗಿ ನಾವು ಈಗಿರುವ ಮದ್ರಸಾ ಶಿಕ್ಷಣದ ವಿನ್ಯಾಸವನ್ನು ಬದಲಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಇನ್ನು ಅಸ್ಸಾಂನ ಎಲ್ಲಾ ಶಾಲೆಗಳಲ್ಲೂ 5ನೇ ತರಗತಿ ನಂತರ ಪರೀಕ್ಷೆ ಕಡ್ಡಾಯ ಮಾಡಲಾಗುವುದು ಎಂದು ಶರ್ಮಾ ಹೇಳಿದ್ದಾರೆ. ಇಲ್ಲಿಯವರಗೆ ಅಸ್ಸಾಂನಲ್ಲಿ 8ನೇ ತರಗತಿಯ ನಂತರ ಮಾತ್ರ ಪರೀಕ್ಷೆ ಇರುತ್ತಿತ್ತು.