ಅಸ್ಸಾಂನಲ್ಲಿ ಭಾರೀ ಮಳೆ: ಪ್ರವಾಹದಲ್ಲಿ ಸಿಲುಕಿದ್ದ 119 ರೈಲು ಪ್ರಯಾಣಿಕರನ್ನು ರಕ್ಷಿಸಿದ ಐಎಎಫ್
ಡಿಸ್ಪುರ್, ಮೇ 16: ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ರೈಲು ಸಿಕ್ಕಿಹಾಕಿಕೊಂಡ ರೈಲು ಪ್ರಯಾಣಿಕರನ್ನು ಭಾರತೀಯ ವಾಯುಪಡೆ ರಕ್ಷಿಸಿದೆ. ಸಿಲ್ಚಾರ್-ಗುವಾಹಟಿ ಎಕ್ಸ್ಪ್ರೆಸ್ನ 119 ಪ್ರಯಾಣಿಕರನ್ನು ಐಎಎಫ್ ಪಡೆ ರಕ್ಷಿಸಿದೆ. ಸಿಲ್ಚಾರ್-ಗುವಾಹಟಿ ರೈಲು ಕ್ಯಾಚಾರ್ ಪ್ರದೇಶದಲ್ಲಿ ಮಳೆಯಿಂದಾಗಿ ಸಿಲುಕಿಕೊಂಡಿತ್ತು. ಪ್ರವಾಹದ ನೀರಿನಿಂದ ರೈಲು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಲು ಸಾಧ್ಯವಾಗಲಿಲ್ಲ. ಹಲವಾರು ಗಂಟೆಗಳ ಕಾಲ ರೈಲು ಸಿಕ್ಕಿಹಾಕಿಕೊಂಡ ಪರಿಣಾಮ ಜಿಲ್ಲಾಡಳಿತ ಭಾರತೀಯ ವಾಯುಪಡೆಯ ಸಹಾಯದಿಂದ 119 ಜನರನ್ನು ರಕ್ಷಿಸಿತು.
ಅಸ್ಸಾಂ ಹಠಾತ್ ಪ್ರವಾಹದಿಂದಾಗಿ ಹಲವಾರು ಸ್ಥಳಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಆಸ್ತಿ-ಪಾಸ್ತಿ ಹಾನಿಗೊಳಗಾಗಿದೆ. ಇದರಿಂದಾಗಿ ರಾಜ್ಯದ ಇತರ ಭಾಗಗಳಿಂದ ರೈಲು ಮತ್ತು ರಸ್ತೆ ಸಂಪರ್ಕಗಳನ್ನು ಬಂದ್ ಮಾಡಲಾಗಿದೆ.
ನ್ಯೂ ಕುಂಜಂಗ್, ಫಿಯಾಂಗ್ಪುಯಿ, ಮೌಲ್ಹೋಯ್, ನಮ್ಝುರಾಂಗ್, ಸೌತ್ ಬಾಗೇಟರ್, ಮಹಾದೇವ್ ತಿಲ್ಲಾ, ಕಲಿಬರಿ, ನಾರ್ತ್ ಬಾಗೇಟರ್, ಜಿಯಾನ್ ಮತ್ತು ಲೋಡಿ ಪಂಗ್ಮೌಲ್ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 80 ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ತಿಳಿಸಿದೆ.
"ಜಟಿಂಗ-ಹರಂಗಜಾವೋ ಮತ್ತು ಮಾಹುರ್-ಫೈಡಿಂಗ್ ರೈಲುಮಾರ್ಗವು ಭೂಕುಸಿತದಿಂದಾಗಿ ನಿರ್ಬಂಧಿಸಲ್ಪಟ್ಟಿದೆ. ಗೆರೆಮ್ಲಾಂಬ್ರಾ ಗ್ರಾಮದಲ್ಲಿ ಮೈಬಾಂಗ್ ಸುರಂಗವನ್ನು ತಲುಪುವ ಮೊದಲು, ಭೂಕುಸಿತದಿಂದಾಗಿ ರಸ್ತೆಯನ್ನು ನಿರ್ಬಂಧಿಸುವ ಸಾಧ್ಯತೆಯಿದೆ" ಎಂದು ASDMA ಸೇರಿಸಲಾಗಿದೆ. ಮಾತ್ರವಲ್ಲದೆ ಅಸ್ಸಾಂನ ಐದು ಜಿಲ್ಲೆಗಳಲ್ಲಿ ಸುಮಾರು 25,000 ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ ಎಂದು ASDMA ತಿಳಿಸಿದೆ.
ಈ ಪ್ರವಾಹಕ್ಕೆ ಅಸ್ಸಾಂನ ಏಳು ಜಿಲ್ಲೆಗಳ ಸುಮಾರು 222 ಗ್ರಾಮಗಳು ಹಾನಿಗೊಳಗಾಗಿದ್ದು 57,000 ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಈ ಪ್ರಕೃತಿ ವಿಕೋಪಕ್ಕೆ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದು ಸುಮಾರು 10321.44 ಹೆಕ್ಟೇರ್ ಕೃಷಿ ಭೂಮಿ ಪ್ರವಾಹದ ನೀರಿನಲ್ಲಿ ಮುಳುಗಿದೆ ಎಂದು ಡೇಟಾ ತೋರಿಸಿದೆ.
ಮನುಷ್ಯರನ್ನು ಹೊರತುಪಡಿಸಿ, 1,434 ಪ್ರಾಣಿಗಳಿಗೂ ಪ್ರವಾಹಕ್ಕೆ ಸಾವನ್ನಪ್ಪಿವೆ. ಒಟ್ಟು 202 ಮನೆಗಳು ಜಲಾವೃತಗೊಂಡಿವೆ. ಸೇನೆ, ಅರೆ ಮಿಲಿಟರಿ ಪಡೆಗಳು, ಎಸ್ಡಿಆರ್ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಿವೆ.
ಹೋಜೈ, ಲಖಿಂಪುರ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಹಲವಾರು ರಸ್ತೆಗಳು, ಸೇತುವೆಗಳು ಮತ್ತು ನೀರಾವರಿ ಕಾಲುವೆಗಳಿಗೆ ನೀರು ನುಗ್ಗಿ ಸಂಚಾರಕ್ಕೆ ಅಡ್ಡಿಯಾಗಿದ್ದು ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಸತತ ಮಳೆಯಿಂದಾಗಿ ದಿಮಾ ಹಸಾವೊ ಜಿಲ್ಲೆಯ 12 ಗ್ರಾಮಗಳಲ್ಲಿ ಶನಿವಾರ ಭೂಕುಸಿತ ಉಂಟಾಗಿದೆ. ಬೃಹತ್ ಭೂಕುಸಿತಗಳು ಮತ್ತು ನೀರಿನಿಂದಾಗಿ ಈ ಗುಡ್ಡಗಾಡು ಪ್ರದೇಶದಲ್ಲಿನ ರೈಲ್ವೆ ಹಳಿ, ಸೇತುವೆಗಳು ಮತ್ತು ರಸ್ತೆ ಸಂಪರ್ಕಗಳಿಗೆ ಭಾರಿ ಹಾನಿಯನ್ನುಂಟುಮಾಡಿದೆ.
ಲುಮ್ಡಿಂಗ್ ವಿಭಾಗದ ಲುಮ್ಡಿಂಗ್-ಬದರ್ಪುರ್ ಬೆಟ್ಟದ ವಿಭಾಗದಲ್ಲಿ ನಿರಂತರ ಮಳೆ, ಭೂಕುಸಿತಗಳು ಮತ್ತು ಜಲಾವೃತವಾಗಿರುವ ಕಾರಣ, ಈಶಾನ್ಯ ಫ್ರಾಂಟಿಯರ್ ರೈಲ್ವೇ ಈ ಗಂಭೀರ ಸ್ಥಿತಿಯ ಕಾರಣದಿಂದಾಗಿ ಈ ವಿಭಾಗದ ರೈಲು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಆದಾಗ್ಯೂ, ಎರಡು ರೈಲುಗಳು ಸಿಲುಕಿಕೊಂಡಿರುವುದು ವರದಿಯಾಗಿದೆ.
ರೈಲ್ವೆಯು ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ಅಸ್ಸಾಂ ರೈಫಲ್ಸ್ ಮತ್ತು ಸ್ಥಳೀಯ ಜನರ ಸಹಾಯದಿಂದ ಬೃಹತ್ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಬಾದರ್ಪುರ ಡಿಟೋಕ್ಚೆರಾ ನಿಲ್ದಾಣದಲ್ಲಿ ಸಿಲುಕಿರುವ ಸುಮಾರು 1,245 ರೈಲ್ವೇ ಪ್ರಯಾಣಿಕರನ್ನು ಭಾರತೀಯ ವಾಯುಪಡೆಯು ಸಿಲ್ಚಾರ್ಗೆ ಏರ್ಲಿಫ್ಟ್ ಮಾಡಿದೆ ಎಂದು ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.