ಸಿಎಎ ರದ್ದು, 5 ಲಕ್ಷ ಮಂದಿಗೆ ಉದ್ಯೋಗ ಭರವಸೆ ಸಮರ್ಥಿಸಿಕೊಂಡ ಕಾಂಗ್ರೆಸ್
ನವದೆಹಲಿ, ಮಾರ್ಚ್ 21: ಅಸ್ಸಾಂನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ರದ್ದುಪಡಿಸುವುದಾಗಿ ನೀಡಿದ ಭರವಸೆ ಈಗ ಚರ್ಚಗೆ ಕಾರಣವಾಗಿದೆ.
ಅಸ್ಸಾಂ ಜನರ ಆಕಾಂಕ್ಷೆಗೆ ತಕ್ಕಂತೆ ಪ್ರಣಾಳಿಕೆ ರೂಪಿಸಲಾಗಿದೆ. 5 ಲಕ್ಷ ಮಂದಿಗೆ ಸರ್ಕಾರಿ ಉದ್ಯೋಗ ಭರವಸೆ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದಾರೆ.
ಅಸ್ಸಾಂನಲ್ಲಿ ಕೇಸರಿ ಪಕ್ಷವು ಆಕ್ರಮಣ ಮಾಡುತ್ತಿದೆ "ಆರ್ಎಸ್ಎಸ್ ಮತ್ತು ಬಿಜೆಪಿ ಈ ರಾಷ್ಟ್ರದ ವೈವಿಧ್ಯಮಯ ಸಂಸ್ಕೃತಿಗಳ ಮೇಲೆ ಆಕ್ರಮಣ ಮಾಡುತ್ತಿವೆ ಎಂಬುದು ಎಲ್ಲರಿಗೂ ತಿಳಿದಿದೆ. ನಮ್ಮ ಭಾಷೆ, ಇತಿಹಾಸ, ನಮ್ಮ ಆಲೋಚನಾ ವಿಧಾನ, ಜೀವನಶೈಲಿ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆ. ಅಸ್ಸಾಂ ರಾಜ್ಯದ ಸಂಸ್ಕೃತಿ, ಘನತೆ ಕಾಪಾಡಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆ 2019 ಅನ್ನು ರದ್ದುಗೊಳಿಸುವ ಭರವಸೆ ನೀಡಿರುವುದಲ್ಲದೆ, ಚಹಾ ತೋಟ ಕಾರ್ಮಿಕರ ಕನಿಷ್ಠ ವೇತನವನ್ನು 365 ರೂ.ಗೆ ಏರಿಸುವುದಾಗಿ ಆಶ್ವಾಸನೆ ನೀಡಲಾಗಿದೆ. ಐದು ಲಕ್ಷ ಸರ್ಕಾರಿ ಉದ್ಯೋಗಗಳು ಮತ್ತು ಎಲ್ಲರಿಗೂ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಲಾಗಿದೆ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27ರಂದು 47 ಸ್ಥಾನ, ಏಪ್ರಿಲ್ 1ರಂದು 39 ಸ್ಥಾನ, ಏಪ್ರಿಲ್ 6 ರಂದು ಮೂರನೇ ಮತ್ತು ಅಂತಿಮ ಹಂತದಲ್ಲಿ 40 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮೇ 2ರಂದು ಮತ ಎಣಿಕೆ, ಫಲಿತಾಂಶ ಹೊರ ಬರಲಿದೆ.