ಅಭಿವೃದ್ಧಿ ಮಂತ್ರ ಜಪಿಸುತ್ತಾ ಅಸ್ಸಾಂನತ್ತ ಮೋದಿ ಪ್ರಯಾಣ
ಗುವಾಹತಿ, ಫೆಬ್ರವರಿ 3: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ಜೊತೆಗೆ ಅಸ್ಸಾಂ ಕೂಡಾ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಪ್ರಧಾನಿ ಮೋದಿ ಅವರು ಫೆಬ್ರವರಿ 7ರಂದು ಅಸ್ಸಾಂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಚುನಾವಣೆ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ.
ಎರಡು ಮೆಡಿಕಲ್ ಕಾಲೇಜು ಶಂಕು ಸ್ಥಾಪನೆ, ರಾಜ್ಯದ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ ಎಂದು ವಿತ್ತ ಸಚಿವ ಹಿಮಂತಾ ಬಿಸ್ವ ಶರ್ಮ ಹೇಳಿದರು.
ಮಾರ್ಚ್ -ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು ಬಿಜೆಪಿ ತನ್ನ ಪ್ರಚಾರವನ್ನು ಬಿರುಸುಗೊಳಿಸಿದೆ. ಮೋದಿ ಅವರಿಗೂ ಮುನ್ನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಸ್ಸಾಂಗೆ ಫೆ.6ರಂದು ಆಗಮಿಸಲಿದ್ದಾರೆ. ಚಹಾ ತೋಟದ ಕಾರ್ಮಿಕರ ಬ್ಯಾಂಕ್ ಖಾತೆಗೆ ತಲಾ 3,000 ಹಣ ತುಂಬುವ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಬಜೆಟ್ ನಲ್ಲೂ ಘೋಷಣೆಯಾಗಿದೆ. ಸುಮಾರು 8 ಲಕ್ಷ ಕಾರ್ಮಿಕರಿಗೆ ಇದರಿಂದ ಲಾಭವಾಗಲಿದೆ.
ಮೋದಿ ಅವರು ಢೆಕಿಯಾಜುಲಿ ಪ್ರದೇಶಕ್ಕೆ ಮೊದಲು ಭೇಟಿ ನೀಡಲಿದ್ದು ನಂತರ ಛಾರಾಯಿದಿಯೋ ಹಾಗೂ ಬಿಸ್ವನಾಥ್ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ನಂತರ ಅಸ್ಸಾಂ ಮಾಲಾ ಯೋಜನೆಯಡಿಯಲ್ಲಿ ಹೆದ್ದಾರಿ ಮೇಲ್ದರ್ಜೆಗೇರಿಸಲು ಚಾಲನೆ ನೀಡಲಿದ್ದಾರೆ.
ಸುಮಾರು 15 ವರ್ಷ ಅವಧಿಯ ಈ ಯೋಜನೆಯು 5,000 ಕೋಟಿ ರು ವೆಚ್ಚದ್ದಾಗಿದ್ದು, ಆರಂಭಿಕ ಹಂತದಲ್ಲಿ 2,500 ಕಿ.ಮೀ ಕಾಮಗಾರಿ ಪೂರೈಸಲಾಗುತ್ತದೆ.
ಇದಲ್ಲದೆ, ಸುಮಾರು 29, 701 ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಹೊಸ ನೇಮಕಾತಿ ಕುರಿತಂತೆ ಘೋಷಣೆಯಾಗಲಿದೆ. ಸರ್ವ ಶಿಕ್ಷ ಅಭಿಯಾನದಡಿ ಸುಮಾರು 13,216 ಹೊಸ ನೇಮಕಾತಿಯಾಗಲಿದೆ. ಸ್ಥಳೀಯ ಭಾಷೆ, ಬುಡಕಟ್ಟು ಭಾಷೆ ಕಲಿಸುವ ಬಗ್ಗೆ ಕೂಡಾ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಚಿವ ಹಿಮಂತಾ ಬಿಸ್ವ ಶರ್ಮ ತಿಳಿಸಿದರು.