Video: 58,000 ಔಷಧಿ ಬಾಟಲಿಗಳ ಮೇಲೆ ಬುಲ್ಡೋಜರ್ ಓಡಿಸಿದ ಸಿಎಂ!
ಗುವಾಹಟಿ, ಜುಲೈ 18: ಅಸ್ಸಾಂನಲ್ಲಿ ಮಾದಕ ವಸ್ತುಗಳ ವಿಲೇವಾರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಿನೂತನ ಶೈಲಿಯಲ್ಲಿ ಚಾಲನೆ ನೀಡಿದ್ದಾರೆ. ಭಾನುವಾರ ಬರ್ಹಾಂಪುರದ ನಾಗೋನ್ ಪ್ರದೇಶದಲ್ಲಿ 58,000 ಕೆಮ್ಮಿನ ಔಷಧಿಯ ಬಾಟಲಿಗಳ ಮೇಲೆ ಸ್ವತಃ ಮುಖ್ಯಮಂತ್ರಿಗಳೇ ಬುಲ್ಡೋಜರ್ ಚಾಲನೆ ಮಾಡಿದ್ದಾರೆ.
ರಾಜ್ಯದ ವಿವಿಧ ಪ್ರದೇಶದಲ್ಲಿ ಅವಧಿ ಮುಗಿದ ಕೆಮ್ಮಿನ ಔಷಧಿ ಬಾಟಲಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಬಾಟಲಿಗಳ ಮೇಲೆ ಬುಲ್ಡೋಜರ್ ಹತ್ತಿಸಲಾಯಿತು. ಇದರ ಜೊತೆಗೆ ವಶಪಡಿಸಿಕೊಂಡ ಮಾದಕ ವಸ್ತುಗಳ ವಿಲೇವಾರಿ ಕಾರ್ಯಕ್ರಮದ ಅಡಿ 36 ಕೋಟಿ ರೂಪಾಯಿ ಮೌಲ್ಯದ ಗಾಂಜಾ, ಹೆರಾಯಿನ್ ಮತ್ತು ಓಪಿಂ ಅನ್ನು ಸುಟ್ಟು ಹಾಕಲಾಯಿತು.
ರಾಜಧಾನಿಯಲ್ಲಿ 2 ಕೋಟಿ ಮೌಲ್ಯದ ಹ್ಯಾಷಿಶ್ ಆಯಿಲ್ ಪತ್ತೆ
"ನಾವು 9.733 ಕೆಜಿ ಹೆರಾಯಿನ್, 253 ಕೆಜಿ ಗಾಂಜಾ ಹಾಗೂ 977 ಗ್ರಾಂ ಓಪಿಂ ಹಾಗೂ 2,71,908 ಮಾತ್ರೆಗಳನ್ನು ಸುಟ್ಟು ಹಾಕಿದ್ದೇವೆ," ಎಂದು ಅಸ್ಸಾಂ ಮುಖ್ಯಮಂತ್ರಿ ಹೀಮಂತ್ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.
|
ಅಸ್ಸಾಂನಲ್ಲಿ 700 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ವಶ
ಅಸ್ಸಾಂ ಪೊಲೀಸರು ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದ್ದಾರೆ. ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಲ್ಲಿ 700 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಎರಡು ದಿನಗಳಲ್ಲಿ ಹೀಗೆ ವಶಕ್ಕೆ ಪಡೆದ ಎಲ್ಲ ಮಾದಕ ವಸ್ತುಗಳನ್ನು ವಿಲೇವಾರಿ ಮಾಡುವುದಕ್ಕೆ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಮೊದಲ ದಿನ ದಿಪು ಮತ್ತು ಗೋಲ್ಘಟ್ ಹಾಗೂ ಜುಲೈ 18ರಂದು ನಾಗೇನ್ ಮತ್ತು ಹೋಜೈ ಜಿಲ್ಲೆಗಳಲ್ಲಿ ವಿಲೇವಾರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೊದಲ ದಿನ ಹೇಗೆ ನಡೆಯಿತು ವಿಲೇವಾರಿ ಕಾರ್ಯಕ್ರಮ
ಶನಿವಾರ ಗೋಲ್ಘಟ್ ಪ್ರದೇಶದಲ್ಲಿ ಮೊದಲ ದಿನದ ಮಾದಕ ವಸ್ತುಗಳ ವಿಲೇವಾರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂದು 20 ಕೋಟಿ ರೂಪಾಯಿ ಮೌಲ್ಯದ 802 ಗ್ರಾಂ ಹೆರಾಯಿನ್, 1205 ಕೆಜಿ ಗಾಂಜಾ, 3 ಕೆಜಿ ಓಪಿಂ ಹಾಗೂ 2,06,906 ಮಾತ್ರೆಗಳನ್ನು ಮುಖ್ಯಮಂತ್ರಿ ಹೀಮಂತ್ ಬಿಸ್ವಾ ಶರ್ಮಾ ಸಮ್ಮುಖದಲ್ಲಿ ವಿಲೇವಾರಿ ಮಾಡಲಾಗಿತ್ತು.
ಮಾದಕ ವಸ್ತುಗಳ ಮುಕ್ತ ಅಸ್ಸಾಂ ನಿರ್ಮಾಣ
"ನಮ್ಮ ಯುವಕರು ಮಾದಕ ವಸ್ತುಗಳ ಸೇವನೆಯಿಂದ ಬಲಿಯಾಗುವುದನ್ನು ಸರ್ಕಾರ ಸಹಿಸುವುದಿಲ್ಲ. ಮಾದಕ ವಸ್ತುಗಳ ಮುಕ್ತ ಅಸ್ಸಾಂ ನಿರ್ಮಾಣದ ಶಪಥ ಮಾಡಿರುವ ಸರ್ಕಾರವು ಆ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಈಗಾಗಲೇ ಪೊಲೀಸರು ವಶಕ್ಕೆ ಪಡೆದಿರುವ ಮಾದಕ ವಸ್ತುಗಳು, ಅವಧಿ ಮೀರಿದ ಔಷಧಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ," ಎಂದು ಮುಖ್ಯಮಂತ್ರಿ ಹೀಮಂತ್ ಬಿಸ್ವಾ ಶರ್ಮಾ ಸರಣಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಜೊತೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಡ್ರಗ್ಸ್ ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಸಂಕಲ್ಪ
"ಕೆಲವು ಸಮಾಜ ವಿರೋಧಿಗಳು ರಾಜ್ಯದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮೂಲಕ ಲಾಭ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಡ್ರಗ್ಸ್ ಕಳ್ಳ ಸಾಗಾಣಿಕೆ ಭೀತಿಯ ನಡುವೆ ಕಠಿಣ ಕ್ರಮಗಳ ಮೂಲಕ ಈ ಸವಾಲನ್ನು ಎದುರಿಸುವುದಕ್ಕೆ ನಮ್ಮ ಸಂಕಲ್ಪ ದೃಢವಾಗಿದೆ. ಅದರ ಫಲಿತಾಂಶವನ್ನೇ ಇಂದು ನೀವೆಲ್ಲರೂ ಕಾಣುತ್ತಿದ್ದೀರಿ," ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.