ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 8ಕ್ಕೆ ಏರಿಕೆ- 4 ಲಕ್ಷಕ್ಕೂ ಹೆಚ್ಚು ಸಂತ್ರಸ್ತರು
ಮಿಜೋರಾಂ ಮೇ 18: ಬೆಂಬಿಡದೆ ಸುರಿಯುತ್ತಿರುವ ಮಳೆಗೆ ಅಸ್ಸಾಂ ತತ್ತರಿಸಿ ಹೋಗಿದೆ. ಸಾವಿನ ಸಂಖ್ಯೆ 8ಕ್ಕೆ ತಲುಪಿದ್ದು, 4 ಲಕ್ಷಕ್ಕೂ ಹೆಚ್ಚು ಸಂತ್ರಸ್ತರಾಗಿದ್ದಾರೆ.
ಅಸ್ಸಾಂನಲ್ಲಿ ಭಾರೀ ಮಳೆ ಪ್ರವಾಹ ಹಾನಿಯನ್ನುಂಟುಮಾಡುತ್ತಿದೆ. ಕಳೆದ ದಿನಕ್ಕಿಂತ ಸಂತ್ರಸ್ತರ ಸಂಖ್ಯೆ ದ್ವಿಗುಣಗೊಂಡಿದೆ. ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಮಂಗಳವಾರ ಸರ್ಕಾರದ ಹೇಳಿಕೆಯ ಪ್ರಕಾರ ವಿಪತ್ತಿನಿಂದಾಗಿ ಇನ್ನೂ ಮೂರು ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಒಟ್ಟು ಎಂಟಕ್ಕೆ ಏರಿಕೆಯಾಗಿದೆ. ಸೋಮವಾರ 20 ಜಿಲ್ಲೆಗಳಲ್ಲಿ 1,97,248 ಇದ್ದ ಸಂತ್ರಸ್ತರ ಸಂಖ್ಯೆ ಇಂದು 26 ಜಿಲ್ಲೆಗಳಲ್ಲಿ ಪೀಡಿತ ಜನರ ಸಂಖ್ಯೆ 4,03,352 ಕ್ಕೆ ತಲುಪಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ಬುಲೆಟಿನ್ ತಿಳಿಸಿದೆ.
ಅಸ್ಸಾಂ: 20 ಜಿಲ್ಲೆಗಳಲ್ಲಿ ಪ್ರವಾಹ- ಭೂಕುಸಿತದಿಂದ 1.97 ಲಕ್ಷ ಜನರು ಸಂತ್ರಸ್ತ
ಅಸ್ಸಾಂ ಮತ್ತು ನೆರೆಯ ರಾಜ್ಯಗಳಾದ ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಬರಾಕ್ ಕಣಿವೆ ಮತ್ತು ದಿಮಾ ಹಸಾವೊ ಜಿಲ್ಲೆಗೆ ರೈಲು ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿದೆ. ಭೂಕುಸಿತಗಳು ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ವಿನಾಶವನ್ನುಂಟುಮಾಡಿವೆ. ಮಾತ್ರವಲ್ಲದೆ ಅನೇಕ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಪ್ರವಾಹದ ನೀರಿನಿಂದ 16,645.61 ಹೆಕ್ಟೇರ್ ಬೆಳೆಗಳು ಮುಳುಗಿ ನಾಶವಾಗಿದೆ.
ಕ್ಯಾಚಾರ್ 96,697 ಪೀಡಿತ ಜನರೊಂದಿಗೆ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ. ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರ ಗುವಾಹಟಿ, ಅಸ್ಸಾಂನಲ್ಲಿ ಬುಧವಾರದವರೆಗೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ, ಜೊತೆಗೆ ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುತ್ತದೆ ಎಂದು ತಿಳಿಸಿದೆ. ಇದರಿಂದಾಗಿ ವಿವಿಧ ಪೀಡಿತ ಪ್ರದೇಶಗಳಲ್ಲಿ 89 ಪರಿಹಾರ ಶಿಬಿರಗಳಲ್ಲಿ ಸುಮಾರು 40,000 ಜನರು ಆಶ್ರಯ ಪಡೆದಿದ್ದಾರೆ.
ಸೋಮವಾರದಿಂದ ಹನ್ನೊಂದು ಒಡ್ಡುಗಳು ಒಡೆದಿದ್ದು, ಮನೆಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳಿಗೆ ಹಾನಿಯಾಗುವುದರ ಜೊತೆಗೆ ಇನ್ನೂ ಆರು ಜಿಲ್ಲೆಗಳು ಬಾಧಿತವಾಗಿವೆ. ದರ್ರಾಂಗ್ ಜಿಲ್ಲೆಯ ಗುವಾಹಟಿ ಮತ್ತು ಖಾರುಪೇಟಿಯಾದಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ ಎಂದು ASDMA ಬುಲೆಟಿನ್ ತಿಳಿಸಿದೆ.
ಪೀಡಿತ ಪ್ರದೇಶಗಳಿಗೆ ಅಗತ್ಯ ವಸ್ತುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂವಹನ ಮಾರ್ಗಗಳನ್ನು ಪುನಃಸ್ಥಾಪಿಸಲು ರಾಜ್ಯ ಆಡಳಿತ ಕ್ರಮಗಳನ್ನು ಅನುಸರಿಸುತ್ತಿರುವಾಗಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂಗೆ ಕೇಂದ್ರ ಸರ್ಕಾರದಿಂದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಮೇಘಾಲಯ ಸಹವರ್ತಿಯೊಂದಿಗೆ ಮಾರ್ಗವನ್ನು ತೆರವುಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿರುವುದು ತಿಳಿದುಬಂದಿದೆ. ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯನ್ನು ರಕ್ಷಣಾ ಕಾರ್ಯಾಚರಣೆಗೆ ಕರೆಸಲಾಗಿದೆ.
Recommended Video