ಅಸ್ಸಾಂ: 20 ಜಿಲ್ಲೆಗಳಲ್ಲಿ ಪ್ರವಾಹ- ಭೂಕುಸಿತದಿಂದ 1.97 ಲಕ್ಷ ಜನರು ಸಂತ್ರಸ್ತ
ಗುವಾಹತಿ, ಮೇ 17: ಅಸ್ಸಾಂನಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಸುಮಾರು 1.97 ಲಕ್ಷ ಜನರು ಪ್ರಸ್ತುತ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಕ್ಯಾಚಾರ್ ಜಿಲ್ಲೆಯಲ್ಲಿ ಮಾತ್ರ 51,357 ಜನರ ಮೇಲೆ ಮಳೆ ಪರಿಣಾಮ ಬೀರಿದೆ.
ಜೊತೆಗೆ 46 ಕಂದಾಯ ವೃತ್ತಗಳ ವ್ಯಾಪ್ತಿಯ 652 ಗ್ರಾಮಗಳು ಪ್ರವಾಹದ ಈ ಅಲೆಯಿಂದ ಹಾನಿಗೊಳಗಾಗಿವೆ ಮತ್ತು ಪ್ರವಾಹದ ನೀರಿನಿಂದ 16,645.61 ಹೆಕ್ಟೇರ್ ಬೆಳೆಗಳು ಮುಳುಗಿ ನಾಶವಾಗಿದೆ ಎಂದು ವರದಿ ಹೇಳಿದೆ. ಕ್ಯಾಚಾರ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅವಧಿಗೂ ಮುನ್ನವೇ ಮುಂಗಾರು ಮಳೆ ಆಗಮನ,ಈ ರಾಜ್ಯಗಳಿಗೆ ಎಚ್ಚರಿಕೆ
ಜಿಲ್ಲಾಡಳಿತ 55 ಪರಿಹಾರ ಶಿಬಿರಗಳನ್ನು ಮತ್ತು 12 ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಇಲ್ಲಿ 32,959 ಪ್ರವಾಹ ಪೀಡಿತ ಜನರು ಆಶ್ರಯ ಪಡೆಯುತ್ತಿದ್ದಾರೆ. ಬ್ರಹ್ಮಪುತ್ರ ನದಿಯ ನೀರಿನ ಮಟ್ಟ ಜೋರ್ಹತ್ ಜಿಲ್ಲೆಯ ನೇಮತಿಘಾಟ್ ಮತ್ತು ನಾಗಾಂವ್ ಜಿಲ್ಲೆಯ ಕಂಪುರ್ ಪ್ರದೇಶದ ಕೊಪಿಲಿ ನದಿಯಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದೆ. ನಾಗಾಂವ್ ಜಿಲ್ಲೆಯ ಕಂಪುರ್ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಚಾಲ್ತಿಯಲ್ಲಿರುವುದರಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.
ನ್ಯೂ ಕುಂಜಂಗ್, ಫಿಯಾಂಗ್ಪುಯಿ, ಮೌಲ್ಹೋಯ್, ನಮ್ಝುರಾಂಗ್, ಸೌತ್ ಬಾಗೇಟರ್, ಮಹಾದೇವ್ ತಿಲ್ಲಾ, ಕಲಿಬರಿ, ಉತ್ತರ ಬಾಗೇಟರ್, ಜಿಯಾನ್ ಮತ್ತು ಲೋಡಿ ಪಂಗ್ಮೌಲ್ ಗ್ರಾಮಗಳಲ್ಲಿ ಭೂಕುಸಿತ ವರದಿಯಾಗಿದೆ. ಜಟಿಂಗ-ಹರಂಗಜಾವೊ ಮತ್ತು ಮಹೂರ್-ಫೈಡಿಂಗ್ನಲ್ಲಿ ರೈಲ್ವೆ ಮಾರ್ಗವನ್ನು ಭೂಕುಸಿತಗಳಿಂದ ನಿರ್ಬಂಧಿಸಲಾಗಿದೆ.
ಗೆರೆಮ್ಲಾಂಬ್ರಾ ಗ್ರಾಮದ ಮೈಬಂಗ್ ಸುರಂಗವನ್ನು ಸಂಪರ್ಕಿಸುವ ರಸ್ತೆಯೂ ಸಹ ನಿರ್ಬಂಧಿಸಲಾಗಿದೆ. ಸರ್ಕಾರವು ಭಾರತೀಯ ಸೇನೆ, ಅರೆಸೇನಾ ಪಡೆಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಎಸ್ಡಿಆರ್ಎಫ್, ನಾಗರಿಕ ಆಡಳಿತ ಮತ್ತು ತರಬೇತಿ ಪಡೆದ ಸ್ವಯಂಸೇವಕರನ್ನು ಸ್ಥಳಾಂತರಿಸುವಿಕೆ ಮತ್ತು ಪರಿಹಾರ ಕ್ರಮಗಳಿಗಾಗಿ ನಿಯೋಜಿಸಿದೆ. ಕಚಾರ್ ಜಿಲ್ಲಾಡಳಿತ ಮತ್ತು ಅಸ್ಸಾಂ ರೈಫಲ್ಸ್ ನಡುವಿನ ಜಂಟಿ ಉದ್ಯಮ ಬರಾಖ್ಲಾ ಪ್ರದೇಶದಲ್ಲಿ ಪ್ರವಾಹ ಸಂತ್ರಸ್ತರನ್ನು ರಕ್ಷಿಸಿ ಪರಿಹಾರ ಶಿಬಿರಗಳಿಗೆ ಕಳುಹಿಸಿದೆ.