ಚೀನಾಕ್ಕೆ ಭೂಮಿ ಕೊಟ್ಟವರು ಯಾರೆಂದು ನಿಮ್ಮ ಅಜ್ಜನನ್ನು ಕೇಳಿ: ರಾಹುಲ್ಗೆ ತಿರುಗೇಟು
ನವದೆಹಲಿ, ಫೆಬ್ರವರಿ 12: ಲಡಾಖ್ ಗಡಿ ಭಾಗದಲ್ಲಿನ ಭಾರತದ ಭೂಪ್ರದೇಶಗಳನ್ನು ಮೋದಿ ಸರ್ಕಾರ ಚೀನಾಕ್ಕೆ ಬಿಟ್ಟುಕೊಟ್ಟಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟೀಕೆಗೆ ಕೇಂದ್ರ ಸರ್ಕಾರ ತೀಕ್ಷ್ಣ ತಿರುಗೇಟು ನೀಡಿದೆ.
ಭಾರತ-ಚೀನಾ ಸಮಸ್ಯೆ ಕುರಿತು ಶುಕ್ರವಾರ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಖಾತೆ ಸಚಿವ ಜಿ ಕಿಶನ್ ರೆಡ್ಡಿ, ರಾಹುಲ್ ಗಾಂಧಿ ಅವರು ಭಾರತದ ಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟವರು ಯಾರು ಎಂಬುದನ್ನು ಅವರ ಅಜ್ಜನಿಗೆ (ಜವಹರಲಾಲ್ ನೆಹರೂ) ಕೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಭಾರತದ ಭಾಗ ಚೀನಾ ಪಾಲಾಗಿದೆ; ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ
'ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟವರು ಯಾರು ಎಂಬ ಬಗ್ಗೆ ಅವರು ತಮ್ಮ ಅಜ್ಜನನ್ನು ಕೇಳಬೇಕು. ಅವರೇ ಉತ್ತರ ನೀಡಲಿದ್ದಾರೆ. ಯಾರು ದೇಶಭಕ್ತ ಮತ್ತು ಯಾರು ಅಲ್ಲ ಎಂಬುದು ಜನರಿಗೆ ಚೆನ್ನಾಗಿ ತಿಳಿದಿದೆ' ಎಂದು ರೆಡ್ಡಿ ಹೇಳಿದ್ದಾರೆ. ಮುಂದೆ ಓದಿ.
ತಿರುಗಿ ಹೋರಾಟ ಮಾಡುತ್ತದೆ
ದಾಳಿ ಮಾಡಿದರೆ ಭಾರತ ಮರು ಹೋರಾಟ ಮಾಡುತ್ತದೆ ಎಂಬುದನ್ನು ನೆರೆಯ ದೇಶಗಳಿಗೆ ಬಿಜೆಪಿ ಸರ್ಕಾರ ತೋರಿಸಿಕೊಟ್ಟಿದೆ ಎಂದು ಕೇಂದ್ರ ಸಚಿವ ಆರ್ಕೆ ಸಿಂಗ್ ಹೇಳಿದ್ದಾರೆ.
'ನಮ್ಮ ಸರ್ಕಾರವು ನಮ್ಮ ಎಲ್ಲ ಸುತ್ತಮುತ್ತಲಿನ ದೇಶಗಳಿಗೆ, ಮುಖ್ಯವಾಗಿ ಉತ್ತರ ಹಾಗೂ ಪೂರ್ವ ಭಾಗಗಳಲ್ಲಿ ನೀವು ಭಾರತದ ಮೇಲೆ ದಾಳಿ ಮಾಡಿದರೆ ನಾವು ತಿರುಗಿ ಹೋರಾಡುತ್ತಾವೆ ಎಂಬುದನ್ನು ತೋರಿಸಿದೆ ಮತ್ತು ಜಗತ್ತು ಅದನ್ನು ನೋಡಿದೆ' ಎಂದಿದ್ದಾರೆ.
ಅಸಂಸದೀಯ, ಅಪ್ರಬುದ್ಧ ಹೇಳಿಕೆ
ರಾಹುಲ್ ಗಾಂಧಿ ಅವರ ಹೇಳಿಕೆಯು ಅಸಂಸದೀಯ ಮತ್ತು ಅಪ್ರಬುದ್ಧವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ. 'ಅವರು ಯಾವುದನ್ನೂ ಅರ್ಥ ಮಾಡಿಕೊಳ್ಳುವುದೂ ಇಲ್ಲ ಹಾಗೂ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಹಾಕುವುದೂ ಇಲ್ಲ. ನನಗನ್ನಿಸುತ್ತದೆ ಅವರ ಹೇಳಿಕೆಯು ಅಸಂಸದೀಯ ಮತ್ತು ಅಪ್ರಬುದ್ಧವಾಗಿದೆ' ಎಂದು ಸಿಂಗ್ ಟೀಕಿಸಿದ್ದಾರೆ.
ಈ ಸರ್ಕಾರದ್ದು 'ನಾವಿಬ್ಬರು, ನಮಗಿಬ್ಬರು ನೀತಿ': ರಾಹುಲ್ ಗಾಂಧಿ ವಾಗ್ದಾಳಿ
ಫಿಂಗರ್ 4 ನಮ್ಮ ಜಾಗ
ಫಿಂಗರ್ 3ರ ಬಳಿ ಶಾಶ್ವತ ನೆಲೆಗಳನ್ನು ಸ್ಥಾಪಿಸಲಿರುವುದಾಗಿ ರಕ್ಷಣಾ ಸಚಿವರು ತಿಳಿಸಿದ್ದಾರೆ. ಆದರೆ ಫಿಂಗರ್ 4 ನಮ್ಮ ನೆಲೆ. ನಾವು ಅಲ್ಲಿರಬೇಕು. ಫಿಂಗರ್ 4ಇಂದ ಫಿಂಗರ್ 3ಗೆ ಹಿಂದಕ್ಕೆ ಸರಿಯಲಾಗಿದೆ. ನಮ್ಮ ಜಾಗವನ್ನು ಮೋದಿ ಸರ್ಕಾರ ಚೀನಾಗೆ ಬಿಟ್ಟುಕೊಟ್ಟಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು.
ಪ್ರಧಾನಿ ಹೇಡಿಯಾಗಿದ್ದಾರೆ
ಮೋದಿ ಸರ್ಕಾರ ಭಾರತದ ಭಾಗವನ್ನು ಚೀನಾಗೆ ಹಸ್ತಾಂತರಿಸುತ್ತಿದೆ ಹಾಗೂ ಅದನ್ನು ಪ್ರಶ್ನಿಸಲು ವಿರೋಧ ಪಕ್ಷಗಳಿಗೆ ಅವಕಾಶ ನೀಡುತ್ತಿಲ್ಲ. ಭಾರತೀಯ ಪಡೆಗಳನ್ನು ಏಕೆ ವಾಪಸ್ ಕರೆಸಿಕೊಳ್ಳಲಾಗುತ್ತಿದೆ? ಚೀನೀಯರ ವಿರುದ್ಧ ನಿಲ್ಲಲು ಸಾಧ್ಯವಾಗದೇ ಪ್ರಧಾನಿ ಹೇಡಿಯಂತಾಗಿದ್ದಾರೆ. ಪ್ರಧಾನಿ ನಮ್ಮ ಸೇನೆಯ ತ್ಯಾಗಕ್ಕೆ ಬೆಲೆ ನೀಡಿಲ್ಲ ಎಂದು ಆರೋಪಿಸಿದ್ದರು.
ಚೀನಾಕ್ಕೆ ಸಹಾಯ ಮಾಡುತ್ತಿರುವ ಸಿಂಗ್ರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಿರಿ: ರಾಹುಲ್ ಗಾಂಧಿ