ಕಠಿಣ, ತೀಕ್ಷ್ಣ ಪ್ರಶ್ನೆಗಳನ್ನೇ ಕೇಳಿ, ಆದರೆ... ಪ್ರತಿಪಕ್ಷಗಳಿಗೆ ಮೋದಿ ಮಾತು
ನವದೆಹಲಿ, ಜುಲೈ 19: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಸರ್ವಪಕ್ಷಗಳು ಚರ್ಚೆಗೆ ಸನ್ನದ್ಧವಾಗಿವೆ. ಸೋಮವಾರ ಬೆಳಿಗ್ಗೆ 11ರಿಂದ ಮೊದಲ ದಿನದ ಅಧಿವೇಶನ ಆರಂಭವಾಗಿದ್ದು, ದೇಶದ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ವಿರೋಧ ಪಕ್ಷಗಳನ್ನುದ್ದೇಶಿಸಿ ಮಾತನಾಡಿದ್ದು, "ವಿರೋಧ ಪಕ್ಷಗಳು ಕಠಿಣ ಹಾಗೂ ತೀಕ್ಷ್ಣ ಪ್ರಶ್ನೆಗಳನ್ನೇ ಕೇಳಿ. ಜೊತೆಗೆ ಆ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರಕ್ಕೆ ಅವಕಾಶ ಕೊಡಿ" ಎಂದು ಹೇಳಿದ್ದಾರೆ.
"ಎಲ್ಲಾ ಸಂಸದರು, ಸರ್ವ ಪಕ್ಷಗಳೂ ಸಂಸತ್ತಿನಲ್ಲಿ ಕಠಿಣ ಹಾಗೂ ನೇರ ಪ್ರಶ್ನೆಗಳನ್ನು ಕೇಳಬೇಕು. ಇದಕ್ಕೆ ಉತ್ತರಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕು. ಆರೋಗ್ಯಕರ ಚರ್ಚೆ ನಡೆಸಬೇಕು. ಶಿಸ್ತುಬದ್ಧ ವಾತಾವರಣದಲ್ಲಿ ಮಾತುಕತೆ ನಡೆಯಬೇಕು" ಎಂದು ಪ್ರತಿಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದಾರೆ.
"ಈ ಆರೋಗ್ಯಕರ ಚರ್ಚೆ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲಿದೆ. ಜನರಲ್ಲಿ ಸರ್ಕಾರದ ಬಗೆಗಿನ ನಂಬಿಕೆ ಬಲಗೊಳ್ಳಲಿದೆ. ಇದು ಅಭಿವೃದ್ಧಿಯನ್ನು ಮುಂದಿನ ಹಾದಿಗೆ ಕೊಂಡೊಯ್ಯಲಿದೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಮುಂಗಾರು ಅಧಿವೇಶನದ ಮುನ್ನ ಭಾನುವಾರ ಕೂಡ ಮೋದಿ ಸರ್ವಪಕ್ಷ ಸಭೆ ನಡೆಸಿದ್ದು, "ಪ್ರತಿಪಕ್ಷಗಳು ಸೇರಿದಂತೆ ಎಲ್ಲ ಸದಸ್ಯರ ಸಲಹೆಗಳು ಮೌಲ್ಯಯುತವಾಗಿವೆ. ಸರ್ವ ಸದಸ್ಯರ ಅಭಿಪ್ರಾಯದಂತೆ ಕಲಾಪ ನಡೆಯಲಿದೆ" ಎಂದು ಭರವಸೆ ನೀಡಿದ್ದರು. ಜನರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪಕ್ಷಗಳು ಸೌಹಾರ್ದಯುತವಾಗಿ ಮಾತನಾಡಬೇಕು ಹಾಗೂ ಅದಕ್ಕೆ ಪ್ರತಿಕ್ರಿಯೆ ನಡೆಯಲು ಸರ್ಕಾರಕ್ಕೆ ಅವಕಾಶ ನೀಡಬೇಕು. ಅಂಥ ವಾತಾವರಣ ಸೃಷ್ಟಿಸುವುದು ಎಲ್ಲರ ಜವಾಬ್ದಾರಿ ಎಂದಿದ್ದರು.
ಸಂಸತ್ ಮುಂಗಾರು ಅಧಿವೇಶನ; ಚರ್ಚೆಗೆ ಸರ್ವಪಕ್ಷಗಳು ಅಣಿ
ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಸದ್ಯಕ್ಕೆ ದೇಶದಲ್ಲಿನ ಸಮಸ್ಯೆಗಳಾದ ಇಂಧನ ಬೆಲೆ ಏರಿಕೆ, ಕೊರೊನಾ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆಯ ಕೊರತೆಯಂಥ ವಿಚಾರಗಳನ್ನು ವಿರೋಧ ಪಕ್ಷಗಳು ಚರ್ಚೆ ಮಾಡುವ ಸಾಧ್ಯತೆಯಿದೆ.
ಜುಲೈ 19ರಿಂದ 17ನೇ ಲೋಕಸಭೆಯ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಆಗಸ್ಟ್ 13ರಂದು ಮುಕ್ತಾಯವಾಗಲಿದೆ. ಅಧಿವೇಶನದ 19 ಕಲಾಪಗಳಲ್ಲಿ ದೇಶದ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ಕಲಾಪಗಳು ನಡೆಯಲಿವೆ.