ಜೂನ್ 16ರಿಂದ ತೆರೆಯಲಿವೆ ಸ್ಮಾರಕಗಳು, ಪಾರಂಪರಿಕ ತಾಣಗಳು
ನವದೆಹಲಿ, ಜೂನ್ 14: ಸ್ಮಾರಕಗಳು ಹಾಗೂ ಪಾರಂಪರಿಕ ತಾಣಗಳು ಜೂನ್ 16ರಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಸರ್ವೇಕ್ಷಣಾ ಸಂಸ್ಥೆ ಮಾಹಿತಿ ನೀಡಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್ಐ) ಅಡಿಯಲ್ಲಿರುವ ಎಲ್ಲಾಸಂರಕ್ಷಿತ ಸ್ಮಾರಕಗಳು / ಪ್ರವಾಸಿ ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಜೂನ್ 16 ರಿಂದ ತೆರೆಯಲಾಗುವುದು ಎಂದು ಸರ್ವೇಕ್ಷಣಾ ಸಂಸ್ಥೆ ಪ್ರಕಟಿಸಿದೆ.
100 ವರ್ಷಕ್ಕಿಂತ ಹಳೆಯದಾದ ಸ್ಮಾರಕಗಳೂ ಸೇರಿದಂತೆ ಒಟ್ಟು 3,684 ಸ್ಮಾರಕಗಳು ಎಎಸ್ಐ ವ್ಯಾಪ್ತಿಯಲ್ಲಿದೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ 741 ಸ್ಮಾರಕಗಳಿವೆ. ಅದರಲ್ಲಿ ವಿಶ್ವ ಪ್ರಸಿದ್ಧ ತಾಜ್ ಮಹಲ್ ಮತ್ತು ಆಗ್ರಾ ಕೋಟೆಗಳು ಸೇರಿದೆ. ಕರ್ನಾಟಕದ ಹಂಪಿ, ಬಾದಾಮಿ, ಪಟ್ಟದಕಲ್ಲುಗೋಳಗುಮ್ಮಟ ಸೇರಿ ಅನೇಕ ಐತಿಹಾಸಿಕ ಸ್ಮಾರಕಗಳು ಸಹ ಎಎಸ್ಐ ವ್ಯಾಪ್ತಿಗೆ ಬರುತ್ತದೆ.
ಈ ವರ್ಷದ ಏಪ್ರಿಲ್ನಲ್ಲಿ ಕೊರೊನಾದ ಎರಡನೇ ಅಲೆ ಪ್ರಾರಂಭವಾದಾಗ ಎಲ್ಲಾ ಸ್ಮಾರಕಗಳನ್ನು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ 70,421 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಕಳೆದ 72 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಒಂದೇ ದಿನದಲ್ಲಿ 1,19,501 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 3921 ಮಂದಿ ಮೃತಪಟ್ಟಿದ್ದಾರೆ, ಒಟ್ಟು 2,95,10,410 ಕೊರೊನಾ ಸೋಂಕಿತರಿದ್ದಾರೆ, ಇದುವರೆಗೆ 2,81,62,947 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದುವರೆಗೆ 3,74,305 ಮಂದಿ ಮೃತಪಟ್ಟಿದ್ದಾರೆ, ಒಟ್ಟು 9,73,158 ಸಕ್ರಿಯ ಪ್ರಕರಣಗಳಿವೆ, ಇದುವರೆಗೆ 25,48,49,301 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.