ಸಾಧು ಚಿನ್ನದ ಕನಸಿಗೆ ಬ್ರೇಕ್ ಬಿತ್ತು: ಉತ್ಖನನ ಸ್ಟಾಪ್!
ಚಿನ್ನ ಚಿನ್ನ ಆಸೈ ಭಗ್ನ: ಉತ್ತರ ಪ್ರದೇಶದ ಉನ್ನಾವ್ ಪ್ರದೇಶದ ದೌಂಡಿಯಾಕಲಾದಲ್ಲಿರುವ ಪುರಾತನ ದೇವಸ್ಥಾನದ ಸುತ್ತಮುತ್ತ ಸುಮಾರು 10 ದಿನಗಳ ಕಾಲ ನಿಧಿ ಶೋಧ ನಡೆಸಿದ ASI, ಅಲ್ಲಿರುವುದು ಹೊನ್ನಲ್ಲ ಮಣ್ಣು ಎಂದಿದೆ. ಇಂದು ಮಂಗಳವಾರ ಬೆಳಗ್ಗೆ ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ದೌಂಡಿಯಾಕಲಾದಲ್ಲಿರುವ ರಾಜಾರಾವ್ ರಾಮ ಬಕ್ಸ್ ಸಿಂಗ್ ಕೋಟೆಯ ಆವರಣದಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯದ ಕೆಳಗೆ ಸಾವಿರ ಟನ್ ಚಿನ್ನವಿರುವುದಾಗಿ ಸಾಧು ಶೋಭನ ಸರಕಾರ್ ತಿಳಿಸಿದ್ದರು. ಇದನ್ನೇ ನಂಬಿಕೊಂಡ ಕೇಂದ್ರ ಸರ್ಕಾರ ದೇವಾಲಯದ ಆವರಣದಲ್ಲಿ ಉತ್ಖನನ ಕಾರ್ಯ ನಡೆಸುವಂತೆ ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಕೆ ಮಿಶ್ರಾ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ ವರದಿ ನೀಡುವಂತೆ ಸೂಚಿಸಿತ್ತು.
ಸರ್ಕಾರದ ಸೂಚನೆಯಂತೆ ಅಕ್ಟೋಬರ್ 18ರಂದು ಉತ್ಖನನ ಕಾರ್ಯ ಆರಂಭಿಸಿದ ತಂಡವು, ಇಂದು ತನ್ನ ಕಾರ್ಯ ಪೂರ್ಣಗೊಳಿಸಿದ್ದು, ದೇವಾಲಯದ ಆವರಣದಲ್ಲಿ ಯಾವುದೇ ಚಿನ್ನದ ನಿಧಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಬ್ರಿಟೀಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ 1857ರಲ್ಲಿ ಹುತಾತ್ಮರಾದ ರಾಜಾ ರಾವ್ ರಾಮಬಕ್ಸ್ ಸಿಂಗ್ ಅವರಿಗೆ ಸೇರಿದ ಕೋಟೆ ಪ್ರದೇಶ ಇದಾಗಿದೆ.