ಹರಿಯಾಣದಲ್ಲಿ 7000 ವರ್ಷಗಳ ಹಿಂದಿನ ಹರಪ್ಪ ನಗರದ ಉತ್ಖನನ
ನವದೆಹಲಿ, ಮೇ 9: ಜಾಗತಿಕ ಮಟ್ಟದಲ್ಲಿ ಹರಪ್ಪ ನಾಗರಿಕತೆಗೆ ಹರಿಯಾಣದ ರಾಖಿಗರ್ಹಿ ಪ್ರಸಿದ್ಧವಾಗಿದೆ. ಈಗ ಅದೇ ರಾಖಿಗರ್ಹಿಯಲ್ಲಿ 7,000 ವರ್ಷಗಳಷ್ಟು ಹಳೆಯದಾದ ಯೋಜಿತ ಹರಪ್ಪನ್ ನಗರದಲ್ಲಿ ಮೇ ಅಂತ್ಯದ ವೇಳೆಗೆ ಭಾರತೀಯ ಪುರಾತತ್ವ ಸಮೀಕ್ಷೆ (ASI)ಯು ಹೊಸ ಉತ್ಖನನಗಳನ್ನು ನಡೆಸುತ್ತಿದೆ.
ಉತ್ಖನನದ ಅಧ್ಯಯನದಿಂದ ರಾಖಿಗರ್ಹಿ ಉತ್ತಮ ಯೋಜಿತ ಹಾಗೂ ವ್ಯವಸ್ಥೆಯ ನಗರವಾಗಿತ್ತು ಎಂಬುದನ್ನು ಬಹಿರಂಗಪಡಿಸಿದೆ. ಇನ್ನು ಉತ್ಖನನದ ಸಮಯದಲ್ಲಿ ಅಧಿಕಾರಿಗಳು ಹರಪ್ಪಾ ಸಂಸ್ಕೃತಿಯ ಅವಶೇಷಗಳನ್ನು ಅಧ್ಯಯನ ಮಾಡಿದ್ದಾರೆ. ನಗರದಲ್ಲಿನ ಬೀದಿಗಳು, ಪಕ್ಕದ ಗೋಡೆಗಳು ಮತ್ತು ಬಹುಮಹಡಿ ಮನೆಗಳು ಸೇರಿದಂತೆ ನಗರದಲ್ಲಿ ಯೋಜನೆಗೆ ಸಂಬಂಧಿಸಿದ ಪುರಾವೆಗಳು ಪತ್ತೆಯಾಗಿವೆ.
ಹರಪ್ಪದಲ್ಲಿ ಸಿಕ್ಕರು ಪ್ರಾಚೀನ ನಾಗರಿಕತೆಯ ದಂಪತಿ!
5,000 ವರ್ಷಗಳಷ್ಟು ಹಳೆಯದಾದ ಆಭರಣ ತಯಾರಿಸುವ ಕಾರ್ಖಾನೆಯೊಂದು ಪತ್ತೆಯಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಆಭರಣಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು ಎಂಬುದು ಗೊತ್ತಾಗಿದೆ.
ನಗರದ ನಿರ್ಮಾಣಕ್ಕೆ ಉತ್ತಮ ತಂತ್ರಜ್ಞಾನ ಬಳಕೆ
ಅಧಿಕಾರಿಗಳ ಪ್ರಕಾರ, ಆ ಸಮಯದಲ್ಲೇ ಈ ನಗರಗಳನ್ನು ನಿರ್ಮಿಸುವುದಕ್ಕೆ ಉತ್ತಮ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿತ್ತು. ದೊಡ್ಡ ನಗರಗಳನ್ನು ನಿರ್ಮಿಸಲು ಈಗ ಬಳಸುತ್ತಿರುವ ತಂತ್ರಗಳಾದ ನೇರವಾದ ಬೀದಿಗಳು, ಚರಂಡಿಗಳು, ಕಸಕ್ಕಾಗಿ ಬೀದಿಗಳ ಮೂಲೆಗಳಲ್ಲಿ ಹಾಕಲಾದ ಡಸ್ಟ್ಬಿನ್ಗಳನ್ನು ಆ ಸಮಯದಲ್ಲಿ ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇನ್ನು, ಉತ್ಖನನದ ವೇಳೆ ಇಬ್ಬರು ಮಹಿಳೆಯರ ಅಸ್ಥಿಪಂಜರ ಹಾಗೂ ಆಭರಣಗಳು ಪತ್ತೆಯಾಗಿವೆ. ಅಸ್ಥಿಪಂಜರಗಳ ಜೊತೆಗೆ ಮೃತರು ಬಳಸಿದ ಪಾತ್ರೆಗಳನ್ನೂ ಹೂಳಲಾಗಿತ್ತು.
ಹರಪ್ಪ ಸಂಸ್ಕೃತಿಯ ಮೆಟ್ರೋಪಾಲಿಟನ್ ಕೇಂದ್ರ ರಾಖಿಗರ್ಹಿ
ಹರಪ್ಪ ನಾಗರಿಕತೆಯಯ ಸಂದರ್ಭದಲ್ಲಿ ರಾಖಿಗರ್ಹಿ ಎನ್ನುವುದು ಅತಿದೊಡ್ಡ ಪುರಾತತ್ವ ಶಾಸ್ತ್ರದ ಸ್ಥಳವಾಗಿದೆ. ಇದು ಎರಡು ಆಧುನಿಕ ಗ್ರಾಮಗಳಾದ ರಾಖಿ-ಶಾಹಪುರ್ ಮತ್ತು ರಾಖಿಗರ್ಹಿ-ಖಾಶ್ ಅಡಿಯಲ್ಲಿ ಬರುತ್ತದೆ. ರಾಖಿಗರ್ಹಿಯನ್ನು ಹರಪ್ಪ ಸಂಸ್ಕೃತಿಯ ಪ್ರಮುಖ ಮೆಟ್ರೋಪಾಲಿಟನ್ ಕೇಂದ್ರ ಎಂದು ವರ್ಗೀಕರಿಸಲಾಗಿದೆ. ಕಳೆದ 1969ರಲ್ಲಿ ಪ್ರೊಫೆಸರ್ ಸೂರಜ್ ಭಾನ್ ನಡೆಸಿದ ತನಿಖೆ ವೇಳೆ ರಾಖಿಗರ್ಹಿ ಮತ್ತು ವಸಾಹತುಗಳ ಪುರಾತತ್ತ್ವ ಶಾಸ್ತ್ರದ ಅವಶೇಷಗಳು ಹರಪ್ಪ ಸಂಸ್ಕೃತಿಯ ಸ್ವರೂಪವನ್ನು ಹೊಂದಿವೆ ಎಂದು ಹೇಳಿತ್ತು.
ಭಾರತೀಯ ಪುರಾತತ್ವ ಇಲಾಖೆ ಮತ್ತು ಪುಣೆ ಡೆಕ್ಕನ್ ಕಾಲೇಜು ನಡೆಸಿದ ತನಿಖೆಯಲ್ಲಿ, ಈ ಸ್ಥಳವು 500 ಹೆಕ್ಟೇರ್ನಲ್ಲಿ ಕ್ಲಸ್ಟರ್ ಟೌನ್ಶಿಪ್ ಅನ್ನು ಹೊಂದಿದೆ ಎಂಬುದು ಬೆಳಕಿಗೆ ಬಂದಿದೆ. ಇದು RGR- 1 ರಿಂದ 11 ಎಂದು ಹೆಸರಿಸಲಾದ 11 ದಿಬ್ಬಗಳನ್ನು ಒಳಗೊಂಡಿದೆ.
ನಗರ ನಿರ್ಮಾಣವಾದ ವೈಖರಿಯ ಬಗ್ಗೆ ಉತ್ಖನನಗ ವೇಳೆ ಪತ್ತೆ
ಕಳೆದ 1997-98 ರಿಂದ 1999-2000ರ ಅವಧಿಯಲ್ಲಿ ಅಮರೇಂದ್ರ ನಾಥ್ ನಿರ್ದೇಶನದ ಅಡಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನಗಳು ಪೂರ್ವ-ರಚನೆಯ ಹಂತದಿಂದ ಪ್ರಬುದ್ಧ ಹರಪ್ಪ ಅವಧಿಯವರೆಗೆ 5ನೇ ಸಹಸ್ರಮಾನ ಬಿಸಿಇನಿಂದ 3ನೇ ಸಹಸ್ರಮಾನದ ಬ ಬಿಸಿಇವರೆಗಿನ ಸಮಯವನ್ನು ಒಳಗೊಂಡಿರುವ ವಿವಿಧ ಔದ್ಯೋಗಿಕ ಹಂತಗಳನ್ನು ಬಹಿರಂಗಪಡಿಸಿತು.
"ಆರ್ ಜಿಆರ್-1ರ ಉತ್ಖನನದ ಸಮಯದಲ್ಲಿ, 2.5 ಮೀಟರ್ ಅಗಲದ ಬೀದಿಗಳು ಮತ್ತು ಗೋಡೆಗಳು ಕಂಡುಬಂದಿವೆ. ಇವೆಲ್ಲವೂ ಹರಪ್ಪ ನಗರದ ಯೋಜನೆ ನಿರ್ಮಾಣ ಕೌಶಲವನ್ನು ತೋರಿಸುತ್ತದೆ. ಮನೆ ಸಂಕೀರ್ಣದ ಅವಶೇಷಗಳು ಸಹ ಕಂಡು ಬಂದಿವೆ. ಹರಪ್ಪ ನಾಗರಿಕತೆಯ ಕಾಲದಲ್ಲಿ ಇಂಥ ಮನೆಗಳಲ್ಲಿ ಜನರು ಹೇಗೆ ವಾಸಿಸುತ್ತಿದ್ದರು ಎಂಬುದನ್ನು ತೋರಿಸಲಾಗಿದೆ. ಮಣ್ಣಿನ ಒಲೆಗಳು ಮತ್ತು ಪ್ರಾಚೀನತೆಯೂ ಕಂಡುಬಂದಿದೆ," ಎಂದು ಎಎಸ್ಐ ಜಂಟಿ ಮಹಾನಿರ್ದೇಶಕ ಸಂಜಯ್ ಮಂಜುಳ್ ಹೇಳಿದರು.
ಆರ್ ಜಿಆರ್-1 ಮತ್ತು 3ರಲ್ಲಿ ಕಂಡುಬರುವ ಅವಶೇಷಗಳಲ್ಲಿ ಆನೆ ಉಬ್ಬು ಕೆತ್ತನೆ, ಹರಪ್ಪ ಲಿಪಿಯ ಸ್ಟೀಟೈಟ್ ಮುದ್ರೆ, ಕಪ್ಪು ಮಣ್ಣಿನ ಮುದ್ರೆ, ಟೆರಾಕ್ಟಾಟಾದ ಪ್ರಾಣಿಗಳ ಪ್ರತಿಮೆಗಳು ಮತ್ತು ಸ್ಟೀಟೈಟ್ ನಿರ್ಮಿತ ಶ್ವಾನ, ಹೆಚ್ಚಿನ ಸಂಖ್ಯೆಯ ಸ್ಟೀಟೈಟ್ ಮಣಿಗಳು, ಅರೆ ಬೆಲೆಬಾಳುವ ಕಲ್ಲಿನ ಮಣಿಗಳು, ತಾಮ್ರದ ವಸ್ತುಗಳು ಪತ್ತೆಯಾಗಿವೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಉತ್ಖನನ ಕಾರ್ಯ ಆರಂಭ
ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಮತ್ತು ಹರಿಯಾಣ ಸರ್ಕಾರದ ನಡುವೆ ತಿಳುವಳಿಕೆ ಪತ್ರದ ಪ್ರಕ್ರಿಯೆ ನಡೆಯುತ್ತಿದೆ. ಅದರ ಅಡಿಯಲ್ಲಿ ರಾಖಿಗರ್ಹಿ ಪ್ರಾಚೀನ ವಸ್ತುಗಳನ್ನು ಹರಿಯಾಣ ಸರ್ಕಾರದ ಅಡಿಯಲ್ಲಿ ಇರುವ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಸಂಬಂಧ 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಎಎಸ್ಐ ಉತ್ಖನನ ಪ್ರಾರಂಭಿಸುತ್ತದೆ. ತದನಂತರ ಈ ದಿಬ್ಬಗಳನ್ನು ತೆರೆಯಲಾಗುತ್ತದೆ, ಅಲ್ಲಿಂದ ಮುಂದೆ ಪ್ರವಾಸಿಗರು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಪ್ರವಾಸಿಗರು ಅವಶೇಷಗಳನ್ನು ನೋಡಿದಾಗ ಪುರಾತನ ಮತ್ತು ಅದರ ಬಗ್ಗೆ ತಿಳಿಯಲು ಪ್ರವಾಸಿಗರ ದಂಡು ರಾಖಿಗರ್ಹಿ ಕಡೆಗೆ ಹರಿದು ಬರುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರವು 2020-21ರ ಕೇಂದ್ರ ಬಜೆಟ್ನಲ್ಲಿ ಮಾಡಿದ ಘೋಷಣೆಯ ಪ್ರಕಾರ, 2022ರ ಫೆಬ್ರವರಿ 24ರಂದು ಉತ್ಖನನ ಪ್ರಾರಂಭಿಸಿದ ಐದು ಅತ್ಯುತ್ತಮ ಸಾಂಪ್ರದಾಯಿಕ ಸ್ಥಳಗಳಲ್ಲಿ ಒಂದಾಗಿ ಈ ಸ್ಥಳವನ್ನು ಅಭಿವೃದ್ಧಿಪಡಿಸಲಾಗುವುದು.
1998ರಲ್ಲಿ ಮೊದಲ ಬಾರಿ ಎಎಸ್ಐ ಉತ್ಖನನ:
ರಚನಾತ್ಮಕ ಅವಶೇಷಗಳನ್ನು ಬಹಿರಂಗಪಡಿಸುವುದರ ಜೊತೆಗೆ ರಾಖಿಗರ್ಹಿಗೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದು ಇದರ ಮುಖ್ಯ ಗುರಿಯಾಗಿದೆ. ಅಲ್ಲದೆ, ರಾಖಿಗರ್ಹಿಯಲ್ಲಿ ಹರಪ್ಪ ವಸಾಹತು ಮತ್ತು ಏಳು ದಿಬ್ಬಗಳ ಪರಸ್ಪರ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ಇದರ ಗುರಿಯಾಗಿದೆ. ಮೊದಲ ಬಾರಿಗೆ, ಈ ಸ್ಥಳವನ್ನು 1998-2001ರಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಉತ್ಖನನ ಮಾಡಿತ್ತು.