ಮಹಾಭಾರತ ಅರಗಿನ ಅರಮನೆಯ ಉತ್ಖನನಕ್ಕೆ ಅಸ್ತು
Recommended Video
ಮೀರತ್, ನವೆಂಬರ್ 02 : ಮಹಾಭಾರತದಲ್ಲಿ ದುಷ್ಟ ಕೌರವರ ಕುತಂತ್ರಕ್ಕೆ ಬಲಿಯಾಗದೆ, ಕ್ಷಣಾರ್ಧದಲ್ಲಿ ಸುಟ್ಟುಹೋಗುವ ಅರಗಿನ ಮನೆ(ಲಾಕ್ಷಾಗೃಹ)ಯಿಂದ ಪಾಂಡವರು ದ್ರೌಪದಿಯ ಸಮೇತ ಹೇಗೆ ಪಾರಾದರು ಎಂಬುದು ರೋಚಕ ಅಧ್ಯಾಯ.
ಲಕ್ಷಗೃಹ ಎಂದೂ ಕರೆಯಲಾಗುವ ಇದೇ ಅರಗಿನ ಮನೆ ಈಗಲೂ ಇದೆ ಎನ್ನುವ ಪ್ರದೇಶವನ್ನು ಉತ್ಖನನ ಮಾಡಲು ಭಾರತೀಯ ಪುರಾತತ್ತ್ವಶಾಸ್ತ್ರ ಇಲಾಖೆ ಅನುಮತಿ ನೀಡಿದೆ. ಪಾಂಡವರು ಅರಗಿನ ಮನೆಯಿಂದ ಪಾರಾಗಿದ್ದರೆನ್ನಲಾದ ಸುರಂಗ ಈಗಲೂ ಇದೆ.
ಬಾಘಪಟ್ ಜಿಲ್ಲೆಯ ಬರ್ನಾವಾ ಎಂಬಲ್ಲಿ ಉತ್ಖನನ ನಡೆಯಲಿದ್ದು, ಈ ಉತ್ಖನನಕ್ಕಾಗಿ ಪುರಾತತ್ವ ತಜ್ಞರು, ಇತಿಹಾಸಕಾರರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಭಾರತೀಯ ಪುರಾತತ್ತ್ವಶಾಸ್ತ್ರ ಇಲಾಖೆಯ ಅಧಿಕಾರಿಗಳ ಪ್ರಕಾರ ಇದೇ ವರ್ಷ ಡಿಸೆಂಬರ್ ನಲ್ಲಿ ಉತ್ಖನನ ನಡೆಯಲಿದೆ. ಮೂರು ತಿಂಗಳು ಉತ್ಖನನ ನಡೆಯಲಿದೆ.
ಬರ್ನಾವಾ ಎಂಬ ಹೆಸರು ಕೂಡ ವಾರಣಾವತ ಎಂಬ ಹೆಸರಿನ ಅಪಭ್ರಂಶವಾಗಿದೆ. ಮಹಾಭಾರತದ ಸಮಯದಲ್ಲಿ ಪಾಂಡವರು ಕೌರವರಿಂದ 5 ಹಳ್ಳಿಗಳನ್ನು ರಾಜ್ಯಭಾರ ನಡೆಸಲು ಕೇಳಿಕೊಂಡಿದ್ದರು. ಆ ಐದು ಹಳ್ಳಿಗಳಲ್ಲಿ ಒಂದು ಹಳ್ಳಿಯೇ ವಾರಣಾವತ ಅರ್ಥಾತ್ ಬರ್ನಾವಾ.
ನಿವೃತ್ತ ಪುರಾತತ್ತ್ವಶಾಸ್ತ್ರ ಪಂಡಿತ ಕೆಕೆ ಶರ್ಮಾ ಅವರ ಪ್ರಕಾರ, ಮಹಾಭಾರತದಲ್ಲಿ ಅರಗಿನ ಮನೆಯ ಕಥೆ ಭಾರೀ ಮಹತ್ವ ಪಡೆದುಕೊಂಡಿತ್ತು. ಕಿಡಿ ಹಚ್ಚಿದರೆ ಸುಟ್ಟುಹೋಗುವ ಮನೆಯನ್ನು ಕೌರವರು ನಿರ್ಮಿಸಿ, ಪಾಂಡವರನ್ನು ಹತ್ಯೆಗೈಯಲು ಹೊಂಚು ಹಾಕಿದ್ದರು. ಆದರೆ, ಪಾಂಡವರು ಸುರಂಗದ ಮೂಲಕ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದರು.
ಚಂದಯಾನ ಮತ್ತು ಸಿನೌಲಿ ಎಂಬಲ್ಲಿ ಕೂಡ ಉತ್ಖನನ ನಡೆಸಲಾಗಿದ್ದು, ಅಲ್ಲಿಯೂ ಮಹತ್ವದ ವಸ್ತುಗಳು ಸಿಕ್ಕಿವೆ. ಇದೇ ಸಿನೌಲಿ ಪ್ರದೇಶದಲ್ಲಿ ಪಾಂಡವರು ಪಾರಾಗಿದ್ದರೆನ್ನಲಾದ ಸುರಂಗವೂ ಸಿಕ್ಕಿದೆ. ಆದರೆ, ಇಲ್ಲಿಯವರೆಗೆ ಈ ಸುರಂಗದೊಳಗೆ ಹಲವಾರು ತಿರುವುಗಳಿರುವುದರಿಂದ ಆಳವಾಗಿ ಹೋಗಿ ಅಧ್ಯಯನ ಮಾಡಿಲ್ಲ.