ಅಸಾನಿ ಚಂಡಮಾರುತದ ಎಫೆಕ್ಟ್: ಉತ್ತರದಲ್ಲಿ ಬಿಸಿಗಾಳಿ, ದಕ್ಷಿಣ, ವಾಯವ್ಯದಲ್ಲಿ ಮಳೆಯೋ ಮಳೆ
ನವದೆಹಲಿ, ಮೇ 10: ಅಸಾನಿ ಚಂಡಮಾರುತದಿಂದಾಗಿ ಗಂಟೆಗೆ 120 ಕಿಮೀ ವೇಗದಲ್ಲಿ ಬೀಸುವ ಗಾಳಿಯು ಪಶ್ಚಿಮ ಮಧ್ಯ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ. ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ದುರ್ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಅಸಾನಿ ಚಂಡಮಾರುತವು ಭೂಕುಸಿತವನ್ನು ಉಂಟುಮಾಡುವ ಸಾಧ್ಯತೆಗಳು ತೀರಾ ವಿರಳವಾಗಿದ್ದರೂ, ಇದರಿಂದ ಪೂರ್ವ ಕರಾವಳಿಯಲ್ಲಿ ಮಳೆ ಮತ್ತು ಹೆಚ್ಚಿನ ಗಾಳಿ ಮತ್ತು ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತದೆ.
Breaking; ಚಂಡಮಾರುತ, ಕರ್ನಾಟಕದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಸೋಮವಾರ ಮಧ್ಯಾಹ್ನದ ಹೊತ್ತಿಗೆ ಅಸಾನಿ ಚಂಡಮಾರುತವು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿತ್ತು. ಪಶ್ಚಿಮ-ವಾಯುವ್ಯಕ್ಕೆ ಸುಮಾರು 820 ಕಿ. ಮೀ., ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 450 ಕಿ. ಮೀ. ಆಗ್ನೇಯಕ್ಕೆ ಮತ್ತು ಒಡಿಶಾದ ಪುರಿಯಿಂದ ದಕ್ಷಿಣಕ್ಕೆ 610 ಕಿ. ಮೀ. ದೂರದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಐಎಂಡಿ ಹೇಳಿದೆ.
ಚಂಡಮಾರುತದ ಪರಿಣಾಮ ಒಡಿಶಾದಲ್ಲಿ ಖುರ್ದಾ, ಗಂಜಾಂ, ಪುರಿ, ಕಟಕ್ ಮತ್ತು ಭದ್ರಕ್ ಜಿಲ್ಲೆಗಳಲ್ಲಿ ಎರಡರಿಂದ ಮೂರು ಬಾರಿ ಮಳೆಯಾಗಿದೆ. ಒಡಿಶಾ ಸರ್ಕಾರ ಕರಾವಳಿ ಜಿಲ್ಲೆಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಚಿಂತನೆ ನಡೆಸಿದೆ. ಅಸಾನಿ ಚಂಡಮಾರುತದ ಪರಿಣಾಮದ ಬಗ್ಗೆ ಎಲ್ಲಾ ಬಂದರುಗಳಲ್ಲಿ, ಕರಾವಳಿಯ ಸಮೀಪಕ್ಕೆ ಹಡಗುಗಳು ಬರದಂತೆ ಎಚ್ಚರಿಕೆ ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ 2-3 ದಿನಗಳಲ್ಲಿ ಕೋಲ್ಕತ್ತಾ, ಹೌರಾ, ಪುರ್ಬಾ ಮೇದಿನಿಪುರ್, ಉತ್ತರ ಮತ್ತು ದಕ್ಷಿಣ 24 ಪರಗಣಗಳು ಮತ್ತು ನಾಡಿಯಾ ಜಿಲ್ಲೆಗಳು ಸೇರಿದಂತೆ ದಕ್ಷಿಣ ಭಾಗಗಳಲ್ಲಿ ಚಂಡಮಾರುತದಿಂದಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅಸಾನಿ ಚಂಡಮಾರುತದ ಚಲನೆ
"ಅಸಾನಿ ಚಂಡಮಾರುತವು ಮಂಗಳವಾರದವರೆಗೆ ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದೆ. ಉತ್ತರ ಆಂಧ್ರ ಪ್ರದೇಶ ಮತ್ತು ಒಡಿಶಾ ಕರಾವಳಿಯಿಂದ ಪಶ್ಚಿಮ ಮಧ್ಯ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಗೆ ತಲುಪುವ ಸಾಧ್ಯತೆಯಿದೆ. ನಂತರ, ಇದು ಉತ್ತರ-ಈಶಾನ್ಯಕ್ಕೆ ಮರಳುವ ಸಾಧ್ಯತೆಯಿದೆ. ಒಡಿಶಾ ಕರಾವಳಿಯಿಂದ ವಾಯುವ್ಯ ಬಂಗಾಳ ಕೊಲ್ಲಿಯ ಕಡೆಗೆ ಚಲಿಸುತ್ತದೆ. ನಂತರ ಮುಂದಿನ 24 ಗಂಟೆಗಳಲ್ಲಿ ಇದು ಕ್ರಮೇಣ ದುರ್ಬಲಗೊಂಡ ಚಂಡಮಾರುತವಾಗಿ ಪರಿಣಮಿಸುವ ಸಾಧ್ಯತೆ ಇದೆ" ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಅಸಾನಿಗೆ ಒಳ ಗಾಳಿಯನ್ನು ಸೆಳೆಯುವ ಸಾಮರ್ಥ್ಯ
ಅಸಾನಿ ಚಂಡಮಾರುತವು ಮರಳಲು ಪ್ರಾರಂಭಿಸಿದಾಗ, ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ತಾಪಮಾನವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. "ಅಸಾನಿ ಚಂಡಮಾರುತವು ಕರಾವಳಿಯನ್ನು ಸಮೀಪಿಸುತ್ತಿದ್ದಂತೆ, ಅದು ಭೂಮಿಯಿಂದ ಸಾಕಷ್ಟು ಒಣ ಗಾಳಿಯನ್ನು ಸೆಳೆಯಲು ಪ್ರಾರಂಭಿಸುತ್ತದೆ. ಒಣ ಗಾಳಿಯನ್ನು ಹೀರಿಕೊಳ್ಳುವುದರಿಂದ ವಾಯುವ್ಯ ಮತ್ತು ಮಧ್ಯ ಭಾರತದ ಮೇಲೆ ಬೆಚ್ಚಗಿನ, ಶುಷ್ಕ ಪಶ್ಚಿಮ ಮತ್ತು ವಾಯುವ್ಯ ಮಾರುತಗಳ ಆಕ್ರಮಣಕ್ಕೆ ಕಾರಣವಾಗುತ್ತದೆ" ಎಂದು ಕೇರಳದ ಹವಾಮಾನ ಬದಲಾವಣೆ ಅಧ್ಯಯನ ಸಂಸ್ಥೆಯ ನಿರ್ದೇಶಕ ಮತ್ತು ಐಎಂಡಿಯ ಮಾಜಿ ವಿಜ್ಞಾನಿ ಡಿ. ಎಸ್. ಪೈ ಹೇಳಿದ್ದಾರೆ.
ಈಗಾಗಲೇ ಶುಷ್ಕ ಗಾಳಿಯನ್ನು ಎಳೆಯಲು ಪ್ರಾರಂಭವಾಗಿದ್ದು, ಸುಮಾರು ಮೇ 13 ರವರೆಗೆ ಮಧ್ಯ ಮತ್ತು ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಲಿದೆ.
ಉತ್ತರ ಮತ್ತು ದಕ್ಷಿಣದ ಮಹಾರಾಷ್ಟ್ರದಲ್ಲಿ ಬಿಸಿಗಾಳಿ
ರಾಜಸ್ಥಾನದ ಕೆಲವು ಭಾಗಗಳಲ್ಲಿ ಮೇ 9 ರಿಂದ 13 ರವರೆಗೆ, ರಾಜ್ಯದ ಪಶ್ಚಿಮ ಭಾಗಗಳಲ್ಲಿ ಮೇ 10 ರಿಂದ 12ರವರೆಗೆ ಪ್ರತ್ಯೇಕವಾದ ತೀವ್ರ ಶಾಖದ ಅಲೆಗಳ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಗುಜರಾತಿನಲ್ಲಿ ಮೇ 9 ಮತ್ತು 10, ಮಹಾರಾಷ್ಟ್ರದ ವಿದರ್ಭ ಮತ್ತು ಮಧ್ಯಪ್ರದೇಶದಲ್ಲಿ ಮೇ 9 ರಿಂದ 13, ದಕ್ಷಿಣ ಹರಿಯಾಣ ಮತ್ತು ದಕ್ಷಿಣ ಪಂಜಾಬ್ ಮೇ 10 ರಿಂದ 13 ಮತ್ತು ದೆಹಲಿಯಲ್ಲಿ ಮೇ 11 ರಿಂದ 13 ಬಿಸಿಗಾಳಿ ಬೀಸುವ ಬಗ್ಗೆ ಎಚ್ಚರಿಕೆ ನೀಡಿದೆ.
ಮುಂದಿನ ನಾಲ್ಕು ದಿನಗಳಲ್ಲಿ ದಕ್ಷಿಣ ಪಂಜಾಬ್, ದಕ್ಷಿಣ ಹರಿಯಾಣ-ದೆಹಲಿ, ರಾಜಸ್ಥಾನ ಮತ್ತು ಉತ್ತರ ಮಧ್ಯಪ್ರದೇಶದಲ್ಲಿ ಗರಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ ಮತ್ತು ನಂತರ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ರಾಜ್ಯಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ
ಉತ್ತರ ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಸೋಮವಾರ ಸಾಧಾರಣದಿಂದ ಭಾರೀ ಮಳೆಯಾಗಿದೆ. ವಿವಿಧ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಗಂಟೆಗೆ 40-60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಅಮರಾವತಿ ಬುಲೆಟಿನ್ನಲ್ಲಿ ಮಾಹಿತಿ ನೀಡಲಾಗಿದೆ. ವಿಶಾಖಪಟ್ಟಣಂನಲ್ಲಿರುವ ಸೈಕ್ಲೋನ್ ವಾರ್ನಿಂಗ್ ಸೆಂಟರ್ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ.
ಆಂಧ್ರಪ್ರದೇಶದ ವಿಜಯನಗರ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ ಮತ್ತು ಎಲೂರು ಜಿಲ್ಲೆಗಳಲ್ಲಿ 2 ಸೆ.ಮೀ ನಿಂದ 8.5 ಸೆ ಮೀವರೆಗಿನ ಸಾಧಾರಣದಿಂದ ಭಾರೀ ಮಳೆಯಾಗಿದ್ದು, ಬಿರುಗಾಳಿಯೂ ಬೀಸಿದೆ. ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ, ನರಸಾಪುರಂ, ಪೆಡವೇಗಿ, ಮುದಿನೇಪಲ್ಲಿ ಮತ್ತು ಭೀಮದೊಳೆ ಪ್ರದೇಶಗಳಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ.