ಹಿಂದುತ್ವ ವಿಚಾರ: ಮೋಹನ್ ಭಾಗವತ್, ಅಸಾದುದ್ದೀನ್ ಓವೈಸಿ ವಾಕ್ಸಮರ
ನವದೆಹಲಿ, ಜುಲೈ 05: 'ಹಿಂದುತ್ವ' ವಿಚಾರವಾಗಿ ಆರ್ಎಸ್ಎಸ್ ಮುಖ್ಯಸ್ಥ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಕ್ಸಮರ ನಡೆಸಿದ್ದಾರೆ. ಮುಸ್ಲಿಮರು ಭಾರತ ಬಿಟ್ಟು ಹೋಗಬೇಕು ಎನ್ನುವವರು ಮುಸ್ಲಿಮರೇ ಅಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಯಾವುದೇ ಧರ್ಮವಾದರೂ ಎಲ್ಲಾ ಭಾರತೀಯರ ಡಿಎನ್ಎ ಒಂದೇ. ಇಲ್ಲಿ ನಾವು ಹಿಂದು ಅಥವಾ ಮುಸ್ಲಿಂ ಎಂದು ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ. ನಾವು ಭಾರತೀಯರು ಅನ್ನೋ ಪ್ರಾಬಲ್ಯ ಇರಲಿ ಎಂದಿದ್ದಾರೆ.
40,000 ವರ್ಷಗಳ ಹಿಂದಿನ ಪೂರ್ವಜರ ವಂಶವೇ ನಮ್ಮದು. ಇದು ಭಾರತೀಯರ ಡಿಎನ್ ಎ ಪರೀಕ್ಷೆಯಲ್ಲಿ ಸಾಬೀತಾಗಿದೆ. ಧರ್ಮ ಯಾವುದೇ ಆದರೂ ನಮ್ಮ ಡಿಎನ್ ಎ ಒಂದೇ ಆಗಿದೆ ಎಂದಿದ್ದಾರೆ.
ಮುಸ್ಲಿಮರು ಇಲ್ಲಿ ಇರಕೂಡದು ಎಂದು ಯಾರಾದರೂ ಹೇಳಿದರೆ ಅಂತಹ ವ್ಯಕ್ತಿ ಹಿಂದೂವೇ ಅಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ನಡುವಣ ಉತ್ತಮ ಬಾಂಧವ್ಯಕ್ಕೆ ಪ್ರಬಲ ಸಂದೇಶ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಹಿಂದೂಗಳು ಅಥವಾ ಮುಸ್ಲಿಮರು ಒಬ್ಬರ ಮೇಲೊಬ್ಬರು ಪ್ರಾಬಲ್ಯ ಸಾಧಿಸುವಂತಿರಬಾರದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಮೋಹನ್ ಭಾಗವತ್ ಸೇರಿ ಹಲವು RSS ನಾಯಕರ ಟ್ವಿಟ್ಟರ್ನಲ್ಲೂ ಬ್ಲ್ಯೂಟಿಕ್ ಕಾಣೆ
ಆದರೆ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಓವೈಸಿ'' ಮೋಹನ್ ಭಾಗವತ್, ವಧೆ ಮಾಡುವವರು ಹಿಂದುತ್ವದ ವಿರೋಧಿಗಳು ಎಂದು ಹೇಳುತ್ತಾರೆ. ಆದರೆ ಇವರಿಗೆ ಹಸು ಮತ್ತು ಎಮ್ಮೆಯ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಆದ್ರೆ ಇವರಿಗೆ ಜುನೈದ್, ಅಖ್ಲಾಕ್, ಪಹಲ, ರಕ್ಬರ್, ಅಲಿಮುದ್ದೀನ್ ಹೆಸರು ನೆನಪಿರಬೇಕು. ಈ ಪ್ರಕರಣದ ಅಪರಾಧಿಗಳಿಗೆ ಹಿಂದುತ್ವ ಸರ್ಕಾರ ಬೆನ್ನಲುಬಾಗಿ ನಿಂತಿದೆ'' ಎಂದು ಆರೋಪಿಸಿದ್ದಾರೆ.
ಭಾರತೀಯರೆಲ್ಲರ ಡಿಎನ್ಎ ಒಂದೇ
ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಎಂಬ ಖೆಡ್ಡಕ್ಕೆ ಯಾರೂ ಬೀಳಬಾರದು. ಹಿಂದೂ-ಮುಸ್ಲಿಂ ಏಕತೆಯ ಹೆಸರಲ್ಲಿ ಮೊದಲು ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಆಗಿದ್ದರು ಎಂಬ ದಾರಿತಪ್ಪಿಸುವ ಹೇಳಿಕೆಗಳಿಗೆ ಕಿವಿಕೊಡಬಾರದು. ಧರ್ಮವನ್ನು ಹೊರತು ಪಡಿಸಿ ಭಾರತೀಯರೆಲ್ಲರ ಡಿಎನ್ಎಗಳು ಒಂದೇ. ಆಚರಣೆಯ ಆಧಾರದಲ್ಲಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಭಾಗವತ್ ಪ್ರತಿಪಾಧಿಸಿದ್ದಾರೆ.
ಹಿಂದುತ್ವಕ್ಕೆ ವಿರೋಧವಾಗಿದ್ದಾರೆ
ಹಿಂಸಾಚಾರದಲ್ಲಿ ತೊಡಗುವವರು ಹಿಂದುತ್ವಕ್ಕೆ ವಿರುದ್ಧವಾಗಿದ್ದಾರೆ. ದೇಶದಲ್ಲಿ ಏಕತೆ ಅತೀ ಅಗತ್ಯ. ಏಕತೆ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಏಕತೆಗೆ ಮಾತುಕತೆ, ನಂಬಿಕೆ ಅಗತ್ಯ. ಆದರೆ ಭಾರತದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂಬ ಊಹೆಗಳಲ್ಲಿ ಸಿಲುಕಬೇಡಿ ಎಂದು ಮೋಹನ್ ಭಾಗವತ್ ಹೇಳಿದರು. ಮುಸ್ಲಿಮ್ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಗೆ ಇಮೇಜ್ ಮೇಕ್ ಓವರ್ ಮಾಡುವ ಅಗತ್ಯವಿಲ್ಲ.
ನಮಗೆ ಮತಗಳ ಅಗತ್ಯವಿಲ್ಲ
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಇಮೇಜ್ ಮೇಕ್ ಓವರ್ ಅಥವಾ ಮತಗಳ ಅಗತ್ಯವಿಲ್ಲ. ಸಂಘವು ರಾಷ್ಟ್ರವನ್ನು ಬಲಪಡಿಸಲು ಮತ್ತು ಸಮಾಜದ ಎಲ್ಲರ ಕಲ್ಯಾಣಕ್ಕಾಗಿ ತನ್ನ ಕೆಲಸವನ್ನು ಮಾಡುತ್ತಲೇ ಇದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಅಸಾದುದ್ದೀನ್ ಓವೈಸಿ ಹೇಳಿದ್ದೇನು?
ಅಲಿಮುದ್ದೀನ್ ಕೊಲೆಗಾರರಿಗೆ ಕೇಂದ್ರ ಸಚಿವರು ಹಾರ ಹಾಕಿ ಸನ್ಮಾನ ಮಾಡ್ತಾರೆ. ಅಖ್ಲಾಕ್ ನ ಕೊಲೆಗಾರರ ಶವದ ಮೇಲೆ ತ್ರಿವರ್ಣ ಧ್ವಜ ಹಾಕಲಾಗುತ್ತದೆ. ಇನ್ನೂ ಆಶಿಫ್ ಮೇಲೆ ಹಲ್ಲೆ ನಡೆಸಿದರವ ರಕ್ಷಣೆಗಾಗಿ ಮಹಾ ಪಂಚಾಯ್ತಿ ನಡೆಸಲಾಗುತ್ತದೆ. ಅಲ್ಲಿಯ ಬಿಜೆಪಿಯ ವಕ್ತಾರರು, ಏನು ನಾವು ಕೊಲೆಯೂ ಮಾಡುವಂತಿಲ್ವಾ ಎಂದು ಪ್ರಶ್ನೆ ಮಾಡುತ್ತಾರೆ. ಹೇಡಿತನ, ಹಿಂಸೆ, ಕೊಲೆ ಇದು ಗೋಡ್ಸೆ ಹಿಂದುತ್ವದ ಅವಿಭಾಜ್ಯ ಅಂಗ. ಮುಸ್ಲಿಮರನ್ನು ಕೊಲ್ಲುತ್ತಿರೋದು ಇದೇ ಹಿಂದುತ್ವದ ಭಾಗ ಎಂದು ಆರೋಪಿಸಿದ್ದಾರೆ.