ಗಂಗಾ ನದಿ ಬಳಸಿ ವಿದ್ಯುತ್ ಯೋಜನೆಗೆ ವಿರೋಧಿಸಿದ್ದೆ: ಉಮಾ
ಹರಿದ್ವಾರ, ಫೆಬ್ರವರಿ 8: ಬಿಜೆಪಿ ನಾಯಕಿ ಉಮಾ ಭಾರತಿ ಅವರು ಉತ್ತಾರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ದುರಂತಕ್ಕೆ ಮರುಗಿದ್ದಾರೆ. ಇದು ಮುನ್ನೆಚ್ಚರಿಕೆಯಾಗಬೇಕು ಎಂದಿದ್ದಾರೆ. ಗಂಗಾ ನದಿ ಹಾಗೂ ಉಪನದಿ ಬಳಸಿ ಯಾವುದೇ ಪ್ರಮಾಣದ ವಿದ್ಯುತ್ ಯೋಜನೆಗೆ ನಾನು ವಿರೋಧಿಸಿದ್ದೆ ಎಂದು ಉಮಾ ಭಾರತಿ ಹೇಳಿದ್ದಾರೆ. ಮೋದಿ ನೇತೃತ್ವದ ಸರ್ಕಾರದಲ್ಲಿ ಈ ಹಿಂದೆ ಗಂಗಾ ನದಿ ಸ್ವಚ್ಛತೆ, ನದಿ ಅಭಿವೃದ್ಧಿ, ಜಲ ಸಂಪನ್ಮೂಲ ಖಾತೆ ಸಚಿವೆಯಾಗಿದ್ದ ಉಮಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಹಿಮನದಿಯ ಆರ್ಭಟದ ಸುದ್ದಿ ತಿಳಿಯುತ್ತಿದ್ದಂತೆ ಸರಣಿ ಟ್ವೀಟ್ ಮಾಡಿರುವ ಉಮಾ ಅವರು ಋಷಿಗಂಗಾ ವಿದ್ಯುತ್ ಯೋಜನೆ ನಾಶವಾಗಿದ್ದು, ದೊಡ್ಡ ದುರಂತಕ್ಕೆ ಮುನ್ಸೂಚನೆಯಾಗಬೇಕಿದೆ ಎಂದಿದ್ದಾರೆ. ಹಿಮಾಲಯದಲ್ಲಿ ಜಲ ವಿದ್ಯುತ್ ಯೋಜನೆ ನಿರ್ಮಾಣಕ್ಕೆ ನಾನು ವಿರೋಧಿಸಿದ್ದೆ. ಆದರೆ, ಈಗ ಈ ದುರಂತ ನಮಗೆ ಅಪಾಯದ ಮುನ್ಸೂಚನೆಯಾಗಿದೆ ಎಂದಿದ್ದಾರೆ.
ಹಿಮಪ್ರವಾಹಕ್ಕೆ ತಪೋವನ್ ಹೈಡ್ರೋಪವರ್ ಯೋಜನೆ ನಾಶ
''ನಾನು ಸಚಿವೆಯಾಗಿದ್ದಾಗ, ನನ್ನ ಸಚಿವಾಲಯದಿಂದ ಉತ್ತರಾಖಂಡ್ ರಾಜ್ಯದ ಹಿಮಾಲಯದಲ್ಲಿ ಅಣೆಕಟ್ಟು ನಿರ್ಮಾಣ, ವಿದ್ಯುತ್ ಯೋಜನೆ ಬಗ್ಗೆ ತೀವ್ರ ಕಾಳಜಿ ಹೊಂದಲಾಗಿತ್ತು. ಇದು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಗಂಗಾ ಹಾಗೂ ಗಂಗಾ ನದಿಯ ಉಪ ನದಿಯನ್ನು ಬಳಸಿ ಜಲ ವಿದ್ಯುತ್ ಯೋಜನೆ ಮಾಡುವುದನ್ನು ವಿರೋಧಿಸಿ ಅಫಿಡವಿಟ್ ಮಾಡಲಾಗಿತ್ತು''
ವಿದ್ಯುತ್ ಕೊರತೆ ಹಾಗೂ ಬೇಡಿಕೆಯನ್ನು ಬೇರೆ ರೀತಿಯಲ್ಲಿ ಪೂರೈಸಬಹುದಾಗಿದೆ. ರಾಷ್ಟ್ರೀಯ ಗ್ರಿಡ್ ನಿಂದ ರಾಜ್ಯಗಳಿಗೆ ಸಿಗುವ ಪಾಲು ಸರಿ ಹೊಂದಿಸಬಹುದಾಗಿದೆ ಎಂದು ಮಾಜಿ ಸಚಿವೆ ಉಮಾ ಅಭಿಪ್ರಾಯಪಟ್ಟಿದ್ದಾರೆ.
ಚಮೋಲಿಯ ಜೋಶಿಮಠ ಸಮೀಪದ ನಂದಾದೇವಿ ಹಿಮಪರ್ವತದ ಭಾಗ ಕುಸಿತವಾಗಿದ್ದರಿಂದ ದೌಲಿಗಂಗಾ, ಅಲಕಾನಂದ ನದಿಯಲ್ಲಿ ತ್ವರಿತ ಪ್ರವಾಹ ಪರಿಸ್ಥಿತಿ ಉಂಟಾಯಿತು. ತಪೋವನ್-ರೇನಿ ಭಾಗದಲ್ಲಿ ಋಷಿಗಂಗಾ ಹೈಡ್ರೋ ಪವರ್ ಯೋಜನೆಯಲ್ಲಿ ಕಾರ್ಯ ನಿರತ 150ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಸಮೀಪದ ಸುರಂಗದಲ್ಲಿ ಸಿಲುಕಿದ್ದ 50ಕ್ಕೂ ಅಧಿಕ ಕಾರ್ಮಿಕರ ರಕ್ಷಣೆ ಕಾರ್ಯವನ್ನು ಐಟಿಬಿಪಿ ಮುಂದುವರೆಸಿದ್ದು, 14 ಮಂದಿಯನ್ನು ರಕ್ಷಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೇದರಾನಾಥ್ ಕಡೆಯಿಂದ ಮಿಲಿಟರಿ ಪಡೆ ರವಾನೆಯಾಗಿದ್ದು, ಎನ್ ಡಿ ಆರ್ ಎಫ್ ಜೊತೆ ಕೈಜೋಡಿಸಿ ರಕ್ಷಣಾ ಕಾರ್ಯ, ವೈದ್ಯಕೀಯ ನೆರವು ಕಾರ್ಯದಲ್ಲಿ ತೊಡಗಿಕೊಂಡಿದೆ. ನಂದಾದೇವಿ ಹಿಮನದಿಯಲ್ಲಿ ಹಿಮ ಪಾತದ ಪರಿಣಾಮ ಉಂಟಾಗಿರುವ ಪ್ರವಾಹ ಭೀತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 1070 or 9557444486ಕ್ಕೆ ಕರೆ ಮಾಡಬಹುದು.