ಮತ್ತೆ ತೃತೀಯ ರಂಗದ ಚರ್ಚೆ, ಈ ಬಾರಿ ಚಂದ್ರಶೇಖರ್ ರಾವ್ ದಾಳ
ಬೆಂಗಳೂರು, ಮಾರ್ಚ್ 5: ಮತ್ತೆ ದೇಶದಲ್ಲಿ ತೃತೀಯ ರಂಗದ ಮಾತು ಕೇಳಿ ಬಂದಿದೆ. ಈ ಬಾರಿ ತೃತೀಯ ರಂಗದ ದಾಳ ಉರುಳಿಸಿದವರು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್.
ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿಯಾಗುವಲ್ಲಿ ಕಾಂಗ್ರೆಸ್ ವಿಫಲವಾಗುತ್ತಿದ್ದಂತೆ ಪ್ರಾದೇಶಿಕ ಪಕ್ಷಗಳ ನಾಯಕರು ಒಂದಾಗುವ ಮಾತುಗಳನ್ನಾಡುತ್ತಿದ್ದಾರೆ. ಈ ಮೂಲಕ ಬಿಜೆಪಿಯನ್ನು ಒಟ್ಟಾಗಿ ಎದುರಿಸುವ ಚಿಂತನೆ ನಡೆಸುತ್ತಿದ್ದಾರೆ. ಇದಕ್ಕೆ ಚಂದ್ರಶೇಖರ್ ರಾವ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುನ್ನಡಿ ಬರೆಯಲು ಹೊರಟಿದ್ದಾರೆ.
ದಾಳ ಉರುಳಿಸಿದ ಚಂದ್ರಶೇಖರ್ ರಾವ್
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತೃತೀಯ ರಂಗದ ರಚನೆ ಬಗ್ಗೆ ಉತ್ಸುಕರಾಗಿದ್ದು ಇದಕ್ಕೆ ಪಶ್ಚಿಮ ಬಂಗಾಳ ಮುಖ್ಯಂತ್ರಿ ಮಮತಾ ಬ್ಯಾನರ್ಜಿಯೂ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ತೃತೀಯ ರಂಗಕ್ಕೆ ಸಂಪೂರ್ಣ ಬೆಂಬಲ
ಕೆಸಿಆರ್ ಜತೆ ಫೋನಿನಲ್ಲಿ ಮಾತನಾಡಿರುವ ಮಮತಾ ಬ್ಯಾನರ್ಜಿ ತೃತೀಯ ರಂಗಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ದೇಶದಲ್ಲಿ ರಚನಾತ್ಮಕ ಬದಲಾವಣೆ ತರುವುದು ಅಗತ್ಯ ಎಂಬ ಕೆಸಿಆರ್ ಮಾತಿಗೆ ಮಮತಾ ಬ್ಯಾನರ್ಜಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಿವಸೇನೆ, ಟಿಡಿಪಿಗೆ ಸಂದೇಶ?
ಇದೇ ವೇಳೆ ಕೆಸಿಆರ್ ಶಿವಸೇನೆ ಮತ್ತು ತೆಲುಗು ದೇಶಂ ಪಕ್ಷಗಳನ್ನೂ ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಜತೆಗೆ ಮೈತ್ರಿ ಹೊಂದಿರುವ ಎರಡೂ ಪಕ್ಷಗಳು ಕೇಸರಿ ಪಕ್ಷದ ಬಗ್ಗೆ ಸದ್ಯ ಅಸಮಧಾನಗೊಂಡಿವೆ.
ಇದರಲ್ಲಿ ಶಿವಸೇನೆ ಈಗಾಗಲೇ ಹಲವು ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿದ್ದು ಮುಂದಿನ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುವುದಾಗಿ ಸ್ಪಷ್ಟಪಡಿಸಿದೆ. ಇದೀಗ ಟಿಡಿಪಿ ಕೂಡ ಬಿಜೆಪಿ ಬಗ್ಗೆ ಅಸಮಧಾನಗೊಂಡಿದೆ. ಇವರಿಬ್ಬರೂ ಜತೆಗೆ ಬಂದರೆ ಮೈತ್ರಿಕೂಟ ಗಟ್ಟಿಯಾಗಲಿದೆ ಎಂದು ಕೆಸಿಆರ್ ನಂಬಿದ್ದಾರೆ.
ಪವನ್ ಕಲ್ಯಾಣ್, ಅಸಾದುದ್ದೀನ್ ಓವೈಸಿ ಬೆಂಬಲ
ಕೆಸಿಆರ್ ನಡೆಗೆ ಜನಸೇನಾ ಪಕ್ಷದ ಪವನ್ ಕಲ್ಯಾಣ್ ಮತ್ತು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೆಲ್ಲಾ ನಡೆಯಲ್ಲಾ: ಬಿಜೆಪಿ
ಆದರೆ ಕೆಸಿಆರ್ ನಡೆಯನ್ನು ಬಿಜೆಪಿ ಕೇವಲವಾಗಿ ತೆಗೆದುಕೊಂಡಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ನರಸಿಂಹ ರಾವ್ ಈ ಬಗ್ಗೆ 'ಒನ್ಇಂಡಿಯಾ'ಗೆ ಪ್ರತಿಕ್ರಿಯೆ ನೀಡಿದ್ದು, "ನಾಲ್ಕು ವರ್ಷಗಳ ಕೆಸಿಆರ್ ಆಡಳಿತ ಅವರ ಕುಟುಂಬಸ್ಥರಿಗೆ ಸುವರ್ಣಯುಗವಾಗಿತ್ತು. ಆದರೆ ಜನರು ಅವರ ಬಗ್ಗೆ ಭ್ರಮನಿರಸನಗೊಂಡಿದ್ದಾರೆ," ಎಂದು ಹೇಳಿದ್ದಾರೆ.
ಈಶಾನ್ಯ ರಾಜ್ಯಗಳ ಪ್ರಭಾವ
"ಈಶಾನ್ಯ ರಾಜ್ಯಗಳಲ್ಲಿ ಗಳಿಸಿರುವ ಗೆಲುವು ರಾಜಕೀಯ ವಲಯದಲ್ಲಿ ತರಂಗಗಳನ್ನು ಎಬ್ಬಿಸಿದೆ. ಇದೀಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿಯ ಮೈತ್ರಿಗೆ ಮುಂದಾಗಿದ್ದಾರೆ. ಯಾವಾಗ ಸೋಲಲು ಆರಂಭಿಸುತ್ತೀರೋ ಆಗ ಸೋತವರೆಲ್ಲಾ ಒಟ್ಟಾಗುತ್ತಾರೆ," ಎಂದು ನರಸಿಂಹ ರಾವ್ ವಿಶ್ಲೇಷಿಸಿದ್ದಾರೆ.
ಕೆಸಿಆರ್ ತಾವೇ ಬಿಕ್ಕಟ್ಟಿನಲ್ಲಿದ್ದಾರೆ. ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅವರು ಮುಳುಗುವ ದೋಣಿಯಲ್ಲಿದ್ದಾರೆ. ಅವರ ಈ ಮೂರನೇ ರಂಗ ಕೇವಲ ಅರಚಾಟದ ಗುಂಪು ಎಂದು ಅವರು ಕರೆದಿದ್ದಾರೆ.