'ಕೈ'ಗೆ ಶಿವ, ಕೇಸರಿ ರಾಮ, ಎಸ್ ಪಿಗೆ ವಿಷ್ಣು: ಪಕ್ಷಗಳಿಂದ ದೇವರ ಮೊರೆ
ಲೋಕಸಭೆ ಚುನಾವಣೆ ಇನ್ನೇನು ಬಂದೇಬಿಟ್ಟಿತು. ಕಾವೇರುತ್ತಿರುವ ಚುನಾವಣೆ ಅಖಾಡದ ಎದುರು ಉತ್ತರಪ್ರದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಒಬ್ಬೊಬ್ಬ ದೇವರ ಮೊರೆ ಹೋಗಿವೆ. ಮೇಲ್ನೋಟಕ್ಕೆ- ಇಡೀ ದೇಶಕ್ಕೆ ಗೊತ್ತಿರುವಂತೆ ಬಿಜೆಪಿಯು ಶ್ರೀರಾಮನಿಗೆ ಬದ್ಧವಾಗಿದ್ದರೆ, ಸಮಾಜವಾದಿ ಪಕ್ಷ ವಿಷ್ಣುವನ್ನು ಹಾಗೂ ಕಾಂಗ್ರೆಸ್ ಶಿವನನ್ನು ತಮ್ಮ ಚುನಾವಣೆ ಅದೃಷ್ಟಕ್ಕಾಗಿ ನೆಚ್ಚಿಕೊಂಡಿವೆ.
ಈಗಷ್ಟೇ ಮಾನಸ ಸರೋವರ ಯಾತ್ರೆ ಮುಗಿಸಿ ಬಂದಿರುವ 'ಶಿವ ಭಕ್ತ' ರಾಹುಲ್ ಗಾಂಧಿ ಅವರು ಪ್ರತಿನಿಧಿಸುವ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರಕ್ಕೆ ಈ ವಾರ ಬರಮಾಡಿಕೊಂಡಿದ್ದು ವಿಭಿನ್ನವಾಗಿತ್ತು. ಕನ್ವರಿಯಾ ವೇಷ ತೊಟ್ಟಿದ್ದ ಶಿವನ ನೂರಾರು ಭಕ್ತರು ಶಿವನ ಜಪ ಮಾಡುತ್ತಾ ಎದುರುಗೊಂಡರು.
ಇನ್ನು ಮೂರು ತಿಂಗಳಲ್ಲಿ ಏನಾಗುತ್ತದೆ? ರಾಹುಲ್ ಮಾತಿನ ಅರ್ಥವೇನು?
ಉತ್ತರಪ್ರದೇಶ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಅದಾಗಲೇ ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ಸ್ಥಾಪನೆ ಮಾಡುವುದನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಎಲ್ಲರ ಒಪ್ಪಿಸಿಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ವಿಷ್ಣುವಿನ ಹೆಸರಿನಲ್ಲಿ ಅಖಿಲೇಶ್ ರಿಂದ ನಗರ ನಿರ್ಮಾಣ
ಆದರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬೇರೆಯದೇ ದಾಳ ಉರುಳಿಸಿದ್ದಾರೆ. ಮಹಾ ವಿಷ್ಣುವಿನ ಹೆಸರಿನಲ್ಲಿ ಅದ್ಭುತವಾದ ನಗರವೊಂದನ್ನು ಅಭಿವೃದ್ಧಿ ಪಡಿಸುತ್ತೇವೆ. ಮನಮೋಹಕವಾದ ದೇವಸ್ಥಾನವನ್ನು ಅಲ್ಲಿ ನಿರ್ಮಿಸುತ್ತೇವೆ. ಅದು ಕಾಂಬೋಡಿಯಾದ ಅಂಗರ್ ವಾಟ್ ನಲ್ಲಿ ಇರುವಂತೆ ಸೊಗಸಾಗಿರುತ್ತದೆ ಎಂದಿದ್ದಾರೆ. ಆದರೆ ಅಲ್ಲೊಂದು ಷರತ್ತಿದೆ. ಇದು ವಾಸ್ತವಕ್ಕೆ ಬರಬೇಕು ಅಂದರೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರಬೇಕು. ಉತ್ತರಪ್ರದೇಶದಲ್ಲಿ ದೇಶದಲ್ಲೇ ಅತ್ಯಧಿಕ ಲೋಕಸಭಾ ಕ್ಷೇತ್ರಗಳಿವೆ. ಒಟ್ಟು 80 ಕ್ಷೇತ್ರಗಳ ಪೈಕಿ 2014ರಲ್ಲಿ ಬಿಜೆಪಿಯು 71 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು. ಅದರ ಮಿತ್ರ ಪಕ್ಷ ಅಪ್ನಾ ದಳ 2, ಸಮಾಜವಾದಿ ಪಕ್ಷ 5 ಹಾಗೂ ಕಾಂಗ್ರೆಸ್ 2 ಸ್ಥಾನಗಳಲ್ಲಿ ಜಯ ಗಳಿಸಿದ್ದವು.
ಶಿವ ಭಕ್ತ ರಾಹುಲ್ ಹಣೆಗೆ ಗಂಧ-ತಿಲಕ
ರಾಹುಲ್ ಗಾಂಧಿ ಈಚೆಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ಶಿವನ ಚಿತ್ರವೊಂದನ್ನು ನೀಡಿ, ಸ್ವಾಗತಿಸಲಾಯಿತು. ರಾಹುಲ್ ಹಣೆಯ ಮೇಲೆ ಇಷ್ಟಗಲ ಗಂಧ ಹಾಗೂ ಅದರ ಮಧ್ಯೆ ಕೆಂಪು ಬಣ್ಣದ ತಿಲಕ ರಾರಾಜಿಸುತ್ತಿತ್ತು. ಭರ್ತಿ ತಯಾರಿಯೊಂದಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದರು. 'ಶಿವಭಕ್ತ ರಾಹುಲ್ ಗಾಂಧಿಗೆ ಸ್ವಾಗತ' ಎಂಬ ಒಕ್ಕಣೆಯಿದ್ದ ಪೋಸ್ಟರ್ ಗಳು ಕಂಡುಬಂದವು. ಕಳೆದ ಏಪ್ರಿಲ್ ನಲ್ಲಿ ಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕದ ಹುಬ್ಬಳ್ಳಿಗೆ ದೆಹಲಿಯಿಂದ ಬರುವ ಮಾರ್ಗ ಮಧ್ಯೆ ವಿಮಾನದಲ್ಲಿ ಸಮಸ್ಯೆ ಕಂಡುಬಂದಿದ್ದು, ಆ ನಂತರ ಹರಕೆ ಹೊತ್ತ ಪ್ರಕಾರ ಮಾನಸ ಸರೋವರ ಯಾತ್ರೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ದೇಶದ ಒಳಿತಿಗಾಗಿ ಆ ಶಿವನಲ್ಲಿ ರಾಹುಲ್ ಗಾಂಧಿ ಪ್ರಾರ್ಥಿಸುತ್ತಾರೆ ಎಂದು ಕಾಂಗ್ರೆಸ್ ನ ಮುಖ್ಯ ವಕ್ತಾರ ರಣ್ ದೀಪ್ ಸುರ್ಜೇವಾಲ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಾರೆ ಹಿಂದೂಗಳ ಮತದ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನ ಎದ್ದು ಕಾಣುತ್ತದೆ.
ಹರಕೆ ತೀರಿಸಲು ಮಾನಸ ಸರೋವರ ಯಾತ್ರೆ ಹೊರಟ 'ಶಿವಭಕ್ತ' ರಾಹುಲ್ ಗಾಂಧಿ
ರಾಮಂದಿರ ನಿರ್ಮಾಣದ ಬಗ್ಗೆ ಬಿಜೆಪಿ ಮಾತು
ರಾಮಮಂದಿರ ಶ್ರದ್ಧಾ ಕೇಂದ್ರ ಮತ್ತು ನಮ್ಮ ಪಾಲಿನ ಭಕ್ತಿಯ ಕೇಂದ್ರ. ಅಲ್ಲಿ ಕಾನೂನಿನ ಪ್ರಕಾರ ಮಂದಿರ ನಿರ್ಮಾಣ ಆಗುತ್ತದೆ. ಮತ್ತು ಆ ಮಾತಿಗೆ ನಾವು ಬದ್ಧ. ಬಿಜೆಪಿಯು ಒಪ್ಪಿಗೆ ಪಡೆಯುವ ಪ್ರಯತ್ನದಲ್ಲಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಈಚೆಗಷ್ಟೇ ಹೇಳಿದ್ದಾರೆ. ಆ ರಾಮ ಜನಿಸಿದ್ದು ಅಯೋಧ್ಯೆಯಲ್ಲಿ ಎಂಬುದು ಜನರಿಗೆ ಗೊತ್ತಿದೆ. ಅಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂಬುದು ಅವರ ಆಸೆ. ಪ್ರತಿಯೊಬ್ಬ ಭಾರತೀಯರ ಭಾವನೆ ಏನಿದೆ, ಅದು ಬಿಜೆಪಿಯದು ಕೂಡ ಹೌದು ಎಂದು ರಾಮ ಮಂದಿರ ನಿರ್ಮಾಣದ ಬಗ್ಗೆಯೇ ಖಚಿತ ಧ್ವನಿಯಲ್ಲಿ ಮಾತನಾಡಿದ್ದಾರೆ.
ರಾಮಜನ್ಮ ಭೂಮಿ ಜಮೀನು ವಿವಾದ ವಿಚಾರಣೆಗೆ ಮುಹೂರ್ತ ನಿಗದಿ
ಜಗತ್ತಿನ ಅತಿ ದೊಡ್ಡ ದೇವಾಲಯ ಕಾಂಬೋಡಿಯಾದಲ್ಲಿ
ಎಥ್ವಾ ಸಿಂಹ ಧಾಮದ ಬಳಿ ಎರಡು ಸಾವಿರ ಎಕರೆ ಜಾಗದಲ್ಲಿ ವಿಷ್ಣುವಿನ ಹೆಸರಿನಲ್ಲಿ ನಗರವೊಂದನ್ನು ಅಭಿವೃದ್ಧಿ ಪಡಿಸುವುದು ನಮ್ಮ ಉದ್ದೇಶ. ಚಂಬಲ್ ನಲ್ಲಿ ಕಂದರಗಳಲ್ಲಿ ಸಾಕಷ್ಟು ಜಾಗವಿದ್ದು, ಆ ನಗರದಲ್ಲಿ ಸೊಗಸಾದ ವಿಷ್ಣು ದೇವಾಲಯವೊಂದನ್ನು ನಿರ್ಮಾಣ ಮಾಡುತ್ತೇವೆ. ಅದು ಅಂಗರ್ ವಾಟ್ ನಲ್ಲಿ ಇರುವ ಪ್ರಸಿದ್ಧ ದೇವಾಲಯದ ರೀತಿಯಲ್ಲಿ ಇರುತ್ತದೆ ಎಂಬುದು ಸಮಾಜವಾದಿ ಪಕ್ಷದ ಅಖಿಲೇಶ್ ಭರವಸೆ. ತಜ್ಞರ ತಂಡವೊಂದನ್ನು ಕಾಂಬೋಡಿಯಾಕ್ಕೆ ಕಳಿಸಲಾಗುವುದು. ಆ ನಂತರ ನಗರವನ್ನು ಅಭಿವೃದ್ಧಿ ಪಡಿಸಿ, ನಮ್ಮ ಪ್ರಾಚೀನ ಸಂಸ್ಕೃತಿ ಮತ್ತು ಜ್ಞಾನದ ಕೇಂದ್ರವಾಗಿ ಮಾಡಲಾಗುವುದು ಎಂದಿದ್ದಾರೆ ಅಖಿಲೇಶ್. ಈಗ ಪ್ರಸ್ತಾವ ಮಾಡುತ್ತಿರುವ ಅಂಗರ್ ವಾಟ್ ವಿಷ್ಣು ದೇವಾಲಯ ಕಾಂಬೋಡಿಯಾದಲ್ಲಿದೆ. ಜಗತ್ತಿನ ಅತಿ ದೊಡ್ಡ ಧಾರ್ಮಿಕ ಸ್ಮಾರಕ ಅದು. ಮೂಲತಃ ಹಿಂದೂ ದೇವಾಲಯ ಆಗಿದ್ದು, ಆ ನಂತರ ಬೌದ್ಧ ಕ್ಷೇತ್ರವಾಗಿ ಬದಲಾವಣೆ ಕಂಡಿದೆ.