ಭಾರತಮಾತೆ ಬೆನ್ನಿಗೆ ಬಿಜೆಪಿ ಚೂರಿ: ಕೇಜ್ರಿವಾಲ್
ನವದೆಹಲಿ, ಏಪ್ರಿಲ್, 5: ಪಠಾಣ್ ಕೋಟ್ ದಾಳಿ ತನಿಖೆ ನಡೆಸಲು ಪಾಕಿಸ್ತಾನ ತನಿಖಾ ತಂಡ ಭಾರತಕ್ಕೆ ಬರಲು ಅವಕಾಶ ನೀಡಿದ ಕೇಂದ್ರ ಸರ್ಕಾರ ಭಾರತ ಮಾತೆಗೆ ಅವಮಾನ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಕ್ಷಮೆ ಕೇಳಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಒಂದು ಕಡೆ "ಭಾರತ ಮಾತಾ ಕೀ ಜೈ" ಎಂದು ಒಂದು ಬದಿ ಹೇಳುತ್ತಾ, ಮತ್ತೊಂದು ಕಡೆ ಐಎಸ್ ಐಗೆ ಭಾರತಕ್ಕೆ ಬರಲು ಅವಕಾಶ ಮಾಡಿಕೊಟ್ಟ ಬಿಜೆಪಿ ಸರ್ಕಾರ ದೇಶದ ಜನತೆಗೆ ಅವಮಾನ ಮಾಡಿದೆ. ವಿದೇಶಾಂಗ ನೀತಿಯಲ್ಲಿ ಇಟ್ಟ ಅತಿ ಕೆಟ್ಟ ಹೆಜ್ಜೆ ಈ ತನಿಖೆ ಎಂದು ಹೇಳಿದ್ದಾರೆ.[ಕೇಜ್ರಿವಾಲ್ ಓರ್ವ ನಕ್ಸಲೈಟ್: ಸುಬ್ರಮಣಿಯನ್ ಸ್ವಾಮಿ]
ಕಳೆದ ಜನವರಿ 2016ರಂದು ಪಠಾಣ್ ಕೋಟ್ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದನ್ನು ತನಿಖೆ ನಡೆಸಲು ಪಾಕಿಸ್ತಾನದ ತನಿಖಾ ತಂಡ ಭಾರತಕ್ಕೆ ಭೇಟಿ ನೀಡಿ, ಕಳೆದ ಶುಕ್ರವಾರ ಪಾಕಿಸ್ತಾನಕ್ಕೆ ವಾಪಸ್ ತೆರಳಿತ್ತು.
ನಾವು ಐಎಸ್ಐ ಏಜಂಟ್ನನ್ನು ಪ್ರಧಾನಿಯಾಗಿ ಹೊಂದಿದ್ದೇವೆಯೇ ? ಎಂಬ ಪ್ರಶ್ನೆಯನ್ನು ದೆಹಲಿ ಸಚಿವ ಕಪಿಲ್ ಮಿಶ್ರಾ ಟ್ವಿಟರ್ನಲ್ಲಿ ಕೇಳಿ ನಾಗರಿಕರಿಂದ ಛೀಮಾರಿ ಹಾಕಿಸಿಕೊಂಡಿದ್ದರು.[ಕೇಜ್ರಿವಾಲ್ಗೆ 364 ರು. ಡಿಡಿ ಬಂದದ್ದಾದರೂ ಯಾಕೆ?]
ಪಾಕ್ ತಂಡ ಆಗಮಿಸಿದ್ದ ಕ್ರಮವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಟೀಕೆ ಮಾಡಿದ್ದವು. ಇದೀಗ ಆಮ್ ಆದ್ಮಿ ಪಾರ್ಟಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನರೇಂದ್ರ ಮೋದಿ ವಿರುದ್ಧವೇ ವಾಗ್ದಾಳಿ ನಡೆಸಿದೆ.