ಪ್ರಶಸ್ತಿ ಹಿಂದಿರುಗಿಸಿದವರ ಪಟ್ಟಿ ಸೇರಿದ ಅರುಂಧತಿ ರಾಯ್
ನವದೆಹಲಿ, ನವೆಂಬರ್. 05: ಪ್ರಶಸ್ತಿ ಹಿಂದಿರುಗಿಸಿದ ಸಾಹಿತಿಗಳ ಪಟ್ಟಿಗೆ ಬೂಕರ್ ಪುರಸ್ಕೃತ ಲೇಖಕಿ ಅರುಂಧತಿ ರಾಯ್ ಸಹ ಸೇರ್ಪಡೆಯಾಗಿದ್ದಾರೆ.
ಸಾಹಿತಿಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ರಾಯ್ ಪ್ರಶಸ್ತಿ ಹಿಂದಕ್ಕೆ ನೀಡಿದ್ದಾರೆ. ' ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಗೆ ಪ್ರತಿಷ್ಠಿತ ಬೂಕರ್ ಪಡೆದುಕೊಂಡ ಸಾಹಿತಿಯ ಈ ನಡೆ ಚರ್ಚೆಗೆ ಕಾರಣವಾಗಿದೆ. 1989ರಲ್ಲಿ 'ಇನ್ ವಿಚ್ ಆನ್ನಿ ಗಿವ್ಸ್ ಇಟ್ ದೋಸ್ ಒನ್ಸ್ ' ಸಿನಿಮಾದ ಚಿತ್ರಕಥೆಗೆ ಕೇಂದ್ರ ಸರ್ಕಾರ ರಾಯ್ ಅವರಿಗೆ ಕೊಡಮಾಡಿದ್ದ ಪ್ರಶಸ್ತಿಯನ್ನು ಹಿಂದಕ್ಕೆ ನೀಡಿದ್ದಾರೆ. [ಕಲಬುರ್ಗಿ ಹತ್ಯೆ ಖಂಡಿಸಿ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದವರ ಪಟ್ಟಿ]
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಈ ಬಗ್ಗೆ ಲೇಖನವೊಂದನ್ನು ಬರೆದುಕೊಂಡಿದ್ದು, ಪ್ರಶಸ್ತಿ ವಾಪಸ್ ನೀಡಿದವರಿಗೆ ಪಟ್ಟಿಗೆ ಸೇರಲು ನನಗೆ ತುಂಬಾ ಸಂತೋಷವಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಬರೆದಿದ್ದಾರೆ.
ರಾಯ್ ಅವರ ಪ್ರಬಂಧಗಳ ಸಂಗ್ರಹಕ್ಕೆ 2005 ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ ಕಾರ್ಮಿಕರ ಹಿತಾಸಕ್ತಿ ಹೆಸರಿನಲ್ಲಿ ರಾಯ್ ಪ್ರಶಸ್ತಿ ಸ್ವೀಕಾರ ಮಾಡಿರಲಿಲ್ಲ.[ಪ್ರಶಸ್ತಿ ಹಿಂದಿರುಗಿಸುತ್ತಿರುವವರಿಗೆ ವಿದ್ಯಾ ಬಾಲನ್ ಟಾಂಗ್ ನೀಡಿದ್ದು ಹೀಗೆ]
'ಇನ್ ಟಾಲರೆನ್ಸ್' ಎಂಬ ಪದಕ್ಕೂ ನಡೆಯುತ್ತಿರುವ ದೌರ್ಜನ್ಯಕ್ಕೂ ಬಹಳ ವ್ಯತ್ಯಾಸವಿದೆ. ಈ ಬಗೆಯ ಹಿಂಸೆಯ ವಿರುದ್ಧ ಸಾಹಿತಿಗಳು, ಚಿಂತಕರು ಒಟ್ಟಾಗಿ ಹೋರಾಡಬೇಕಿದೆ ಎಂದು ಬರೆದಿದ್ದಾರೆ. ರಾಯ್ ಅವರ ನಡೆಗೆ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.