ಚುನಾವಣೆ ಎದುರಿಸದೆಯೇ ಜೇಟ್ಲಿ ನಿರ್ವಹಿಸಿದ್ದರು ಹಲವು ಮಂತ್ರಿ ಖಾತೆ
ನವದೆಹಲಿ, ಆಗಸ್ಟ್ 24: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಸರ್ಕಾರದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದ ಅವರು ವಿತ್ತ ಸಚಿವರಾಗಿಯೇ ಬಹಳ ಖ್ಯಾತರು.
ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ರಾಜಕೀಯಕ್ಕೆ ಅಡಿ ಇಟ್ಟಿದ್ದ ಅರುಣ್ ಜೇಟ್ಲಿ ಅವರು ಬಿಜೆಪಿಯನ್ನು 1991 ರಲ್ಲಿ ಸೇರಿದರು. ಅಲ್ಲಿಂದ ಅವರು ಹಿಂತುರಿಗಿ ನೋಡಿದ್ದೇ ಇಲ್ಲ.
ಅರುಣ್ ಜೇಟ್ಲಿ ಬದುಕಿನ ಅಪರೂಪದ ಚಿತ್ರಗಳು
1999 ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದಾಗ ಜೇಟ್ಲಿ ಅವರು ಬಿಜೆಪಿಯ ಪ್ರಮುಖ ವಕ್ತಾರರಾಗಿದ್ದರು. ವಾಜಪೇಯಿ ಅವರು ಮೊದಲ ಬಾರಿಗೆ ಜೇಟ್ಲಿ ಅವರಿಗೆ ಸಚಿವರಾಗುವ ಅವಕಾಶ ನೀಡಿದರು. ವಾಜಪೇಯಿ ಸಂಪುಟದಲ್ಲಿ ಹಲವು ಖಾತೆಗಳನ್ನು ಜೇಟ್ಲಿ ನಿಭಾಯಿಸಿದರು ಮತ್ತು ಯಶಸ್ವಿಯೂ ಎನಿಸಿಕೊಂಡರು.
LIVE: ಜೇಟ್ಲಿ ಅಗಲಿಕೆಗೆ ಸಂತಾಪ, ಪತ್ನಿ, ಪುತ್ರಗೆ ಮೋದಿ ಕರೆ
ವಾಜಪೇಯಿ ಸರ್ಕಾರದಲ್ಲಿ ಮೊದಲಿಗೆ ಮಾಹಿತಿ ಮತ್ತು ಪ್ರಸಾರ ಖಾತೆಯನ್ನು ಜೇಟ್ಲಿ ಅವರಿಗೆ ನೀಡಲಾಯಿತು. ಇದರ ಜೊತೆಗೆ ಹೂಡಿಕೆ ಕುರಿತಾದ ಹೊಸ ಖಾತೆಯೊಂದನ್ನು ಸಹ ನೀಡಲಾಯಿತು. ಇದೇ ಅವಧಿಯಲ್ಲಿ ರಾಮ್ ಜೇಟ್ಮಲಾನಿ ರಾಜೀನಾಮೆಯಿಂದ ತೆರವಾದ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರ ಖಾತೆಯನ್ನು ಅವರು ನಿಭಾಯಿಸಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕ
2000 ಇಸವಿಯಲ್ಲಿ ಸಾಗಾಣೆ ಸಚಿವರಾಗಿ ಕಾರ್ಯನಿರ್ವಹಿಸಿದರು. ನಂತರ 2002ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆ ಆದರು. ನಂತರ 2003 ರ ವರೆಗೆ ಕಾರ್ಯದರ್ಶಿ ಹುದ್ದೆ ನಿರ್ಹವಿಸಿದ ಜೇಟ್ಲಿ ನಂತರ ಮತ್ತೆ ಸಂಪುಟಕ್ಕೆ ಸೇರಿ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2004 ರಲ್ಲಿ ಎನ್ಡಿಎ ಸರ್ಕಾರ ಉರುಳಿದ ನಂತರ ಮತ್ತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನಕ್ಕೆ ಮರಳಿದರು.
ರಾಜ್ಯಸಭೆ ವಿಪಕ್ಷ ನಾಯಕರಾಗಿ ಕಾರ್ಯ
2009 ರಲ್ಲಿ ಅರುಣ್ ಜೇಟ್ಲಿ ಅವರನ್ನು ರಾಜ್ಯಸಭೆಯ ವಿಪಕ್ಷ ನಾಯಕನನ್ನಾಗಿ ಅಡ್ವಾಣಿ ಅವರು ಆಯ್ಕೆ ಮಾಡಿದರು. ಅದೇ ಸಮಯದಲ್ಲಿ ಅವರು ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದರು. 2014 ರ ವರೆಗೆ ರಾಜ್ಯಸಭೆ ವಿಪಕ್ಷ ನಾಯಕರಾಗಿ ಅವರು ಮುಂದುವರೆದರು. ಈ ಅವಧಿಯಲ್ಲಿ ಕೆಲವು ಅತ್ಯುತ್ತಮ ಚರ್ಚೆಗಳಲ್ಲಿ ಅವರು ಭಾಗವಹಿಸಿದ್ದರು. ಅಣ್ಣಾ ಹಜಾರೆ ಅವರ ಜನಲೋಕಪಾಲಕ್ಕೆ ಅವರು ಬೆಂಬಲಿಸಿದ್ದರು.
ವಿತ್ತ ಸಚಿವರಾಗಿ ಅರುಣ್ ಜೇಟ್ಲಿ ಗಿನ್ನಿಸ್ ದಾಖಲೆ, ಟಾಪ್ 5 ಸಾಧನೆಗಳು
ಮೋದಿ ಅವಧಿಯಲ್ಲಿ ಹಲವು ಖಾತೆ ನಿರ್ವಹಣೆ
2014 ರಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗ ಜೇಟ್ಲಿ ಅವರು ಹಲವು ಖಾತೆಗಳನ್ನು ನಿಭಾಯಿಸಿದರು. ಹಣಕಾಸು ಸಚಿವ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ, ಕಾರ್ಪೊರೇಟ್ ಸಚಿವರಾಗಿ ಕಾರ್ಯ ನಿರ್ವಹಿಸಿದರು ಇದೇ ಅವಧಿಯಲ್ಲಿ ರಕ್ಷಣಾ ಸಚಿವರಾಗಿಯೂ ಕೆಲ ಕಾಲ ಕಾರ್ಯ ನಿರ್ವಹಿಸಿದರು.
ಅಪನಗದೀಕರಣ, ಜಿಎಸ್ಟಿ ಪ್ರಮುಖ ನಿರ್ಣಯಗಳು
ಅಪನಗದೀಕರಣ ಮತ್ತು ಜಿಎಸ್ಟಿ ನಿರ್ಣಯಗಳು ಜೇಟ್ಲಿ ಅವರ ಅತ್ಯಂತ ಪ್ರಮುಖ ನಿರ್ಣಯಗಳು. ದೇಶದ ಆರ್ಥಿಕತೆಗೆ ಈ ಎರಡೂ ನೇರವಾಗಿ ಸಂಬಂಧಿಸಿವೆ. ಈ ಎರಡೂ ನಿರ್ಣಯಗಳು ದೇಶದ ಆರ್ಥಿಕತೆಗೆ ಮಾರಕವಾದುವೋ, ವರವಾದವೋ ಎಂಬ ಚರ್ಚೆ ಈಗಲೂ ನಡೆಯುತ್ತಲೇ ಇದೆ.