'ನಿಜವಾದ ಅಸಹಿಷ್ಣುತೆ ಎಂದರೆ ತುರ್ತು ಪರಿಸ್ಥಿತಿ ಕಾಲ'
ನವದೆಹಲಿ, ನವೆಂಬರ್, 27: ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರ ನೀತಿ ಪ್ರದರ್ಶಿಸಿದ್ದ ಇಂದಿರಾ ಗಾಂಧಿ ಅವರಿಗೆ ಜನರೇ ಬುದ್ಧಿ ಕಲಿಸಿದ್ದರು. ಜರ್ಮನಿಯಲ್ಲಿ 1930ರ ವೇಳೆ ಜನ ಅನುಭವಿಸಿದ್ದ ಸಂಕಷ್ಟಗಳನ್ನು ಭಾರತದ ಜನ 1975 ರಲ್ಲಿ ಅನುಭವಿಸಿದ್ದರು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಜೇಟ್ಲಿ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದರೂ ಆಶ್ಚರ್ಯವಿಲ್ಲ.
ಅಸಹಿಷ್ಣುತೆಗೆ ಅತ್ಯುತ್ತಮ ನಿದರ್ಶನ ದೇಶದ ಮೇಲೆ ತುರ್ತು ಪರಿಸ್ಥಿತಿ. ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿ ಪರಿಣಾಮ ದೇಶದಲ್ಲಿ ಜನರು ಬದುಕುವ ಹಕ್ಕನ್ನೇ ಕಳೆದುಕೊಂಡಿದ್ದರು. ಅಂದಿನ ಸರ್ಕಾರ ದೇಶದ ಶೇ.30ರಷ್ಟು ಜನರನ್ನು ಜೈಲಿಗೆ ಕಳುಹಿಸಿತ್ತು. ಸಂವಿಧಾನ ಇದೆ ಎನ್ನುವುದನ್ನೇ ಆ ಸರ್ಕಾರ ಮರೆತು ಬಿಟ್ಟಿತ್ತು ಎಂದು ರಾಜ್ಯಸಭೆಯಲ್ಲಿ ವಾಗ್ದಾಳಿ ನಡೆಸಿದರು.[ರೈತರು, ಬಡವರು, ಕಾರ್ಮಿಕರು ದೇಶ ಕಟ್ಟಿದ್ದಾರೆ: ಮೋದಿ]
ಇಂದಿರಾ ಗಾಂಧಿಯವರ ನೀತಿಗೆ ನಂತರ ಜನರೇ ತಕ್ಕ ಪಾಠ ಕಲಿಸಿದ್ದರು. ಆದರೂ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಬಂದಿಲ್ಲ. ನಿಜವಾದ ಅಸಹಿಷ್ಣುತೆ ಎಂದರೆ ಅದು ತುರ್ತು ಪರಿಸ್ಥಿತಿ ಎಂಬುದನ್ನು ಕಾಂಗ್ರೆಸ್ ಅರಿತುಕೊಳ್ಳಬೇಕು ಎಂದು ಹೇಳಿದರು.[ಚಳಿಗಾಲದ ಅಧಿವೇಶನದಲ್ಲಿ ಬಿಸಿ ಮುಟ್ಟಿಸಿದ್ದು ಯಾರು ಯಾರಿಗೆ?]
ಅಸಹಿಷ್ಣುತೆ ಎಂಬುದು ಹುಟ್ಟುಹಾಕಿದ ಪದ. ಅಸಹಿಷ್ಣುತೆ ಯಾವುದರಲ್ಲಿದೆ ಎಂಬುದನ್ನು ಕಾಂಗ್ರೆಸ್ ದಾಖಲೆ ಸಮೇತ ಸ್ಪಷ್ಟಮಾಡಲಿ. ಭಾರತದಲ್ಲಿನ ವೈವಿಧ್ಯ ಹಾಗೂ ಸಹಿಷ್ಣುತೆ ಎಂದೆಂದಿಗೂ ಶಾಶ್ವತ. ಅದನ್ನು ಅಲುಗಾಡಿಸಲು ಯಾವ ಶಕ್ತಿಗಳಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.