ಅರುಣ್ ಜೇಟ್ಲಿ ಅನಾರೋಗ್ಯದ ವದಂತಿ ನಿಜವಲ್ಲ: ಸರ್ಕಾರದ ಸ್ಪಷ್ಟನೆ
ನವದೆಹಲಿ, ಮೇ 27: ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಕ್ಷೀಣಿಸಿದೆ ಎಂಬ ವರದಿಗಳು ಸುಳ್ಳು ಹಾಗೂ ಆಧಾರ ರಹಿತ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಜೇಟ್ಲಿ ಅವರ ಆರೋಗ್ಯ ಸ್ಥಿತಿಯ ಕುರಿತು ವದಂತಿಗಳನ್ನು ಹರಡಿಸದಂತೆ ಸರ್ಕಾರ ಮಾಧ್ಯಮಗಳಿಗೆ ಸೂಚನೆ ನೀಡಿದೆ.
ಜೇಟ್ಲಿ ಅವರ ಅನಾರೋಗ್ಯದ ಕುರಿತಾದ ಊಹಾಪೋಹಗಳ ನಡುವೆ, ಸರ್ಕಾರದ ವಕ್ತಾರ ಸಿತಾಂಶು ಕರ್ ಅವರು ಟ್ವಿಟ್ಟರ್ನಲ್ಲಿ ಹೇಳಿಕೆ ನೀಡಿದ್ದು, ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಜೇಟ್ಲಿ ಅವರು ತೀವ್ರ ಅಮಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಜೂನ್ ತಿಂಗಳಿನಲ್ಲಿ ಲಂಡನ್ಗೆ ತೆರಳಲಿದ್ದಾರೆ ಎಂಬ ವದಂತಿ ಹರಡಿದ ಬಳಿಕ ವಿವಿಧ ಮಾಧ್ಯಮಗಳು ಸುದ್ದಿ ಖಾತರಿಪಡಿಸಿಕೊಳ್ಳಲು ಜೇಟ್ಲಿ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದವು. ಆದರೆ, ಅವರು ಮಾಧ್ಯಮಗಳ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಅವರು ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹಣಕಾಸು ಸಚಿವಾಲಯದಲ್ಲಿನ ಅವರ ಕಚೇರಿ ಮಾಹಿತಿ ನೀಡಿತ್ತು.
ಹೊಸ ಸರ್ಕಾರ ರಚನೆಗೂ ಮುನ್ನವೇ ಬಿಜೆಪಿಗೆ ಆಘಾತಕಾರಿ ಸುದ್ದಿ
ಕಳೆದ ವರ್ಷದ ಮೇ ತಿಂಗಳಿನಲ್ಲಿ ಜೇಟ್ಲಿ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿಂದ ಅವರ ಆರೋಗ್ಯ ಗಣನೀಯವಾಗಿ ಕ್ಷೀಣಿಸಿದೆ. ಹೀಗಾಗಿ ಇಂಗ್ಲೆಂಡ್ ಅಥವಾ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಕೆಲವು ದಿನಗಳಲ್ಲಿಯೇ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
|
ವರದಿಗಳು ಆಧಾರ ರಹಿತ
ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಿದ ಟ್ವೀಟ್ ಮಾಡಿರುವ ವಕ್ತಾರ ಸಿತಾಂಶು ಅವರು, ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿ ಸುಳ್ಳು ಹಾಗೂ ಆಧಾರ ರಹಿತ. ವದಂತಿ ಹರಡದಂತೆ ಮಾಧ್ಯಮಗಳು ಸ್ಪಷ್ಟವಾಗಿರಬೇಕು ಎಂದು ಸಲಹೆ ನೀಡಲಾಗಿದೆ ಎಂಬುದಾಗಿ ಹೇಳಿದ್ದಾರೆ.
ಸಚಿವರಾಗಿ ಮುಂದುವರಿಯುವುದಿಲ್ಲ
ಜೇಟ್ಲಿ ಅವರು ತೀವ್ರ ಕಳೆಗುಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರು ಬಿಜೆಪಿ ಸರ್ಕಾರದಲ್ಲಿ ನರೇಂದ್ರ ಮೋದಿ ಅವರು ಹೊಸ ಕ್ಯಾಬಿನೆಟ್ನಲ್ಲಿ ಮುಂದುವರಿಯುವುದು ಅನುಮಾನ. ಅವರು ಚಿಕಿತ್ಸೆಗಾಗಿ ಲಂಡನ್ ಅಥವಾ ಅಮೆರಿಕ ತೆರಳಬೇಕಾಗಬಹುದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿತ್ತು.
ಕಾಂಗ್ರೆಸ್ 'ಅಳುಮುಂಜಿ' ಪಕ್ಷ ಎಂದು ಜರಿದ ಕೇಂದ್ರ ಸಚಿವ ಜೇಟ್ಲಿ
ಏಮ್ಸ್ಗೆ ದಾಖಲಾಗಿದ್ದ ಜೇಟ್ಲಿ
ಕಳೆದ ವಾರ ನವದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ವಿವಿಧ ಪರೀಕ್ಷೆಗಳಿಗೆ ಒಳಪಟ್ಟಿದ್ದರು. ಅವರ ಅನಾರೋಗ್ಯದ ಕಾರಣ ಏನೆಂಬುದು ಬಹಿರಂಗವಾಗಿಲ್ಲ. ಗುರುವಾರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಆ ಸಂಜೆ ಲೋಕಸಭೆ ಚುನಾವಣೆಯಲ್ಲಿ ಅಮೋಘ ಜಯಭೇರಿ ಭಾರಿಸಿದ ಬಳಿಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಅವರ ಅನಾರೋಗ್ಯದ ಕುರಿತಾದ ಅನುಮಾನಗಳು ಬಲವಾಗಿದ್ದವು.
|
ಚೇತರಿಸಿಕೊಳ್ಳುತ್ತಿದ್ದಾರೆ
'ಎಲ್ಲರೂ ನನ್ನ ಸ್ನೇಹಿತ ಅರುಣ್ ಜೇಟ್ಲಿ ಅವರ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವರು ನಿಜವಾದ ಕಾಳಜಿಯಿಂದ ವಿಚಾರಿಸುತ್ತಿದ್ದರೆ, ಇನ್ನು ಕೆಲವರು ಲಘುವಾಗಿ ಮಾತನಾಡುತ್ತಿದ್ದಾರೆ. ಕಳೆದ ಸಂಜೆ ಅವರನ್ನು ನಾನು ಭೇಟಿ ಮಾಡಿದ್ದೇನೆ. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ತೆರೆಮರೆಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಸೋಂಕು ತಾಗದಂತೆ ಎಚ್ಚರ ವಹಿಸುವ ಸಲುವಾಗಿ ಸಾರ್ವಜನಿಕ ಭೇಟಿಯಿಂದ ದೂರ ಇರುವಂತೆ ಕುಟುಂಬದವರು ಮತ್ತು ಸ್ನೇಹಿತರು ಅವರ ಮನವೊಲಿಸಿದ್ದಾರೆ. ಅದಕ್ಕೆ ಕೊನೆಗೂ ಅವರು ಒಪ್ಪಿಕೊಂಡಿದ್ದಾರೆ' ಎಂದು ಜೇಟ್ಲಿ ಅವರ ಕಾಲೇಜು ಸಹಪಾಠಿ, ಇಂಡಿಯಾ ಟಿವಿ ಮುಖ್ಯಸ್ಥ ರಜತ್ ಶರ್ಮಾ ತಿಳಿಸಿದ್ದಾರೆ.
ಸಭೆಗಳಿಗೆ ಗೈರು
ಕಳೆದ ಮೂರು ವಾರಗಳಿಂದ ಅವರು ಕಚೇರಿಗೆ ಹಾಜರಾಗಿರಲಿಲ್ಲ. ಸಾರ್ವಜನಿಕವಾಗಿಯೂ ತೀರಾ ಅಪರೂಪವಾಗಿ ಕಾಣಿಸಿಕೊಂಡಿದ್ದರು. ಆದರೆ, ಅವರು ತಮ್ಮ ಬ್ಲಾಗ್ನಲ್ಲಿ ನಿರಂತರವಾಗಿ ಬರಹಗಳನ್ನು ಪ್ರಕಟಿಸುತ್ತಿದ್ದರು. ಗುರುವಾರ ಮೋದಿ ಅವರ ವಿಜಯವನ್ನು ಕೊಂಡಾಡಿ ಟ್ವೀಟ್ ಮಾಡಿದ್ದರು.
16ನೇ ಲೋಕಸಭೆಯನ್ನು ವಿಸರ್ಜಿಸುವಂತೆ ಶಿಫಾರಸು ಮಾಡಲಾದ ಶುಕ್ರವಾರದ ಸಂಪುಟ ಸಭೆಯಲ್ಲಿ ಕೂಡ ಅವರು ಪಾಲ್ಗೊಂಡಿರಲಿಲ್ಲ. ಅಲ್ಲದೆ, ಶನಿವಾರ ಮೋದಿ ಅವರನ್ನು ತಮ್ಮ ನಾಯಕನೆಂದು ಆಯ್ಕೆ ಮಾಡಿದ ಬಿಜೆಪಿ ಸಂಸದೀಯ ಪಕ್ಷದ ಸಭೆಗೂ ಗೈರು ಹಾಜರಾಗಿದ್ದರು. ಶುಕ್ರವಾರ ಅವರ ಮನೆಗೇ ತೆರಳಿದ್ದ ಹಣಕಾಸು ಸಚಿವಾಲಯದ ಐವರು ಕಾರ್ಯದರ್ಶಿಗಳು ದೈನಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರು.