ವಾಲ್ಮೀಕಿ ವಿರುದ್ಧ ಹೇಳಿಕೆ, ನಟಿ ರಾಖಿ ಸಾವಂತ್ ವಿರುದ್ಧ ಬಂಧನ ವಾರೆಂಟ್
ರಾಮಾಯಣ ಮಹಾಕಾವ್ಯದ ಕರ್ತೃ ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ನಟಿ ರಾಖಿ ಸಾವಂತ್ ವಿರುದ್ಧ ಲೂಧಿಯಾನದ ನ್ಯಾಯಾಲಯವೊಂದು ಬಂಧನ ವಾರೆಂಟ್ ಜಾರಿಗೊಳಿಸಿದೆ.
ಲೂಧಿಯಾನ, ಏಪ್ರಿಲ್ 03: ಹಿಂದೂಗಳ ಪಾಲಿನ ಪವಿತ್ರ ಮಹಾಕಾವ್ಯ ರಾಮಾಯಣದ ಕರ್ತೃ ಋಷಿ ವಾಲ್ಮೀಕಿಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ, ನಟಿ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ಲೂಧಿಯಾನದ ನ್ಯಾಯಾಲಯವೊಂದು ಬಂಧನ ವಾರಂಟ್ ಹೊರಡಿಸಿದೆ.
ಖಾಸಗಿ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಖಿ ಅವರು, ವಾಲ್ಮೀಕಿ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಖಿ ವಿರುದ್ಧ ದೂರು ನೀಡಲಾಗಿತ್ತು. ರಾಖಿ ಸಾವಂತ್ ರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.
ಬಂಧನ ವಾರಂಟ್ ನೊಂದಿಗೆ ಲುಧಿಯಾನ ಪೊಲೀಸರ ಎರಡು ಮಂದಿ ತಂಡ ಈಗಾಗಲೇ ಮುಂಬೈಗೆ ತೆರಳಿದೆ. ಈ ಪ್ರಕರಣ ಸಂಬಂಧ ಮಾರ್ಚ್ 9ರಂದು ನಡೆದ ನ್ಯಾಯಾಲಯದ ವಿಚಾರಣೆಗೆ ರಾಖಿ ಹಲವಾರು ಸಮನ್ಸ್ ಜಾರಿ ಮಾಡಲಾಗಿತ್ತು.
ಆದರೆ, ಕೋರ್ಟಿಗೆ ರಾಖಿ ಹಾಜರಾಗಿರಲಿಲ್ಲ. ಹೀಗಾಗಿ, ಬಂಧನ ವಾರಂಟ್ ಜಾರಿಯಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 10ರಂದು ನಿಗದಿಯಾಗಿದ್ದು, ರಾಖಿ ಅವರು ಖುದ್ದು ಕೋರ್ಟಿಗೆ ಹಾಜರಾಗಬೇಕಿದೆ.(ಪಿಟಿಐ)