ಅಸ್ಸಾಂ : ಆತಂಕದಲ್ಲಿದ್ದ 40 ಲಕ್ಷ ಜನಕ್ಕೆ ರಾಜನಾಥ್ ಅಭಯ
ನವದೆಹಲಿ, ಜುಲೈ 30: ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಯ ಎರಡನೆಯ ಮತ್ತು ಅಂತಿಮ ಕರಡು ಪ್ರತಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದರು.
ನಾಗರಿಕರ ಪಟ್ಟಿಯಲ್ಲಿ 2.9 ಕೋಟಿ ಜನರ ಹೆಸರಿದ್ದು,40 ಲಕ್ಷ ಜನರ ಹೆಸರು ಬಿಟ್ಟು ಹೋಗಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಎನ್ ಆರ್ ಸಿ ವರದಿಯನ್ನು ಸಂಪೂರ್ಣ ನಿಷ್ಪಕ್ಷಪಾತವಾಗಿ ತಯಾರಿಸಲಾಗಿದೆ. ಪಟ್ಟಿಯಿಂದ ಹೊರಗುಳಿದಿರುವವರು ಆತಂಕ ಪಡಬೇಕಾಗಿಲ್ಲ. ಹೆಸರು ಸೇರಿಸಲು ಆಗಸ್ಟ್ 28ರಿಂದ ಸೆಪ್ಟೆಂಬರ್ 28ರ ತನಕ ಗಡುವು ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಅಮಾಯಕರ ಹತ್ಯೆ: ಕಾಂಗ್ರೆಸ್ನತ್ತ ಪರೋಕ್ಷ ಬೆಟ್ಟು ಮಾಡಿದ ರಾಜನಾಥ್
ಮಮತಾರಿಂದ ಆಕ್ಷೇಪವೇಕೆ?: ಅಕ್ರಮ ವಲಸಿಗರ ನಿಯಂತ್ರಣ ಹಾಗೂ ಭಾರತೀಯರ ಹಿತಾಸಕ್ತಿ ಕಾಪಾಡುವ ಭರವಸೆಯೊಂದಿಗೆ ಚುನಾವಣೆ ಗೆದ್ದಿರುವ ಬಿಜೆಪಿ ಈಗ ಅಸ್ಸಾಂನಲ್ಲಿರುವ ಬಾಂಗ್ಲಾ ವಲಸಿಗರ ಮೇಲೆ ದೌರ್ಜನ್ಯ ಎಸಗಿದೆ ಎಂದು ಮಮತಾ ಆರೋಪಿಸಿದ್ದಾರೆ.
1951ರ ನಂತರ ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ನಾಗರಿಕರ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಈ ಮೂಲಕ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವವರನ್ನು ನಿಯಂತ್ರಿಸುವುದು ಮೋದಿ ಸರ್ಕಾರದ ಯೋಜನೆಯಾಗಿದೆ.
ಒಟ್ಟು 3.29 ಕೋಟಿ ಅರ್ಜಿದಾರರ ಪೈಕಿ ಸೊಮವಾರದಂದು 2.9 ಕೋಟಿ ಜನರ ಹೆಸರಿರುವ ಪಟ್ಟಿ ಪ್ರಕಟವಾಗಿದ್ದು, 40 ಲಕ್ಷ ಜನರ ಹೆಸರು ಮಾಯವಾಗಿದೆ.
ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ 23 ಸಾವಿರ ಅರೆಸೇನಾ ಪಡೆಯ ಯೋಧರನ್ನು ನಿಯೋಜಿಸಿದೆ.
ಸದ್ಯಕ್ಕೆ ಈ ವರದಿ ಆಧಾರದ ಮೇಲೆ ಯಾರನ್ನು ಬಂಧಿಸಲಾಗುವುದಿಲ್ಲ ಮತ್ತು ಗಡಿಪಾರು ಮಾಡಲಾಗುವುದಿಲ್ಲ. ಅಂತಿಮ ಪಟ್ಟಿ ಪ್ರಕಟವಾದ ಬಳಿಕ ಅಕ್ರಮ ವಲಸಿಗರು, ಮೂಲ ನಾಗರಿಕರನ್ನು ಪ್ರತ್ಯೇಕಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಇಲಾಖೆ ಪ್ರಕಟಿಸಿದೆ.