ಮುಸ್ಲಿಂ ರೆಜಿಮೆಂಟ್ ಬಗ್ಗೆ ಸುಳ್ಳು ಸುದ್ದಿ: ಪ್ರಧಾನಿಗೆ ನಿವೃತ್ತ ಸೇನಾಧಿಕಾರಿಗಳ ಪತ್ರ
ನವದೆಹಲಿ, ಅಕ್ಟೋಬರ್ 15: ಭಾರತೀಯ ಸೇನೆಯಲ್ಲಿರುವ ಮುಸ್ಲಿಂ ಸೈನಿಕರಿಗೆ ಕೆಟ್ಟ ಹೆಸರು ತರುವ ಮತ್ತು ಸಶಸ್ತ್ರ ಪಡೆಗಳ ನೈತಿಕತೆಗೆ ಧಕ್ಕೆ ತರುವಂತಹ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೇಶದಲ್ಲಿ ಕೋಮು ದ್ವೇಷಕ್ಕೆ ಇಂಧನ ಸುರಿಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ 120 ನಿವೃತ್ತ ಸೇನಾಧಿಕಾರಿಗಳು ಪತ್ರ ಬರೆದಿದ್ದಾರೆ.
ಈ ರೀತಿಯ ನಿರ್ದಿಷ್ಟ ಪೋಸ್ಟ್ಗಳನ್ನು ಹರಿಬಿಡುತ್ತಿರುವ ಮೂಲ ವ್ಯಕ್ತಿಗಳನ್ನು ಪತ್ತೆಹಚ್ಚಲು ಕೂಡಲೇ ತನಿಖೆಗೆ ಆದೇಶಿಸಬೇಕು. ಹಾಗೆಯೇ ಸುಳ್ಳು ಸಂಗತಿಗಳನ್ನು ಹರಡುವುದಕ್ಕೆ ಅವಕಾಶ ನೀಡುತ್ತಿರುವುದಕ್ಕೆ ಫೇಸ್ಬುಕ್ ಮತ್ತು ಟ್ವಿಟ್ಟರ್ಗಳಿಗೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಭಾರತೀಯ ಸೇನೆಯಲ್ಲಿ 'ಮುಸ್ಲಿಂ ರೆಜಿಮೆಂಟ್' ಎಂಬ ಸೇನಾ ತಂಡವಿದ್ದು, 1965ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಲು ನಿರಾಕರಿಸಿದ ಕಾರಣಕ್ಕಾಗಿ ಅದನ್ನು ರದ್ದುಗೊಳಿಸಲಾಗಿತ್ತು ಎಂಬ ಅಂಶಗಳನ್ನು ಒಳಗೊಂಡ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸಂಗತಿಗಳು ಶುದ್ಧ ಸುಳ್ಳು ಎಂದು ಸೇನಾ ಪಡೆಯ ಹಿರಿಯರು ಹೇಳಿದ್ದಾರೆ.
2013ರಿಂದಲೇ ಟ್ವಿಟ್ಟರ್ ಮತ್ತು ಫೇಸ್ಬುಕ್ನಲ್ಲಿ ಸಕ್ರಿಯವಾಗಿರುವ ನಕಲಿ ಖಾತೆಯೊಂದು ಭಾರತ-ಚೀನಾ ಗಡಿ ಬಿಕ್ಕಟ್ಟಿನ ವೇಳೆ ಮತ್ತೆ ಸಕ್ರಿಯವಾಗಿದೆ. ಸುಳ್ಳು ಸಂಗತಿಗಳನ್ನು ಹರಿಬಿಡುತ್ತಿರುವುದು ನಮ್ಮ ದೇಶ ಹಾಗೂ ಸೇನಾ ಪಡೆಗಳಿಗೆ ಹಾನಿ ಮಾಡುವ ಅಪಾಯವಿದೆ. ರಾಷ್ಟ್ರೀಯ ಭದ್ರತೆ ಹಾಗೂ ನೈತಿಕತೆಗೆ ಧಕ್ಕೆ ತರಲಿದೆ ಎಂದು ಮಾಜಿ ಸೈನಿಕರು ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಸೇನೆಯಲ್ಲಿ ಮುಸ್ಲಿಂ ರೆಜಿಮೆಂಟ್ ಎನ್ನುವುದು 1965ಕ್ಕೂ ಮುಂಚೆ ಅಥವಾ ನಂತರವಾಗಲೀ ಅಸ್ತಿತ್ವದಲ್ಲಿ ಇರಲಿಲ್ಲ. ಅನೇಕ ಮುಸ್ಲಿಂ ಯೋಧರು ವಿವಿಧ ರೆಜಿಮೆಂಟ್ಗಳಲ್ಲಿ ದೇಶ ಕಾಯುವ, ಹೋರಾಡುವ ಕಾರ್ಯದಲ್ಲಿ ತಮ್ಮನ್ನು ಮುಡಿಪಾಗಿಟ್ಟುಕೊಂಡಿದ್ದಾರೆ. ಮುಸ್ಲಿಂ ಯೋಧರು ಯುದ್ಧಕ್ಕೆ ನಿರಾಕರಿಸಿದ್ದರು ಎಂದು ಹಬ್ಬಿಸುವ ಮೂಲಕ ಸೇವೆಯಲ್ಲಿರುವ ಹಾಗೂ ನಿವೃತ್ತರಾದ ಎಲ್ಲ ಮುಸ್ಲಿಂ ಸೈನಿಕರ ನಿಷ್ಠೆಯನ್ನು ಪ್ರಶ್ನಿಸಲಾಗಿದೆ ಮತ್ತು ಅವರಿಗೆ ಕೆಟ್ಟ ಹೆಸರು ತರಲಾಗುತ್ತಿದೆ. ಇದು ಭಾರತೀಯ ಯೋಧರ ನೈತಿಕ ಬಲವನ್ನು ಕುಗ್ಗಿಸುವಂತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.