ಮಿಲನ್ನಿಂದ ವಾಪಸ್ ಬಂದ್ರಾ?: ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡಿದ ಎಎಪಿ
ನವದೆಹಲಿ, ಜನವರಿ 2: ಹೊಸ ವರ್ಷದ ಸಂದರ್ಭದಲ್ಲಿ ನನ್ನ ಹೃದಯ ರೈತರೊಂದಿಗೆ ಇದೆ ಎಂದು ಹೊಸ ವರ್ಷದ ಶುಭಾಶಯ ತಿಳಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಆಮ್ ಆದ್ಮಿ ಪಕ್ಷ ಲೇವಡಿ ಮಾಡಿದೆ. ವೈಯಕ್ತಿಕ ಪ್ರವಾಸಕ್ಕಾಗಿ ಇಟಲಿಗೆ ತೆರಳಿರುವ ರಾಹುಲ್ ಗಾಂಧಿ ಅವರ ಹೊಸ ವರ್ಷದ ಶುಭ ಹಾರೈಕೆಯ ಟ್ವೀಟ್ಗೆ ಪ್ರತಿಕ್ರಿಯೆಯಾಗಿ 'ನೀವು ಮಿಲನ್ನಿಂದ ವಾಪಸ್ ಬಂದ್ರಾ?' ಎಂದು ಎಎಪಿ ಪ್ರಶ್ನಿಸಿದೆ.
ಇಟಲಿ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದರು. ನಮಗಾಗಿ ತ್ಯಾಗ ಮಾಡುವವರು ಮತ್ತು ನಮ್ಮನ್ನು ರಕ್ಷಿಸುವವರು ಹಾಗೂ ನಾವು ಕಳೆದುಕೊಂಡವರನ್ನು ಸ್ಮರಿಸುತ್ತಿರುವುದಾಗಿ ಹೇಳಿದ್ದರು.
'ಘನತೆ ಮತ್ತು ಗೌರವಗಳೊಂದಿಗೆ ಅಸಮಾನ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ರೈತರು ಮತ್ತು ಕಾರ್ಮಿಕರ ಜತೆ ನನ್ನ ಹೃದಯವಿದೆ. ನಾವು ಕಳೆದುಕೊಂಡಿದ್ದು, ನಮಗಾಗಿ ತ್ಯಾಗ ಮಾಡಿದವರನ್ನು ಮತ್ತು ನಮ್ಮನ್ನು ರಕ್ಷಿಸುತ್ತಿರುವವರನ್ನು ನೆನಪಿಸಿಕೊಳ್ಳುತ್ತೇನೆ' ಎಂದು ಅವರು ಹೊಸ ವರ್ಷದ ಶುಭಾಶಯದ ಟ್ವೀಟ್ನಲ್ಲಿ ತಿಳಿಸಿದ್ದರು.
ಹೊಸ ವರ್ಷ ಆರಂಭ, ನನ್ನ ಹೃದಯ ರೈತರೊಂದಿಗಿದೆ ಎಂದ ರಾಹುಲ್
ಇದನ್ನು ತೀಕ್ಷ್ಣವಾಗಿ ಟ್ರೋಲ್ ಮಾಡಿರುವ ಎಎಪಿ, ಅವರ ಇಟಲಿ ಪ್ರವಾಸವನ್ನು ಟೀಕಿಸಿದೆ. 'ಮಿಲನ್ನಿಂದ ನೀವು ವಾಪಸ್ ಬಂದ್ರಾ?' ಎಂದು ಕೇಳುವ ಮೂಲಕ ರೈತರೊಂದಿಗೆ ನಾನಿದ್ದೇನೆ ಎಂಬ ಹೇಳಿಕೆಯನ್ನು ವ್ಯಂಗ್ಯವಾಡಿದೆ.