ಮುಂದಿನ ಸರದಿ ನನ್ನದಾ? ಹೆಣ್ಣುಮಕ್ಕಳ ಈ ಪ್ರಶ್ನೆಗೆ ಉತ್ತರ ಇದೆಯೇ?
ಹೈದರಾಬಾದ್ ನಲ್ಲಿ ನಡೆದ ಪಶುವೈದ್ಯೆ ಅತ್ಯಾಚಾರ, ಅನ್ಯಾಯದ ಸಾವು ಕಣ್ಣಮುಂದೆಯೇ ಇದೆ. ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ನಿರ್ಭಯಾ ಪ್ರಕರಣ ನಡೆದು ಏಳು ವರ್ಷಗಳು ಸರಿದು ಅದೂ ತಣ್ಣಗಾಗಿದೆ. ಪ್ರತಿ ಅತ್ಯಾಚಾರ ಪ್ರಕರಣ ನಡೆದಾಗಲೂ ಹೀಗೆ ಭುಗಿಲೆದ್ದು ಮತ್ತೆ ತಣ್ಣಗಾಗುವ ಕಾವು ಹೆಣ್ಣುಮಕ್ಕಳ, ಅವರ ಹೆತ್ತವರ ಎದೆಯನ್ನು ಮಾತ್ರ ಸುಡುತ್ತಲೇ ಇದೆ.
ಆ ರಾಜ್ಯ, ಈ ಜಿಲ್ಲೆ, ಆ ನಗರ ಎಲ್ಲಿ ಕೇಳಿದರೂ ಅತ್ಯಾಚಾರದ್ದೇ ಸುದ್ದಿ. ಪಶುವೈದ್ಯೆ ಅತ್ಯಾಚಾರ ನಡೆದ ನಂತರ ಎಲ್ಲೆಲ್ಲೂ ನ್ಯಾಯಕ್ಕಾಗಿ ಕೂಗು ಕೇಳಿಬರುತ್ತಿದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಎಲ್ಲೆಲ್ಲೂ ಮತ್ತೆ ಮತ್ತೆ ಅತ್ಯಾಚಾರದ ಸುದ್ದಿಗಳೂ ವರದಿಯಾಗುತ್ತಿವೆ. ನಿನ್ನೆಯೂ ಲಖನೌನಲ್ಲಿ ಮತ್ತೆ ಅಂಥದ್ದೇ ಒಂದು ಪ್ರಕರಣ ದಾಖಲಾಗಿದೆ. ಸಿಪಿಆರ್ ಎಫ್ ಸಿಬ್ಬಂದಿ ಮತ್ತು ನಿವೃತ್ತ ಜೈಲರ್ ಒಬ್ಬರ ಮಗನೇ ಸೇರಿ ಈ ಕೃತ್ಯ ನಡೆಸಿರುವುದು ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಯನ್ನು ಮುಂದಿಟ್ಟಿದೆ. ಮುಂದೆ ಈ ಸರದಿಯಲ್ಲಿ ನಾನಿರಬಹುದಾ? ಎಂಬ ಭಯ, ಆತಂಕ ಪ್ರತಿ ಹೆಣ್ಣು ಮಕ್ಕಳಲ್ಲೂ ಇಣುಕುವಂತೆ ಮಾಡಿದೆ.
ಸಿಪಿಆರ್ ಎಫ್ ಸಿಬ್ಬಂದಿ ಸೇರಿ 15ರ ಯುವತಿ ಮೇಲೆ ಅತ್ಯಾಚಾರ
ಸಿಆರ್ಪಿಎಫ್ ಯೋಧ ಹಾಗೂ ನಿವೃತ್ತ ಜೈಲರ್ ಮಗ ಸೇರಿದಂತೆ ನಾಲ್ವರು ನಿನ್ನೆ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ವರದಿಯಾಗಿದೆ. ಉತ್ತರ ಪ್ರದೇಶದ ಮಿರ್ಜಾಪುರದ ಹಳಿಯಾ ಎಂಬಲ್ಲಿ ಘಟನೆ ನಡೆದಿದ್ದು, ಆರೋಪಿಗಳಾದ ನಿವೃತ್ತ ಜೈಲರ್ ಮಗ ಜೈ ಪ್ರಕಾಶ್, ಸುಲ್ತಾನ್ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಆರ್ಪಿಎಫ್ ಕಾನ್ಸ್ ಟೆಬಲ್ ಮಹೇಂದ್ರ ಕುಮಾರ್ ಯಾದವ್, ಲವಕುಮಾರ್ ಪಾಲ್, ಗಣೇಶ್ ಪ್ರಸಾದ್ ಬಂಧಿತ ಆರೋಪಿಗಳಾಗಿದ್ದಾರೆ. ಪೊಲೀಸ್ ಲೋಗೋ ಇರುವ ಕಾರಿನಲ್ಲೇ ವಿದ್ಯಾರ್ಥಿನಿಯನ್ನು ಅಪಹರಿಸಿ ಕೃತ್ಯ ಎಸಗಿದ್ದಾರೆ.
ತೆಲಂಗಾಣ ಆಯ್ತು, ನೆರೆಯ ಆಂಧ್ರದಲ್ಲಿಯೂ ಕಾಮುಕರ ಅಟ್ಟಹಾಸ: ವೃದ್ಧೆಯ ಅತ್ಯಾಚಾರ, ಕೊಲೆ
ಶಬ್ದ ಕೇಳಬಾರದ್ದೆಂದು ಸೈರನ್ ಶಬ್ದ ಜೋರು ಮಾಡಿದ್ದರು
ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳಲ್ಲಿ ಜೈ ಪ್ರಕಾಶ್ ಸಹೋದರಿ ಮದುವೆಯ ನಂತರ ಹಳಿಯಾದಲ್ಲಿಯೇ ವಾಸವಿದ್ದ. ಪದೇ ಪದೇ ಸಹೋದರಿ ಮನೆಗೆ ಭೇಟಿ ನೀಡುತ್ತಿದ್ದ ಸಂದರ್ಭ ಕೆಲವು ತಿಂಗಳ ಹಿಂದೆ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಜೈ ಶಂಕರ್ ಬಾಲಕಿಗೆ ನಿನ್ನೆ ಕರೆ ಮಾಡಿ ಊರಿನ ಹೊರಗೆ ತನ್ನನ್ನು ಭೇಟಿಯಾಗುವಂತೆ ಹೇಳಿದ್ದಾನೆ. ಕಾರಿನಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಆ ಸ್ಥಳಕ್ಕೆ ತೆರಳಿದ್ದು, ನಾಲ್ವರೂ ಸೇರಿ ಅವಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ತಂದೆ ದೂರಿದ್ದಾರೆ. ಕಾರನ್ನು ನಿಲ್ಲಿಸಿದಾಗ ಬಾಲಕಿ ಅಳಲು ಪ್ರಾರಂಭಿಸಿದ್ದು, ಅಳುವಿನ ಶಬ್ದ ಕೇಳಬಾರದೆಂದು ಕಾರಿನ ಸೈರನ್ ಶಬ್ದವನ್ನು ಜೋರು ಮಾಡಿದ್ದಾರೆ.
ಒಂದೇ ವಾರದಲ್ಲಿ ಎಷ್ಟೊಂದು ಪ್ರಕರಣ
ಪಶುವೈದ್ಯೆ ಅತ್ಯಾಚಾರದ ಕುರಿತು ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತು. ಆದರೆ ಆ ಪ್ರಕರಣ ನಡೆದು ಒಂದೇ ವಾರದೊಳಗೆ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದವು. ಡಿಸೆಂಬರ್ ಮೂರರಂದು ಆಂಧ್ರಪ್ರದೇಶದ ಕಾಕಿನಾಡದ ಗ್ರಾಮವೊಂದರಲ್ಲಿ 60 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಅಂದೇ ಛತ್ತೀಸ್ ಗಢದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಸುಮಾರು 30 ವರ್ಷದ ಮಹಿಳೆಯನ್ನು ಅತ್ಯಾಚಾರ ಮಾಡಿ ಸುಡಲಾಗಿತ್ತು. ಕರ್ನಾಟಕದ ಕಲಬುರಗಿ, ದಾವಣಗೆರೆಯಲ್ಲೂ, ಏಳು, ಎಂಟು ವರ್ಷದ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದ ಪ್ರಕರಣ ಬಯಲಿಗೆ ಬಂದಿತ್ತು. ರಾಜಸ್ಥಾನದ ಟೊಂಕ್ ಜಿಲ್ಲೆಯಲ್ಲೂ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಆರು ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಸಮವಸ್ತ್ರದಲ್ಲಿನ ಬೆಲ್ಟ್ನಿಂದಲೇ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು.
ಛತ್ತೀಸ್ಗಢದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಮುಂದೆ ನನ್ನ ಸರದಿಯಾ?
ಈ ರೀತಿ ಮೇಲಿಂದ ಮೇಲೆ ಅತ್ಯಾಚಾರ, ಕೊಲೆಯಂಥ ಪ್ರಕರಣಗಳು ನಡೆಯುತ್ತಿರುವುದು ಹೆಣ್ಣು ಮಕ್ಕಳ, ಹೆತ್ತವರೆದೆಯಲ್ಲಿ ಆತಂಕವನ್ನು ಹೆಚ್ಚಿಸಿದೆ. ಪೊಲೀಸರು, ಕಾನೂನು ಸುರಕ್ಷತೆಯ ಭರವಸೆ ಕೊಟ್ಟರೂ ಈ ಆತಂಕ ಮಾತ್ರ ದೂರವಾಗಿಲ್ಲ. ಎಳೆಕೂಸನ್ನೂ ಬಿಡದ ಈ ಅತ್ಯಾಚಾರವೆಂಬ ಭೂತವನ್ನು ತೊಲಗಿಸುವುದಾದರೂ ಹೇಗೆ? ಮುಂದೆ ನನ್ನ ಸರದಿಯೇ ಎಂಬ ಹೆಣ್ಣು ಮಕ್ಕಳ ಆತಂಕವನ್ನು ನೀಗಿಸುವುದಾದರೂ ಹೇಗೆ?