ಕೋಲ್ಕತಾದಲ್ಲಿಯೂ ಪ್ರತಿಧ್ವನಿಸಿದ ರಾಷ್ಟ್ರವಿರೋಧಿ ಕೂಗು
ಕೋಲ್ಕತಾ, ಫೆಬ್ರವರಿ 16 : ರಾಷ್ಟ್ರವಿರೋಧಿ ಕೂಗುಗಳು ವಿಶ್ವವಿದ್ಯಾಲಯದಲ್ಲಿ ಮತ್ತೆ ಮೊಳಗಲು ಆರಂಭವಾಗಿವೆ. ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕೇಳಿಬಂದಿದ್ದ ರಾಷ್ಟ್ರವಿರೋಧಿ ಘೋಷಣೆಗಳು ಈಗ ಕೋಲ್ಕತಾದ ಜಾಧವಪುರ ವಿಶ್ವವಿದ್ಯಾಲಯದಲ್ಲಿಯೂ ಪ್ರತಿಧ್ವನಿಸುತ್ತಿವೆ.
ಮಂಗಳವಾರ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಮೆರವಣಿಗೆಯಲ್ಲಿ 2001ರ ಸಂಸತ್ ದಾಳಿಯ ರೂವಾರಿ, ಉಗ್ರ ಅಫ್ಜಲ್ ಗುರು ಪರವಾದ ಘೋಷಣೆಗಳು ಮುಗಿಲುಮುಟ್ಟಿವೆ. ರಾಜದ್ರೋಹದ ಆರೋಪ ಎದುರಿಸುತ್ತಿರುವ ಜೆಎನ್ಯು ನಾಯಕ ಕನ್ಹಯ್ಯ ಬಂಧನವನ್ನು ವಿರೋಧಿಸಿ ಈ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಪಂಜಿನ ಮೆರವಣಿಗೆ ನಡೆಸಿದ ನೂರಾರು ವಿದ್ಯಾರ್ಥಿಗಳು "ಅಫ್ಜಲ್ ಬೋಲೆ ಆಜಾದಿ, ಗಿಲಾನಿ ಬೋಲೆ ಆಜಾದಿ, ಚಿಕ್ನೆ ಲೆಂಗೆ ಆಜಾದಿ" ಮುಂತಾದ ಘೋಷಣೆಗಳನ್ನು ಕೂಗುತ್ತ ವಿಶ್ವವಿದ್ಯಾಲಯದಿಂದ ದಕ್ಷಿಣ ಕೋಲ್ಕತಾದಲ್ಲಿರುವ ಗೋಲ್ ಪಾರ್ಕ್ ವರೆಗೆ ಪಾದಯಾತ್ರೆ ನಡೆಸಿದರು. [ದೆಹಲಿಯಲ್ಲಿ ವಕೀಲರು VS ಪತ್ರಕರ್ತರು]
"ನಮಗೆ ಆರೆಸ್ಸೆಸ್ ನಿಂದ ಸ್ವಾತಂತ್ರ್ಯ ಬೇಕು, ಮೋದಿ ಸರಕಾರದಿಂದ ಸ್ವಾತಂತ್ರ್ಯ ಬೇಕು", "ಕಾಶ್ಮೀರ ಸ್ವಾತಂತ್ರ್ಯ ಬೇಕು ಎಂದು ಕೂಗಿದಾಗ ಮಣಿಪುರ ಕೂಡ ಸ್ವಾತಂತ್ರ್ಯ ಎಂದು ಕೂಗಿತ್ತು" ಎಂದು ಘೋಷಣೆ ಕೂಗುತ್ತ, ಚಪ್ಪಾಳೆ ಬಾರಿಸುತ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರ ದಂಡು ಪಾದಯಾತ್ರೆ ನಡೆಸಿತು. ಇಷ್ಟೆಲ್ಲಾ ನಡೆದರೂ ಯಾವ ವಿದ್ಯಾರ್ಥಿಯನ್ನೂ ಮಮತಾ ಸರಕಾರ ಬಂಧಿಸಿಲ್ಲ.
ಅಫ್ಜಲ್ ಗುರುವನ್ನು ನೇಣಿಗೇರಿಸಿದ್ದನ್ನು ವಿರೋಧಿಸಿ ಪ್ರತಿಭಟನೆಯನ್ನು ಆಯೋಜಿಸಿ, ರಾಷ್ಟ್ರವಿರೋಧಿ ಘೋಷಣೆಗಳನ್ನು ಫೆಬ್ರವರಿ 9ರಂದು ಕೂಗಿದ ಆರೋಪದ ಮೇಲೆ ಕನ್ಹಯ್ಯನನ್ನು ಬಂಧಿಸಲಾಗಿದೆ. ಅಫ್ಜಲ್ ಗುರು ಪರ ವಿದ್ಯಾರ್ಥಿಗಳನ್ನು ಬಡೆದೆಬ್ಬಿಸಿದ ಆರೋಪದ ಮೇಲೆ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಗಿಲಾನಿಯನ್ನು ಮಂಗಳವಾರ ಬಂಧಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. [ಉಪನ್ಯಾಸಕ ಎಸ್ಎಆರ್ ಗಿಲಾನಿ ಬಂಧನ]
ಅಫ್ಜಲ್ ಗುರುವನ್ನು 'ಹುತಾತ್ಮ' ಎಂದು ಕೂಗುತ್ತಿರುವ ಇಂಥ ರಾಷ್ಟ್ರದ್ರೋಹಿ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. [ಭಾರತ ಮಾತೆಯ ಮಡಿಲು ಸೇರಿದ ಯೋಧ ಮಹೇಶ್]