ಶಿಂಧೆ ಟೀಂಗೆ ಮತ್ತಷ್ಟು ಬಲ: ಮತ್ತೆ ನಾಲ್ವರು ಶಿವಸೇನೆ ಶಾಸಕರ ಬೆಂಬಲ
ಗುವಾಹಟಿ, ಜೂನ್ 23: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ನಿಧಾನವಾಗಿ ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಪರವಾಗಿ ವಾಲುತ್ತಿರುವಂತೆ ತೋರುತ್ತಿದೆ, ಪಕ್ಷದ ಇನ್ನೂ ನಾಲ್ವರು ಶಾಸಕರು ಗುರುವಾರ ಗುವಾಹಟಿ ತಲುಪಿದ್ದು ನಗರದ ಪಂಚತಾರಾ ಹೋಟೆಲ್ನಲ್ಲಿ ಮೊಕ್ಕಾಂ ಹೂಡಿರುವ ಬಂಡಾಯ ಶಾಸಕರನ್ನು ಸೇರಿಕೊಂಡಿದ್ದಾರೆ.
ಶಿವಸೇನೆಯ ಶಾಸಕರಾದ ಮಂಗೇಶ್ ಕುಡಾಲ್ಕರ್, ದೀಪಕ್ ವಸಂತ್ ಕೇಸರ್ಕರ್, ಸದಾ ಸರ್ವಾಂಕರ್ ಮತ್ತು ಸಂಜಯ್ ರಾಥೋಡ್, ಗುರುವಾರ ಗುವಾಹಟಿ ವಿಮಾನ ನಿಲ್ದಾಣ ತಲುಪಿ ಹೋಟೆಲ್ಗೆ ತೆರಳಿದ್ದಾರೆ.
ಮಹಾರಾಷ್ಟ್ರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತಾ? ಕಾನೂನು ಏನು ಹೇಳುತ್ತೆ? ಇಲ್ಲಿದೆ ಸಾಧ್ಯಾಸಾಧ್ಯತೆ
ಬಂಡಾಯ ಗುಂಪಿಗೆ ಹೊಸಬರು ಸೇರ್ಪಡೆಯಾಗುವುದರೊಂದಿಗೆ ಏಕನಾಥ್ ಶಿಂಧೆ ಜೊತೆಗಿರುವ ಶಾಸಕರ ಸಂಖ್ಯೆ 35ಕ್ಕೆ ಏರಿದೆ. ಶಿವಸೇನೆ ಶಾಸಕರ ಜೊತೆ ಏಳು ಜನ ಪಕ್ಷೇತರ ಶಾಸಕರೂ ಕೂಡ ಶಿಂಧೆಗೆ ಬೆಂಬಲ ಸೂಚಿಸಿದ್ದು, ಬಂಡಾಯ ಶಾಸಕರ ಜೊತೆ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಏಕನಾಥ್ ಶಿಂಧೆ ಮತ್ತು ಬೆಂಬಲಿಗ ಶಾಸಕರು ಶಕ್ತಿ ಪ್ರದರ್ಶಿಸಲು ಗುರುವಾರ ಹೋಟೆಲ್ನಲ್ಲಿ ಗ್ರೋಪ್ ಫೋಟೋಗೆ ಪೋಸ್ ನೀಡಿದ್ದಾರೆ. ನಂತರ ಶಾಸಕರು 'ಶಿಂಧೇ ತುಮ್ ಆಗೇ ಬಾಧೋ, ಹಮ್ ತುಮ್ಹಾರೆ ಸಾಥ್ ಹೈ' (ಶಿಂಧೆ ನೀವು ಮುಂದುವರಿಯಿರಿ, ನಾವು ನಿಮ್ಮೊಂದಿಗೆ ಇದ್ದೇವೆ) ಎಂದು ಕೂಗಿದ್ದಾರೆ. ಹೋಟೆಲ್ನಲ್ಲಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
'ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲಕ್ಕೆ ಬಿಜೆಪಿಯ ಅಧಿಕಾರ ದಾಹ ಕಾರಣ'
ಇನ್ನಷ್ಟು ಶಾಸಕರ ಬೆಂಬಲ ಸಾಧ್ಯತೆ
ಸಂಖ್ಯೆಗಳು ಹೆಚ್ಚಾಗಿದ್ದರೂ, ಶಿಂಧೆ ಅವರಿಗೆ ಇನ್ನೂ ಶಾಸಕರ ಕೊರತೆಯಿದೆ, ಶಿವಸೇನೆ ಶಾಸಕರನ್ನು ಪಕ್ಷದಿಂದ ಹೊರಹಾಕುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕಿದೆ ನಂತರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಬಲದೊಂದಿಗೆ ಸರ್ಕಾರ ರಚಿಸಲು ಹಕ್ಕು ಸಾಧಿಸಬಹುದಾಗಿದೆ.
ಇನ್ನೂ ಕೆಲವು ಶಿವಸೇನೆಯ ಶಾಸಕರು ಗುವಾಹಟಿಗೆ ಹಾರಲು ಮತ್ತು ಶಿಂಧೆ ಅವರಿಗೆ ಬೆಂಬಲ ಸೂಚಿಸಲು ಯೋಜಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಬಂಡಾಯ ಪಾಳಯಕ್ಕೆ ಇನ್ನೂ ಎಷ್ಟು ಶಾಸಕರು ಸೇರುತ್ತಾರೆ ಎನ್ನುವ ವಿವರಗಳು ಇನ್ನೂ ಲಭ್ಯವಾಗಿಲ್ಲ.
ಶಾಸಕರಿದ್ದ ಹೋಟೆಲ್ಗೆ ಮೇಘಾಲಯ ಸಿಎಂ ಭೇಟಿ
ಗುರುವಾರ ಮಧ್ಯಾಹ್ನ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹೋಟೆಲ್ಗೆ ಭೇಟಿ ನೀಡಿದ್ದರು. ಶಿಂಧೆ ಮತ್ತು ಇತರ ಶಾಸಕರನ್ನು ಭೇಟಿಯಾಗಲು ಅವರು ಅಲ್ಲಿಗೆ ಬಂದಿದ್ದರು ಎಂದು ಊಹಿಸಲಾಗಿತ್ತು. ಆದರೆ ಬಂಡಾಯ ಶಾಸಕರನ್ನು ಭೇಟಿಯಾದ ಬಗ್ಗೆ ಎಲ್ಲೂ ವರದಿಯಾಗಿಲ್ಲ.
ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಕೇಂದ್ರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಭಾಗವಾಗಿದೆ ಮತ್ತು ಮೇಘಾಲಯದಲ್ಲಿ ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚನೆ ಮಾಡಿದೆ.
ಟಿಎಂಸಿ ಕಾರ್ಯಕರ್ತರಿಂದ ಪ್ರತಿಭಟನೆ
ಬುಧವಾರ, ಸುಮಾರು 100 ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಮತ್ತು ಮುಖಂಡರು ಶಿಂಧೆ ಮತ್ತು ಇತರ ಶಾಸಕರು ತಂಗಿರುವ ಗುವಾಹಟಿ ಹೋಟೆಲ್ನ ಹೊರಗೆ ಧರಣಿ ನಡೆಸಿದರು.
ಶಾಸಕರ ವ್ಯಾಪಾರ ನಿಲ್ಲಿಸಿ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸಿ ಎಂದು ಪ್ರತಿಭಟನಾಕಾರರು ಹಿಡಿದ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದರು. 'ಪ್ರಜಾಪ್ರಭುತ್ವದ ಕೊಲೆ ನಿಲ್ಲಿಸಿ', 'ಶಾಸಕರ ಮಾರಾಟ ಮತ್ತು ಖರೀದಿ ನಿಲ್ಲಿಸಿ' ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದರು.
ಅಸ್ಸಾಂ ಸರ್ಕಾರದ ವಿರುದ್ಧವೂ ಆಕ್ರೋಶ
ಅಸ್ಸಾಂನ ರಾಜಕೀಯ ಇತಿಹಾಸದಲ್ಲಿ ನಮ್ಮ ರಾಜ್ಯವು ಶಾಸಕರ ಕುದುರೆ ವ್ಯಾಪಾರದ ಮೈದಾನವಾಗಿ ಮಾರ್ಪಟ್ಟಿರುವುದು ನಾಚಿಕೆಗೇಡಿನ ಘಟನೆ ಎಂದು ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.
ಅಸ್ಸಾಂನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಇದೆ. ಪ್ರವಾಹದಿಂದ ಲಕ್ಷಾಂತರ ಜನ ತೊಂದರೆಗೀಡಾಗಿದ್ದಾರೆ. ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರವು ರಾಜ್ಯದ ಪ್ರವಾಹ ಪೀಡಿತರಿಗೆ ಪರಿಹಾರ ನೀಡುವತ್ತ ಗಮನಹರಿಸಬೇಕು. ಆದರೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಇತರ ಬಿಜೆಪಿ ನಾಯಕರು ಪ್ರವಾಹ ಪರಿಹಾರ ಕೆಲಸ ಮಾಡುವ ಬದಲು ಬೇರೆ ರಾಜ್ಯದ ಶಾಸಕರ ಖರೀದಿ ಮತ್ತು ಮಾರಾಟದಲ್ಲಿ ತೊಡಗಿದ್ದಾರೆ ಎಂದು ಟಿಎಂಸಿ ರಾಜ್ಯ ಘಟಕದ ಮುಖ್ಯಸ್ಥ ರಿಪುನ್ ಬೋರಾ ಹೇಳಿದ್ದಾರೆ.