ಅಮರನಾಥ ಯಾತ್ರೆಗೆ ಏಪ್ರಿಲ್ 1ರಿಂದ ನೋಂದಣಿ ಆರಂಭ
ನವದೆಹಲಿ, ಮಾರ್ಚ್ 14: ಕೊರೊನಾವೈರಸ್ ಸೋಂಕು ಭೀತಿ ಹಿನ್ನಲೆಯಲ್ಲಿ ರದ್ದುಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭಗೊಳ್ಳುತ್ತಿದೆ ಎಂದು ಈ ಬೇಸಿಗೆಯ ಯಾತ್ರೆ ವಿವರವನ್ನು ಅಮರನಾಥ ದೇವಸ್ಥಾನ ಮಂಡಳಿಯ ಸಿಇಒ ಬುಲ್ ಪಾಠಕ್ ತಿಳಿಸಿದ್ದಾರೆ.
56 ದಿನಗಳ ಅಮರನಾಥ ಯಾತ್ರೆ ಜೂನ್ 28ರಿಂದ ಚಾಲನೆ ಸಿಗಲಿದ್ದು, ಏಪ್ರಿಲ್ 1ರಿಂದ ನೋಂದಣಿ ಆರಂಭವಾಗಲಿದೆ. 2020ನೇ ಸಾಲಿನಲ್ಲಿ ಜೂನ್ 23 ರಿಂದ ಆಗಸ್ಟ್ 3ರ ತನಕ ನಡೆಯಬೇಕಿದ್ದ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಲೆಫ್ಟಿನೆಂಟ್ ಗೌರ್ನರ್ ಜಿ. ಸಿ. ಮುರ್ಮು ಅಧ್ಯಕ್ಷತೆಯಲ್ಲಿ ನಡೆದ 40ನೇ ಸಮಿತಿ ಸಭೆಯಲ್ಲಿ ಯಾತ್ರೆ ಸ್ಥಗಿತಗೊಳಿಸುವ ತೀರ್ಮಾನ ಕೈಗೊಳ್ಳಲಾಗಿತ್ತು.
ಹಲವು ಯಾತ್ರಿಗಳ ಪ್ರಾಣ ಉಳಿಸಿದ ಬಸ್ ಚಾಲಕ ಸಲೀಂ
ಈಗ ಹಿಮಲಿಂಗದ ರಕ್ಷಣೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ) ನೀಡಿರುವ ಆದೇಶಗಳ ಅನುಸಾರ ಅಮರನಾಥ ದೇವಸ್ಥಾನ ಮಂಡಳಿಯ ಸದಸ್ಯರು ಸಭೆ ನಡೆಸಿ, ಯಾತ್ರಾ ದಿನಾಂಕ ನಿರ್ಧರಿಸಿದ್ದಾರೆ.
ಎರಡು ಮಾರ್ಗದಲ್ಲಿ ಸಾಗಲು ಅನುಮತಿ
ಅನಂತ್ ನಾಗ್ ಜಿಲ್ಲೆಯ ಪಹಲ್ ಗಾಮ್ ನಿಂದ ಹಾಗೂ ಗಂದರ್ಬಾಲ್ ಜಿಲ್ಲೆಯ ಬಾಲ್ಟಲ್ ಎರಡು ಮಾರ್ಗಗಳಿಂದ ಮಾತ್ರ ತೆರಳಲು ಅನುಮತಿ ನೀಡಲಾಗಿದೆ. ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬರುವ ಸಮುದ್ರ ಮಟ್ಟದಿಂದ 3,880 ಮೀಟರ್ ಎತ್ತರದ ಅಮರನಾಥ ಗುಹಾಂತರ ದೇವಾಲಯಕ್ಕೆ ಈ ಭಕ್ತರು ಭೇಟಿ ನೀಡಬಹುದಾಗಿದೆ. ಯಾತ್ರೆ ತೆರಳಲಿರುವ ಜಮ್ಮು-ಪಹಲ್ಗಾಮ್ ಮಾರ್ಗ ಮತ್ತು ಜಮ್ಮು-ಬಲ್ತಾಲ್ ರಸ್ತೆಯ ದಾರಿಯುದ್ಧಕ್ಕೂ 40,000 ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಸಿಆರ್ ಪಿಎಫ್ ಮತ್ತು ರಾಜ್ಯ ಪೊಲೀಸರನ್ನು ಪಹರೆ ನಿಲ್ಲಿಸಲಾಗುತ್ತದೆ.
ಕೊವಿಡ್ 19 ಪರೀಕ್ಷೆ ಕಡ್ಡಾಯ
ಅಮರನಾಥ ಯಾತ್ರೆ ನೋಂದಣಿ ಮಾರ್ಚ್ನಲ್ಲಿ ಆರಂಭವಾಗುತ್ತದೆ. ಆದರೆ, ಕೊರೊನಾ ಭೀತಿಯಿಂದ ವಿಳಂಬವಾಗಿದೆ. ಪೂರ್ಣ ವೇಳಾಪಟ್ಟಿಯನ್ನು ಮಂಡಳಿ, ಪ್ರಕಟಿಸಬೇಕಾಗಿದೆ. ಒಟ್ಟಾರೆ, ಯಾತ್ರೆ ವ್ಯವಸ್ಥೆ ಕುರಿತು ದೇವಸ್ಥಾನ ಮಂಡಳಿಯ ನಿಯಂತ್ರಣ ಕೊಠಡಿ/ ಸಹಾಯವಾಣಿ ಸಂಖ್ಯೆ 0194-2501679 ಅಥವಾ 09469722210 ಕರೆ ಮಾಡಬಹುದು. ಶ್ರೀನಗರದ ವಿಮಾನ ನಿಲ್ದಾಣದಲ್ಲಿ ನೋಂದಣಿ ಕಚೇರಿ ಆರಂಭಿಸಲಾಗಿದೆ. ಯಾತ್ರೆಗೆ ಹೊರಡುವ ಮುನ್ನ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಪ್ರಮಾಣ ಪತ್ರ ಪಡೆದಿರಬೇಕು. 13 ವರ್ಷವಯಸ್ಸಿಗಿಂತ ಚಿಕ್ಕವರು, 75 ವರ್ಷಕ್ಕೂ ಅಧಿಕ ವಯಸ್ಸಿನ ಹಿರಿಯರು, 6 ತಿಂಗಳ ಗರ್ಭಿಣಿಯರಿಗೆ ನೋಂದಣಿ ನಿರ್ಬಂಧಿಸಲಾಗಿದೆ ಎಂದು ಅಮರನಾಥ್ ಯಾತ್ರೆ ಮಂಡಳಿ ಪ್ರಕಟಿಸಿದೆ.
ಅಮರನಾಥ ಯಾತ್ರಿಕರಿಗೆ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸಿದ ಜಿಯೋ
ಮೂರು ಹಂತಗಳ ಭದ್ರತೆ ಒದಗಿಸಲಾಗುತ್ತದೆ
ಯಾತ್ರಿಕರ ಸುರಕ್ಷತೆಗಾಗಿ ಸೇನೆ, ಅರೆ ಸೇನಾಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳಿಂದ ಮೂರು ಹಂತಗಳ ಭದ್ರತೆ ಒದಗಿಸಲಾಗುತ್ತದೆ. ಮಾತ್ರವಲ್ಲದೆ ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ತಂಡಗಳನ್ನೂ ನಿಯೋಜಿಸಲಾಗುತ್ತದೆ. ಸುಮಾರು ಎರಡು ತಿಂಗಳ ಕಾಲ ನಡೆಯುತ್ತಿದ್ದ ಯಾತ್ರೆ ಈ ಬಾರಿ 14 ದಿನಗಳಿಗೆ ಸೀಮಿತವಾಗಿದ್ದರೂ ಸಾವಿರಾರು ಜನ ಭಕ್ತರು ಪಾಲ್ಗೊಂಡು ಹಿಮಲಿಂಗದ ದರ್ಶನ ಪಡೆದು ಪುನೀತರಾಗುತ್ತಾರೆ. ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಸಿಆರ್ ಪಿಎಫ್ ನೋಂದಣಿ ಕೇಂದ್ರವನ್ನು ತೆರೆದಿದ್ದು, ಅಲ್ಲೇ ಯಾತ್ರಿಗಳ ನೋಂದಣಿ ಮಾಡಿಕೊಂಡು, ಅವರ ವಾಹನಗಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ ಗಳನ್ನು ಜೋಡಿಸಲಾಗುತ್ತದೆ.
ಆಧುನಿಕ ಸುರಕ್ಷತಾ ವಿಧಾನ ಬಳಕೆ
ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ಪ್ರತಿ ವಾಹನಕ್ಕೂ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ ಗಳನ್ನು ಜೋಡಿಸಲಾಗಿದ್ದು, ನಿಯಂತ್ರಣ ಕೊಠಡಿಯಿಂದ ಇವುಗಳ ಮೇಲೆ ನಿಗಾ ಇಡಲಾಗುತ್ತದೆ. ಜೊತೆಗೆ ಎಲ್ಲಾ ವಾಹನಗಳನ್ನೂ ಬುಲೆಟ್ ಪ್ರೂಫ್ ಬೆಂಗಾವಲ ವಾಹನಗಳ ಮಧ್ಯದಲ್ಲಿ ಕೊಂಡೊಯ್ಯಲಾಗುತ್ತದೆ. ಯಾತ್ರಿಕರಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಎಲೆಕ್ಟ್ರೋಮ್ಯಾಗ್ನೆಟಿಕ್ ಚಿಪ್ ಇರುವ ವಾಹನಗಳು, ಬೈಕ್ ಗಳು, ಬುಲೆಟ್ ಪ್ರೂಫ್ ಎಸ್ ಯುವಿ ಪೊಲೀಸ್ ಬೆಂಗಾವಲು ವಾಹನಗಳು, ಬುಲೆಟ್ ಪ್ರೂಫ್ ಬಂಕರ್ ಗಳನ್ನು ಸ್ಥಾಪಿಸಲಾಗಿದೆ.
2019ರಲ್ಲಿ 3.42 ಲಕ್ಷ ಯಾತಾರ್ಥಿಗಳ ಭೇಟಿ
ಹಿಮಲಿಂಗ ಸ್ವರೂಪಿ ಅಮರನಾಥನ ದರ್ಶನ ಪಡೆಯಲು 2019ರಲ್ಲಿ 3.42 ಲಕ್ಷ ಯಾತ್ರಾರ್ಥಿಗಳ ಭೇಟಿ ನೀಡಿದ್ದರು . 2015ರಲ್ಲಿ ಅತ್ಯಧಿಕ 3.52 ಲಕ್ಷ ಮಂದಿ ಯಾತ್ರೆಗೆ ಬಂದಿದ್ದರು ಎಂದು ಅಂಕಿ ಅಂಶದಿಂದ ತಿಳಿದು ಬಂದಿದೆ. ಮಿಕ್ಕಂತೆ 2016ರಲ್ಲಿ 3.20 ಲಕ್ಷ, 2017ರಲ್ಲಿ 2.60 ಲಕ್ಷ ಹಾಗೂ 2018ರಲ್ಲಿ 2.85 ಲಕ್ಷ ಮಂದಿ ಭೇಟಿ ನೀಡಿದ್ದಾರೆ.
ಗ್ರೂಪ್ ವಿಮೆ ಮೌಲ್ಯ 3 ಲಕ್ಷ ರಿಂದ 5 ಲಕ್ಷಕ್ಕೇರಿಸಲಾಗಿದೆ. ಕುದುರೆಗಳ ವಿಮೆ 30 ಸಾವಿರ ರುನಿಂದ 50 ಸಾವಿರ ರುಗೇರಿಸಲಾಗಿದೆ. ಪೂಜಾರಿಗಳ ಪ್ರತಿದಿನದ ದಿನಭತ್ಯೆ 1000 ರು ನಿಂದ 1500 ರುಗೇರಿಸಲಾಗಿದೆ ಎಂದು ಸಮಿತಿ ಹೇಳಿದೆ.