ಸಿಬಿಐ ಕಾಲಿಡದಂತೆ ನಿಷೇಧಿಸುವ ಅಧಿಕಾರ ರಾಜ್ಯಗಳಿಗೆ ಇದೆಯೇ? ಇಲ್ಲಿದೆ ಮಾಹಿತಿ
ನವದೆಹಲಿ, ಫೆಬ್ರವರಿ 4: ಶಾರದಾ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಬಂಧಿಸಲು ತೆರಳಿದ್ದ ಸಿಬಿಐ ಅಧಿಕಾರಿಗಳನ್ನೇ ಪೊಲೀಸರು ಬಂಧಿಸಿದ ಘಟನೆ ದೇಶದಾದ್ಯಂತ ಸಂಚಲನ ಮೂಡಿಸಿದೆ. ಈ ಘಟನೆ ದೇಶ ಹೊಸತಾದರೂ, ಸಿಬಿಐಅನ್ನು ವಿರೋಧಿಸುವ ಅನೇಕ ಘಟನೆಗಳು ನಡೆದಿವೆ.
ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲದೆ ಸಿಬಿಐ ಅಧಿಕಾರಿಗಳು ರಾಜ್ಯಕ್ಕೆ ಕಾಲಿಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕೂಡ ಇದೇ ನೀತಿಯನ್ನು ಅನುಸರಿಸಿದ್ದರು. ಈಗ ಅತ್ಯಂತ 'ಪವರ್ ಫುಲ್' ಎಂದು ಭಾವಿಸಿದ್ದ ಸಿಬಿಐಅನ್ನೇ ಪಶ್ಚಿಮ ಬಂಗಾಳ ಬಂಧಿಸಿದೆ.
ದೀದಿ-ಸಿಬಿಐ ವಿವಾದ LIVE: ಬೆಂಬಲಕ್ಕೆ ನಿಂತ ವಿಪಕ್ಷಗಳು
ಈ ಮೂಲಕ ಸಿಬಿಐನ ಅಧಿಕಾರ ಮತ್ತು ರಾಜ್ಯ ಸರ್ಕಾರದ ಸಂಬಂಧಗಳ ಕುರಿತಾದ ಚರ್ಚೆಗೆ ನಾಂದಿ ಹಾಡಿದೆ.
ರಾಜ್ಯ ಸರ್ಕಾರಗಳು ಯಾವುದೇ ಸಮಯದಲ್ಲಿ ಬೇಕಾದರೂ ತನ್ನ ರಾಜ್ಯದಲ್ಲಿ ತನಿಖೆ ನಡೆಸಲು ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆದುಕೊಳ್ಳಬಹುದು. ಆಗ ತನಿಖೆ ಅಗತ್ಯ ಎನಿಸಿದ್ದರೆ ಸಿಬಿಐ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮೊರೆ ಹೋಗಬಹುದು.
ಅನುಮತಿ ವಾಪಸ್ ಪಡೆದಿದ್ದ ಆಂಧ್ರ, ಬಂಗಾಳ
ಕೇಂದ್ರ ಸರ್ಕಾರದ ಕಾಯ್ದೆಗಳ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ 187 ಮತ್ತು 63ನೇ ಸೆಕ್ಷನ್ಸ್ ಮೂಲಕ ರಾಜ್ಯಗಳಲ್ಲಿನ ಅಪರಾಧ ಮತ್ತು ಸಂಚುಗಳ ತನಿಖೆ ನಡೆಸಲು ನೀಡಿದ್ದ ಅನುಮತಿಯನ್ನು ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಹಿಂದಕ್ಕೆ ಪಡೆದುಕೊಂಡಿದ್ದು, ತನ್ನ ಗಡಿಯಲ್ಲಿ ಸಿಬಿಐ ಮತ್ತು ಇತರೆ ಕೇಂದ್ರ ಸಂಸ್ಥೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಕಟಿಸಿದ್ದವು.
ತಮ್ಮ ರಾಜಕೀಯ ವಿರೋಧಿಗಳನ್ನು ಮುಗಿಸಲು ಸಿಬಿಐಅನ್ನು ಎನ್ಡಿಎ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಪಶ್ಚಿಮ ಬಂಗಾಳ ಕೂಡ ಇದೇ ಆರೋಪ ಮಾಡಿತ್ತು.
ಡಿಎಸ್ಪಿಇ ಕಾಯ್ದೆಯಡಿ ಅವಕಾಶವಿಲ್ಲ
ಸಿಬಿಐ, ದೆಹಲಿ ವಿಶೇಷ ಪೊಲೀಸ್ ಇಲಾಖೆ (ಡಿಎಸ್ಪಿಇ) ಕಾಯ್ಡೆಯಡಿ ಕೆಲಸ ನಿರ್ವಹಿಸುತ್ತದೆ. ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅನುಮತಿ ಇಲ್ಲದೆ ಸಿಬಿಐ ದೆಹಲಿಯ ಹೊರಗಿನ ಪ್ರಕರಣಗಳ ತನಿಖೆ ನಡೆಸುವುದನ್ನು ಈ ಕಾಯ್ದೆ ನಿರ್ಬಂಧಿಸುತ್ತದೆ.
2013ರಲ್ಲಿ ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದ ಸಿಬಿಐ, ಸಂಸ್ಥೆಯ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಧಿಸುವ ಈ ಅಂಶವನ್ನು ಕಾನೂನಿನಿಂದ ತೆಗೆದು ಹಾಕುವಂತೆ ಕೋರಿತ್ತು.
ಪಟ್ಟು ಬಿಡದ ದೀದಿ: ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐ
ಹತ್ತು ರಾಜ್ಯಗಳಿಂದ ಮಾತ್ರ ಪೂರ್ಣ ಸಮ್ಮತಿ
ಹತ್ತು ರಾಜ್ಯಗಳು ಮಾತ್ರ ಕೇಂದ್ರ ಸರ್ಕಾರದ ಉದ್ಯೋಗಿಗಳ ವಿರುದ್ಧದ ಪ್ರಕರಣದ ತನಿಖೆ ನಡೆಸಲು ಸಾಮಾನ್ಯ ಸಮ್ಮತಿಯನ್ನು ನೀಡಿವೆ. ಇನ್ನು ಉಳಿದ ರಾಜ್ಯಗಳಿಂದ ಪ್ರಕರಣಗಳ ಆಧಾರದಲ್ಲಿ ಅನುಮತಿ ಪಡೆದುಕೊಳ್ಳಬೇಕಾಗಿದೆ ಎಂದು ಸಿಬಿಐ ತಿಳಿಸಿತ್ತು.
ಆದರೆ, ಕೋರ್ಟ್ ತೀರ್ಪಿನಂತೆ ಈಗ ಸಿಬಿಐ ಸುಪ್ರೀಂ ಮತ್ತು ಹೈಕೋರ್ಟ್ಗಳ ನಿರ್ದೇಶನವಿದ್ದರೆ ಯಾವುದೇ ರಾಜ್ಯದಲ್ಲಿ ತನಿಖೆ ನಡೆಸಬಹುದು.
ಇದರ ಅರ್ಥ ದೆಹಲಿಯ ಹೊರಭಾಗದಲ್ಲಿ ನಡೆಯುವ ಅಪರಾಧಗಳ ತನಿಖೆಯನ್ನು ಸಿಬಿಐ ಸ್ವಯಂ ಪ್ರೇರಣೆಯಿಂದ ನಡೆಸುವಂತಿಲ್ಲ.
ಪಶ್ಚಿಮ ಬಂಗಾಳದ ಘಟನೆ ತುರ್ತು ಪರಿಸ್ಥಿತಿ ದಿನ ನೆನಪಿಸುತ್ತೆ: ದೇವೇಗೌಡ
ರಾಜ್ಯ ಸರ್ಕಾರದ ಅನುಮತಿ ಅಗತ್ಯ
ಒಂದು ವೇಳೆ ರಾಜ್ಯಗಳು ಸಿಬಿಐ ತನಿಖೆಗೆ ನಿರಾಕರಿಸಿದರೆ, ಮಹತ್ವದ ತನಿಖೆಗೆ ಮತ್ತು ದಾಳಿಗಳನ್ನು ನಡೆಸಲು ಸಿಬಿಐ ಕೋರ್ಟ್ನ ಅನುಮತಿ ಪಡೆಯುವುದು ಅಗತ್ಯ. ಸಿಬಿಐಗೆ ತನಿಖೆ ನಡೆಸಲು ರಾಜ್ಯ ಪೊಲೀಸರ ಸಹಕಾರ ಬೇಕಾಗಿರುತ್ತದೆ. ಆದರೆ, ರಾಜ್ಯ ಅದಕ್ಕೆ ನಿರಾಕರಿಸಿದರೆ ಆ ಸಹಕಾರವೂ ಸಿಗುವುದಿಲ್ಲ.
ಸಿಬಿಐ ಅನ್ನು ಕೇಂದ್ರ ಸರ್ಕಾರವು ಕಿರುಕುಳ ನೀಡಲೆಂದೇ ಬಳಸಿಕೊಳ್ಳುತ್ತಿದೆ ಎಂದು ವಿವಿಧ ರಾಜ್ಯ ಸರ್ಕಾರಗಳು ಆರೋಪಿಸುತ್ತಲೇ ಇವೆ. ತಮ್ಮ ವಿರುದ್ಧದ ಸಿಬಿಐ ತನಿಖೆಯನ್ನು ರದ್ದುಗೊಳಿಸಲು ಸಹ ಆರೋಪಿ ರಾಜಕಾರಣಿಗಳು ಕಾನೂನು ಅವಕಾಶದ ಮೊರೆ ಹೋಗುತ್ತಿರುತ್ತಾರೆ.
ಕಮಿಷನರ್ ಮನೆಗೆ ಬರಲು ಎಷ್ಟು ಧೈರ್ಯ : ಸಿಬಿಐ ವಿರುದ್ಧ ದೀದಿ ಕೆಂಡಾಮಂಡಲ